ಕರ್ನಾಟಕದಲ್ಲೂ ನಡೆಯುತ್ತಾ "ಛಕ್ಕಾ ಜಾಮ್"; ರೈತರು ಏನ್ ಅಂತಾರೆ?
ನವದೆಹಲಿ, ಫೆಬ್ರವರಿ.05: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕರೆ ಕೊಟ್ಟಿರುವ "ಛಕ್ಕಾ ಜಾಮ್" (ರಾಷ್ಟ್ರೀಯ ಹೆದ್ದಾರಿ ತಡೆ) ಆಂದೋಲನಕ್ಕೆ ಕರ್ನಾಟಕದ ರೈತರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಘಾಜಿಪುರ್ ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವುದಕ್ಕಾಗಿ ಕರ್ನಾಟಕದಿಂದ 4000ಕ್ಕೂ ಅಧಿಕ ರೈತರು ತೆರಳಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕೂಡ ಘಾಜಿಪುರ್ ತಲುಪಿದ್ದು, ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ರನ್ನು ಭೇಟಿ ಮಾಡಿದ್ದಾರೆ.
ಛಕ್ಕಾ ಜಾಮ್: ನಡುರಸ್ತೆಯಲ್ಲಿ ಸಿಲುಕಿದ ಜನರಿಗೆ ರೈತರಿಂದ ಆಹಾರ, ನೀರಿನ ವ್ಯವಸ್ಥೆ
ದೇಶಾದ್ಯಂತ ಫೆಬ್ರವರಿ.06ರಂದು ನಡೆಯಲಿರುವ ಛಕ್ಕಾ ಜಾಮ್ ಹೋರಾಟಕ್ಕೆ ಕರ್ನಾಟಕದ ರೈತರು ಸಂಪೂರ್ಣವಾಗಿ ಬೆಂಬಲಿಸಲಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಕೈಜೋಡಿಸಲು ಸಾವಿರಾರು ರೈತರು ಘಾಜಿಪುರಕ್ಕೆ ಆಗಮಿಸಿದ್ದಾರೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ರಾಜ್ಯದಲ್ಲೂ ಛಕ್ಕಾ ಜಾಮ್ ಆಂದೋಲನ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಛಕ್ಕಾ ಜಾಮ್ ಹೋರಾಟಕ್ಕೆ ಕರೆ ನೀಡಲಾಗಿದೆ. ಫೆಬ್ರವರಿ.06ರ ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುತ್ತದೆ. ಕರ್ನಾಟಕದಲ್ಲೂ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲಿದ್ದು, ಹೆದ್ದಾರಿ ತಡೆ ನಡೆಸಲಾಗುವುದು ಎಂದು ಕೋಡಿಹಳ್ಳಿ ಚಂದ್ರೇಶರ್ ತಿಳಿಸಿದ್ದಾರೆ.
ದೆಹಲಿಗೆ ತೆರಳಲು ಸ್ವಂತ ಹಣ ಖರ್ಚು ಮಾಡಿದ ರೈತರು
ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ನೀಡಿರುವ ರೈತರನ್ನು ತಡೆಯುವುದಕ್ಕಾಗಿ ತಂತ್ರ ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ತಂಡಗಳಲ್ಲಿ ರೈತರು ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿಕೊಂಡು ದೆಹಲಿಗೆ ಆಗಮಿಸುತ್ತಿದ್ದಾರೆ. ದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರ ಹೋರಾಟಕ್ಕೆ ಕೈಜೋಡಿಸಲಿದ್ದಾರೆ ಎಂದು ರೈತರ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ರಸ್ತೆಯಲ್ಲಿ ಸಿಲುಕಿದ ಜನರಿಗೆ ರೈತರಿಂದ ನೀರು, ಆಹಾರ
ದೇಶಾದ್ಯಂತ "ಛಕ್ಕಾ ಜಾಮ್ ಆಂದೋಲನ"ದಿಂದ ರಸ್ತೆಗಳಲ್ಲಿ ಸಿಲುಕುವ ಪ್ರಯಾಣಿಕರಿಗೆ ನೀರು ಆಹಾರ ನೀಡಲಾಗುತ್ತದೆ. ಅದರ ಜೊತೆಗೆ ರೈತರ ವಿಚಾರದಲ್ಲಿ ಕೇಂದ್ರ ಸರ್ಕಾರ ಏನು ಮಾಡಲು ಹೊರಟಿದೆ ಎನ್ನುವುದನ್ನು ಅವರಿಗೆ ತಿಳಿಸುವ ಪ್ರಯತ್ನವನ್ನು ರೈತರು ಮಾಡಲಿದ್ದಾರೆ. ದೆಹಲಿಯಲ್ಲಿ ಈ ಛಕ್ಕಾ ಜಾಮ್ ನಡೆಸುವುದಕ್ಕೆ ಸಾಧ್ಯವಾಗದೇ ಇರಬಹುದು. ಆದರೆ ದೇಶದ ಎಲ್ಲ ಕಡೆಗಳಲ್ಲಿ ದೆಹಲಿಯ ಹೊರಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುತ್ತದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಹೇಳಿದ್ದಾರೆ.
ಛಕ್ಕಾ ಜಾಮ್ ನಡೆಸುವುದಕ್ಕೆ ಮುಖ್ಯ ಕಾರಣ
ಕೇಂದ್ರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರಿಗೆ ನೀಡುತ್ತಿದ್ದ ಮೂಲಭೂತ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ. ಇಂಟರ್ ನೆಟ್ ಸೇವೆ, ನೀರು, ಶೌಚಾಲಯ, ಕನಿಷ್ಠ ವಿದ್ಯುತ್ ಸೌಲಭ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ. ರೈತರನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿ ರೈತರು ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುವುದಾಗಿ ಘೋಷಿಸಿದ್ದಾರೆ.