ರೈತ ಹೋರಾಟ: ಹರಿಯಾಣದ 7 ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತ
ನವದೆಹಲಿ, ಫೆಬ್ರವರಿ.03: ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ನವದೆಹಲಿಯಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆ ಹರಿಯಾಣ ಸರ್ಕಾರವು ಏಳು ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆಗಳ ಮೇಲೆ ವಿಧಿಸಿದ ನಿರ್ಬಂಧವನ್ನು ಫೆಬ್ರವರಿ.3ರ ಸಂಜೆ 5 ಗಂಟೆವರೆಗೂ ವಿಸ್ತರಿಸಿದೆ.
ಹರಿಯಾಣದ ಕೈಥಲ್, ಪಾಣಿಪತ್, ಜಿಂದ್, ರೋಹ್ಟಕ್, ಚರ್ಖಿ ದಾದ್ರಿ, ಸೋನಿಪತ್ ಮತ್ತು ಝಜ್ಜರ್ ಜಿಲ್ಲೆಗಳಲ್ಲಿ ದೂರವಾಣಿ ಕರೆಯನ್ನು ಹೊರತುಪಡಿಸಿದಂತೆ ಇಂಟರ್ ನೆಟ್, ಎಸ್ಎಂಎಸ್ ಮತ್ತು ಡೋಂಗಲ್ ಸೇವೆಯನ್ನು ನಿರ್ಬಂಧಿಸಲಾಗಿದೆ.
ದೆಹಲಿಯಲ್ಲಿ ರೈತರ ಹೋರಾಟದ ಹಾದಿಗೆ ಸೀಮೆಂಟ್ ಗೋಡೆ, ಕಬ್ಬಿಣದ ಸೆರಳು!
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನಡೆಸಿದ ಟ್ರ್ಯಾಕ್ಟರ್ ಜಾಥಾ ಹಿಂಸಾಚಾರಕ್ಕೆ ತಿರುಗಿತ್ತು.
ದೆಹಲಿ ಹಿಂಸಾಚಾರದ ಘಟನೆಯ ಹಿನ್ನೆಲೆ:
ಕಳೆದ ಜನವರಿ.26ರಂದು ನಡೆದ 72ನೇ ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆಯುತ್ತಿದ್ದ ರೈತರ ಹೋರಾಟ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ರೈತರು ನಡೆಸುತ್ತಿದ್ದ ಟ್ರ್ಯಾಕ್ಟರ್ ಜಾಥಾವನ್ನು ಪೊಲೀಸರು ತಡೆದಿದ್ದು, ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳಲು ಕಾರಣವಾಯಿತು. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರು ಮತ್ತು ಪೊಲೀಸರ ನಡುವೆ ತೀವ್ರ ಸಂಘರ್ಷ ನಡೆಯಿತು. ತದನಂತರ ಪ್ರತಿಭಟನಾನಿರತರಲ್ಲಿ ಕೆಲವರು ಖಡ್ಗ, ಕತ್ತಿ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಓಡಾಡಿದ ಘಟನೆ ನಡೆದಿತ್ತು. ಪ್ರತಿಭಟನಾಕಾರರ ಇನ್ನೊಂದು ಗುಂಪು ದೆಹಲಿ ಕೆಂಪುಕೋಟೆಗೆ ನುಗ್ಗಿ ರಾಷ್ಟ್ರ ಧ್ವಜದ ಎದುರಿಗೆ ಸಿಖ್ ಧ್ವಜವನ್ನು ಹಾರಿಸಿತು.