ಕೆಂಪುಕೋಟೆಯಲ್ಲಿ ಹಾರಿದ ರೈತರ ಧ್ವಜ: ದಿಕ್ಕುತಪ್ಪಿದ ಟ್ರ್ಯಾಕ್ಟರ್ ಪರೇಡ್, ಸದ್ಯ ಪರಿಸ್ಥಿತಿ ಔಟ್ ಆಫ್ ಕಂಟ್ರೋಲ್
ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ದೇಶವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ ಮಾಡುವ ಪರಿಪಾಠ ದಶಕಗಳಿಂದ ನಡೆದುಕೊಂಡು ಬರುತ್ತಿದೆ. ಆದರೆ, ಗಣರಾಜ್ಯೋತ್ಸವದ ದಿನದಂದು ಕೆಂಪುಕೋಟೆಯಲ್ಲಿ ಕಿಶಾನ್ ಯೂನಿಯನ್ ಒಂದರ ಧ್ವಜವನ್ನು ಪ್ರತಿಭಟನಾಕಾರು ಹಾರಿಸಲು ಯಶಸ್ವಿಯಾಗಿದ್ದಾರೆ.
ದೆಹಲಿ ತಲುಪುವ ಉತ್ತರಪ್ರದೇಶ, ಹರ್ಯಾಣ ಮತ್ತು ಪಂಜಾಬ್ ಗಡಿಯಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು, ಟ್ರ್ಯಾಕ್ಟರ್ ಪರೇಡ್ ಮೂಲಕ ರಾಜಧಾನಿಗೆ ತಲುಪಿದ್ದಾರೆ. ಪ್ರತಿಭಟನೆ ಶಾಂತ ರೀತಿಯಲ್ಲಿ ನಡೆಯದೇ ಹಿಂಸಾಚಾರಕ್ಕೆ ತಿರುಗಿದೆ.
ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಪೊಲೀಸರ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಪ್ರಯತ್ನ
ಹಿಂಸಾಚಾರ ನಡೆಸುತ್ತಿರುವ ರೈತರು ನಮ್ಮ ಸಂಘಟನೆಯವರಲ್ಲ ಎಂದು ಬಹುತೇಕ ಎಲ್ಲಾ ಕಿಸಾನ್ ಯೂನಿಯನ್ ಗಳು ಹೇಳುತ್ತಿರುವುದರಿಂದ, ಈ ಟ್ರ್ಯಾಕ್ಟರ್ ಪರೇಡ್ ನಲ್ಲಿ ಪಟ್ಟಭದ್ರ ಹಿತಾಶಕ್ತಿಗಳು ನುಸುಳಿಕೊಂಡಿವೆಯೇ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 72ನೇ ಗಣರಾಜ್ಯೋತ್ಸವ ಸಂಭ್ರಮ
ದೆಹಲಿಯ ಹೊರಭಾಗದಲ್ಲಿ ರೈತರು ಶಾಂತರೀತಿಯಲ್ಲಿ, ರೂಟ್ ಮ್ಯಾಪ್ ಪ್ರಕಾರ ಪರೇಡ್ ನಡೆಸಬೇಕಾಗಿತ್ತು, ದೆಹಲಿ ಪೊಲೀಸರಿಗೆ ರೈತರು ಕೊಟ್ಟ ವಾಗ್ದಾನ ಕೂಡಾ ಇದೇ ಆಗಿತ್ತು. ಆದರೆ, ಸದ್ಯ ದೆಹಲಿಯಲ್ಲಿ ನಡೆಯುತ್ತಿರುವುದೇ ಬೇರೆ. ಪರಿಸ್ಥಿತಿ ಕೈಮೀರಿ ಹೋಗುವ ಹಂತ ತಲುಪುತ್ತಿದೆ. ಇದಕ್ಕೆ ಕಾರಣವೇನು?
ಗಣತಂತ್ರ ದಿನದ ಪರೇಡ್
ಗಣತಂತ್ರ ದಿನದ ಪರೇಡ್ ಮುಗಿದ ನಂತರ ದೆಹಲಿ ಹೊರಭಾಗದಲ್ಲಿ ರೈತರಿಗೆ ಟ್ರ್ಯಾಕ್ಟರ್ ಪರೇಡ್ ನಡೆಸಲು ಪೊಲೀಸರು ಷರತ್ತುಬದ್ದ ಅನುಮತಿಯನ್ನು ನೀಡಿದ್ದರು. ಆದರೆ, ಹನ್ನೊಂದು ಗಂಟೆಯಾದರೂ ಪರೇಡ್ ಆರಂಭಿಸಲು ಪೊಲೀಸರು ಅನುಮತಿ ನೀಡಲಿಲ್ಲ. ಇದರಿಂದ ಒಂದು ಹಂತಕ್ಕೆ ರೈತರು ತಾಳ್ಮೆ ಕಳೆದುಕೊಂಡರು ಎಂದು ಹೇಳಲಾಗುತ್ತಿದೆ.
ದೆಹಲಿ ನಗರ ಪ್ರವೇಶಿಸಲು ಮುಂದಾದ ರೈತರು
ಇದಾದ ನಂತರ ದೆಹಲಿ ನಗರ ಪ್ರವೇಶಿಸಲು ಮುಂದಾದ ರೈತರ ಮೇಲೆ ಅಶ್ರುವಾಯ ಪ್ರಯೋಗಿಸಿದ್ದು, ಒಂದೊಂದೇ ಟ್ರ್ಯಾಕ್ಟರ್ ಹೋಗಲು ನಿರ್ಬಂಧ ವಿಧಿಸಿದ್ದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಕಾರಣವಾಯಿತು ಎಂದು ಕೆಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ಕೆಲವು ರೈತರು ಈ ಪರೇಡ್ ಗೆ ಈ ರೀತಿಯ ಪೂರ್ವತಯಾರಿ ಮಾಡಿಕೊಂಡು ಬಂದಿರುವುದು ಆಶ್ಚರ್ಯವನ್ನು ಉಂಟು ಮಾಡುತ್ತಿದೆ.
ಕೆಂಪುಕೋಟೆಯ ಧ್ವಜಸ್ಥಂಭವನ್ನು ಏರಿದ ಕಿಸಾನ್ ಯೂನಿಯನ್ ಸಂಘಟನೆ
ಕೆಂಪುಕೋಟೆಯ ಧ್ವಜಸ್ಥಂಭವನ್ನು ಏರಿದ ಕಿಸಾನ್ ಯೂನಿಯನ್ ಸಂಘಟನೆಯ ಪ್ರತಿಭಟನಾಕಾರರು ತಮ್ಮ ಧ್ವಜವನ್ನು ಹಾರಿಸಿದ್ದಾರೆ. ರಾಷ್ಟ್ರಧ್ವಜದ ಜೊತೆಗೆ ಕಿಸಾನ್ ಯೂನಿಯನ್ ಮತ್ತು ಇನ್ನೊಂದು ಸಂಘಟನೆಯ ಧ್ವಜವೂ ಹಾರಾಡುತ್ತಿದೆ. ನೂರಾರು ಸಂಖ್ಯೆಯಲ್ಲಿ ಕೆಂಪುಕೋಟೆಯಲ್ಲಿ ಜಮಾಯಿಸಿರುವ ರೈತರನ್ನು ಪೊಲೀಸರು ತಹಬಂದಿಗೆ ತರಲು ಒದ್ದಾಡುತ್ತಿದ್ದಾರೆ.
ದಿಕ್ಕುತಪ್ಪಿದ ಟ್ರ್ಯಾಕ್ಟರ್ ಪರೇಡ್, ಹಿಂಸಾಚಾರ!
ಕತ್ತಿ, ದೊಣ್ಣೆ, ಕಲ್ಲು, ರಾಡ್ ಮುಂತಾದವುಗಳನ್ನು ರೈತರು ಪರೇಡ್ ವೇಳೆ ತಂದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೆಂಪುಕೊಟೆಯಲ್ಲಿ ರಾಷ್ಟ್ರಧ್ವಜ ಹೊರತು ಪಡಿಸಿ ಬೇರೆ ಧ್ವಜ ಹಾರಾಡುವಂತಿಲ್ಲ, ಆ ಇತಿಹಾಸವನ್ನು ಪ್ರತಿಭಟನಾಕಾರರು ಧಿಕ್ಕರಿಸಿದ್ದಾರೆ. ಸದ್ಯ, ಕೆಂಪುಕೋಟೆ ಧ್ವಜಸ್ಥಂಭ ಪ್ರದೇಶವನ್ನು ಪೊಲೀಸರು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರೂ, ಭಾರೀ ಪ್ರತಿಭಟನೆ ಮುಂದುವರಿದಿದೆ. ಒಟ್ಟಿನಲ್ಲಿ, ಶಾಂತರೀತಿಯಿಂದ ನಡೆಯಬೇಕಿದ್ದ ಪ್ರತಿಭಟನೆ ಹಿಂಸಾಚಾರದ ಮೂಲಕ ದಿಕ್ಕುತಪ್ಪುತ್ತಿದೆ.