ರೈತರ ಪ್ರತಿಭಟನೆ: ದೆಹಲಿ ಗಡಿಗಳಲ್ಲಿ ವಾಹನ ಸಂಚಾರ ಮಾರ್ಗ ಬದಲು
ನವದೆಹಲಿ,ಮಾರ್ಚ್ 1: ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದಾಗಿ ವಾಹನಗಳ ಸಂಚಾರ ಮಾರ್ಗ ಬದಲಾಯಿಸಲಾಗಿದೆ. ಹರ್ಯಾಣ,ಉತ್ತರಪ್ರದೇಶಕ್ಕೆ ತೆರಳುವ ಮಾರ್ಗವನ್ನು ಬಂದ್ ಮಾಡಲಾಗಿದೆ. ರೈತರು ಮೂರು ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶದಿಂದ ದೆಹಲಿಗೆ ಪ್ರಯಾಣಿಸುವವರು ಗಾಜಿಪುರ ಗಡಿಯನ್ನು ದಾಟಲು ಸಾಧ್ಯವಿಲ್ಲ, ಆನಂದ್ ವಿಹಾರ್,ಡಿಎನ್ಡಿ ಕಾಲೋನಿ, ಅಪ್ಸರಾ ಹಾದುಹೋಗುವ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ದಾರಿ ಗೊತ್ತಿಲ್ಲದ ರೈತರ ಹಾದಿ ತಪ್ಪಿಸಿತಾ ಬಿಜೆಪಿ ಸರ್ಕಾರ!?
ದೆಹಲಿ ಹಾಗೂ ಹರ್ಯಾಣಕ್ಕೆ ತೆರಳಬಹುದಾದ ಸಿಂಘು,ಟಿಕ್ರಿ,ಸಬೋಲಿ ಹಾಗೂ ಮಂಗೇಶ್ ದಾರಿ ಬಂದ್ ಆಗಿದೆ. ವಾಹನ ಸವಾರರು ಲಂಪುರ್,ಸಾಫಿಯಾಬಾದ್,ಸಿಂಘು ಸ್ಕೂಲ್ ಮೂಲಕ ಬದಲಿ ಮಾರ್ಗ ಬಳಸಲು ತಿಳಿಸಲಾಗಿದೆ. ಕಳೆದ ಮೂರು ತಿಂಗಳಿಂದ ರೈತರು ದೆಹಲಿ ಗಡಿ ಪ್ರದೇಶವಾದ ಘಾಜಿಪುರ್,ಟಿಕ್ರಿ,ಸಿಂಘುವಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ರೈತರ ಪ್ರತಿಭಟನೆ ಕುರಿತು ಯೋಗ ಗುರು ಬಾಬಾ ರಾಮ್ದೇವ್ ಮಾತನಾಡಿದ್ದು,ಕೃಷಿ ಕಾನೂನುಗಳನ್ನು ಮೂರು ವರ್ಷಗಳ ಅವಧಿಗೆ ಅಮಾನತುಗೊಳಿಸುವ ಮೂಲಕ ರೈತರ ಪ್ರತಿಭಟನೆಯ ಪರಿಸ್ಥಿತಿಯನ್ನು ಪರಿಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರೈತರು ಮತ್ತು ಕೇಂದ್ರದ ನಡುವೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ ಎಂದರು.
ಬಾಬ ರಾಮದೇವ್ ಅವರು ಹರಿಯಾಣದ ಸಮಲ್ಖಾದಲ್ಲಿ ಉದ್ಯಮಿಯೊಬ್ಬರ ವಿವಾಹದಲ್ಲಿ ಪಾಲ್ಗೊಳ್ಳುತ್ತಿದ್ದಾಗ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ಮಾತನಾಡಲು ನಿರ್ಧರಿಸಿದರು. ಅವರು ಸರ್ಕಾರದ ವಕ್ತಾರರಾಗಲು ಅಥವಾ ಗುತ್ತಿಗೆ ಕೃಷಿಕರಾಗಲು ಇಚ್ಚಿಸುವುದಿಲ್ಲ, ಆದರೆ ಈ ಪ್ರಕರಣದಲ್ಲಿ ಸುಧಾರಣೆ ಕಾಣಬೇಕೆಂದು ಅವರು ಹೇಳಿದರು.
ಹೊಸ ಕೃಷಿ ಕಾನೂನುಗಳನ್ನು ಮೂರು ವರ್ಷಗಳವರೆಗೆ ಮುಂದೂಡಬೇಕು ಮತ್ತು ರೈತರು ಸರ್ಕಾರದೊಂದಿಗೆ ಕುಳಿತು ರೈತರು ಮತ್ತು ದೇಶದ ಹಿತಾಸಕ್ತಿ ನೀತಿಗಳ ಬಗ್ಗೆ ಚರ್ಚಿಸಬೇಕು ಎಂದು ರಾಮದೇವ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಸರ್ಕಾರ ಅಥವಾ ರೈತರು ಸಂವಾದದ ಮೂಲಕ ಬಗೆಹರಿಸಿಕೊಳ್ಳಬೇಕು "ಪ್ರತಿ ಸಮಸ್ಯೆಯಲ್ಲೂ ಮಧ್ಯಮ ಮಾರ್ಗವಿರುತ್ತದೆ" ಎಂದು ಅವರು ಹೇಳಿದರು.