ಕೃಷಿ ಕಾಯ್ದೆ ವಿರುದ್ಧ ಹೋರಾಟ: ಕೇಂದ್ರದ ಆಹ್ವಾನ ತಿರಸ್ಕರಿಸಿದ ರೈತರು!
ನವದೆಹಲಿ, ನವೆಂಬರ್.29: ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಸಂಧಾನ ಮಾತುಕತೆ ಆಹ್ವಾನವನ್ನು ನಿರಾಕರಿಸಿದ್ದಾರೆ. ಕೇಂದ್ರ ಸರ್ಕಾರವು ಯಾವುದೇ ಷರತ್ತುಗಳನ್ನು ವಿಧಿಸದೇ ಮುಕ್ತ ಮನಸ್ಸಿನಿಂದ ಚರ್ಚೆಗೆ ಸಿದ್ಧವಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಮನ್ ಕೀ ಬಾತ್ 71ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ, ಹೊಸ ಕೃಷಿ ಕಾಯ್ದೆಯಿಂದ ಭಾರತೀಯ ರೈತರಿಗೆ ಸಾವಿರಾರು ಅವಕಾಶಗಳ ಬಾಗಿಲು ತೆರೆಯಲಿದೆ. ಹಲವು ವರ್ಷಗಳಿಂದಲೂ ರೈತರ ಬೇಡಿಕೆ ಈಡೇರಿಸುವ ಬಗ್ಗೆ ಭರವಸೆ ನೀಡಲಾಗುತ್ತಿತ್ತು. ಅಂತಿಮವಾಗಿ ನಾವು ಆ ಬೇಡಿಕೆಗಳನ್ನು ಪೂರೈಸಿದ್ದೇವೆ ಎಂದು ಮೋದಿ ಹೇಳಿದ್ದರು. ಇದರ ಬೆನ್ನಲ್ಲೇ ಪ್ರತಿಭಟನಾನಿರತ ರೈತರು ನಡೆಸಿದ ಮಹತ್ವದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಸಿಂಘು ಗಡಿಯಲ್ಲಿ ಪ್ರತಿಭಟನೆ ಮುಂದುವರೆಸಿದ ರೈತರು
ರೈತರ ಜೊತೆಗೆ ಸಂಧಾನ ಮಾತುಕತೆ ನಡೆಸುವುದಕ್ಕೆ ಕೇಂದ್ರ ಸರ್ಕಾರವು ಷರತ್ತುಗಳನ್ನು ವಿಧಿಸುತ್ತಿದೆ. ಸದ್ಯಕ್ಕೆ ನಾವು ದೆಹಲಿಯ ಗಡಿ ಪ್ರದೇಶದಲ್ಲಿದ್ದೇವೆ ಎಂದು ಸ್ವರಾಜ್ ಇಂಡಿಯಾದ ಮುಖ್ಯಸ್ಥ ಹಾಗೂ 7 ಮಂದಿ ರೈತ ಮುಖಂಡರ ಸಮಿತಿ ಸದಸ್ಯ ಯೋಗೇಂದ್ರ ಯಾದವ್ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಷರತ್ತು ವಿಧಿಸುವುದನ್ನು ಮೊದಲು ಬಿಡಲಿ ಎಂದ ರೈತರು
ಕೇಂದ್ರ ಸರ್ಕಾರವು ಮೊದಲು ಷರತ್ತು ವಿಧಿಸುವುದನ್ನು ಬಿಡಬೇಕು. ಕೃಷಿ ಸಂಬಂಧಿತ ಕಾಯ್ದೆಗಳಿಂದ ರೈತರಿಗೆ ಅನುಕೂಲ ಆಗಲಿವೆ ಎಂದು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಅದರ ಬದಲಿಗೆ ತಮ್ಮ ಪ್ರಸ್ತಾವನೆಯನ್ನು ಹಿಡಿದುಕೊಂಡು ನೇರವಾಗಿ ಚರ್ಚೆಗೆ ಬರಲಿ. ನವದೆಹಲಿಯಾದ್ಯಂತ ನಿಯೋಜಿಸಲ್ಪಟ್ಟಿರುವ ಭದ್ರತಾ ವ್ಯವಸ್ಥೆಯನ್ನು ನೋಡಿದರೆ ರೈತರ ಪ್ರತಿಭಟನೆ ಬಗ್ಗೆ ಭಯೋತ್ಪಾದನೆ ಮತ್ತು ಭಯದ ವಾತಾವರಣ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರೊಂದಿಗೆ ಸಂಧಾನ ಸಭೆಗೆ ಸೈ ಎಂದಿದ್ದ ಅಮಿತ್ ಶಾ
ಕೃಷಿ ಸಂಬಂಧಿತ ಕಾಯ್ದೆಗೆ ಸಂಬಂಧಿಸಿದಂತೆ ರೈತರೊಂದಿಗೆ ಚರ್ಚೆ ನಡೆಸುವುದಕ್ಕೆ ಕೇಂದ್ರ ಸರ್ಕಾರವು ಸದಾ ಸಿದ್ಧವಾಗಿದೆ. ಹೊಸ ಕಾಯ್ದೆಯಿಂದ ರೈತರಿಗೆ ಎದುರಾಗುವ ಸಮಸ್ಯೆ ಮತ್ತು ತೊಂದರೆಗಳೇನು ಎಂಬುದನ್ನು ಹೇಳುವುದಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಆದರೆ ಅದಕ್ಕೂ ಮೊದಲು ರೈತರು ತಮ್ಮ ಪ್ರತಿಭಟನೆಗೆ ನಿಗದಿಪಡಿಸಿದ ಸ್ಥಳದಲ್ಲಿ ನಡೆಸುವಂತೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಷರತ್ತು ವಿಧಿಸಿದ್ದರು.
ನಾಲ್ಕು ದಿನಗಳಲ್ಲೇ ಸಂಧಾನ ಸಭೆಯ ಪ್ರಸ್ತಾಪ
ಕೃಷಿ ಸಂಬಂಧಿತ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ದೆಹಲಿ ಚಲೋ ಹೋರಾಟ ಕೈಬಿಡುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿಕೊಂಡಿದ್ದಾರೆ. ಮುಂದಿನ ವಾರದಲ್ಲಿ ಕೃಷಿ ಸಂಬಂಧಿತ ಕಾಯ್ದೆ ಸಂಬಂಧ ರೈತರ ಜೊತೆಗೆ ಸಂಧಾನ ಸಭೆ ನಡೆಸಲಾಗುತ್ತದೆ. ಕೇಂದ್ರ ಸರ್ಕಾರ ರೈತರ ಜೊತೆಗೆ ಚರ್ಚಿಸುವುದಕ್ಕೆ ಯಾವಾಗಲೂ ಸಿದ್ಧವಾಗಿದ್ದು, ಡಿಸೆಂಬರ್.03 ರಂದು ರೈತರೊಂದಿಗಿನ ಸಭೆ ಕರೆಯಲಾಗುವುದು. ರೈತ ಸಂಘಟನೆಗಳನ್ನು ಮತ್ತೊಂದು ಸುತ್ತಿನ ಶಾಂತಿ ಮಾತುಕತೆಗೆ ಆಹ್ವಾನಿಸಲಾಗುತ್ತದೆ. ಚಳಿಗಾಲದ ನಡುವೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಪ್ರಭಾವ ಹೆಚ್ಚಾಗುತ್ತಿರುವ ಹಿನ್ನೆಲೆ ಜಾಗೃತಿ ವಹಿಸಬೇಕಿದೆ. ಈ ನಿಟ್ಟಿನಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿದ್ದರು.
ರೈತರ ವಿರೋಧಕ್ಕೆ ಕಾರಣವಾದ ಕಾಯ್ದೆಗಳು
ಕಳೆದ ಸಪ್ಟೆಂಬರ್.27ರಂದು ಕೇಂದ್ರ ಸರ್ಕಾರವು ಮೂರು ಕೃಷಿ ಸಂಬಂಧಿತ ಕಾಯ್ದೆಗಳ ಜಾರಿಗೊಳಿಸಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದರು. ರೈತರ ಆಕ್ರೋಶಕ್ಕೆ ಕಾರಣವಾಗಿರುವ ಮತ್ತು ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಆ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ
2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ
3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ