ಕೇಂದ್ರ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡರಾ ರೈತರು?
ನವದೆಹಲಿ, ಸಪ್ಟೆಂಬರ್.25: ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಕೃಷಿ ಸಂಬಂಧಿತ ಮಸೂದೆಗಳನ್ನು ಇಡೀ ದೇಶವೇ ವಿರೋಧಿಸುತ್ತಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ದೂಷಿಸುತ್ತಿದ್ದಾರೆ.
ರೈತರದ ಜೊತೆಗೆ ವಿಡಿಯೋ ಸಂವಾದ ನಡೆಸಿದ ಬಳಿಕ ರಾಹುಲ್ ಗಾಂಧಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ದೇಶದ ರೈತಾಪಿ ವರ್ಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಯಾವುದೇ ರೀತಿ ವಿಶ್ವಾಸ ಹೊಂದಿಲ್ಲ ಎಂದಿದ್ದಾರೆ.
ಕೃಷಿ ಮಸೂದೆ ವಿರೋಧಿಸಿ ಭಾರತ ಬಂದ್: ಯಾವ ರಾಜ್ಯದಲ್ಲಿ ಹೇಗಿದೆ ಚಿತ್ರಣ?
"ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಮೇಲೆ ರೈತಾಪಿ ವರ್ಗದ ಸಹೋದರರು ನಂಬಿಕೆ ಕಳೆದುಕೊಂಡಿದ್ದಾರೆ. ನಮ್ಮ ದೇಶದ ರೈತರ ಪರವಾಗಿ ನಾವೂ ಕೂಡಾ ಧ್ವನಿ ಎತ್ತುತ್ತೇವೆ. ಇಂದು ಇಡೀ ದೇಶವೇ ಕೃಷಿ ಸಂಬಂಧಿತ ಮಸೂದೆಗಳನ್ನು ವಿರೋಧಿಸುತ್ತಿದೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ದೇಶದ ರೈತರ ಜೊತೆಗೆ ವಿಡಿಯೋ ಸಂವಾದ:
ಕೃಷಿ ಸಂಬಂಧಿತ ಮಸೂದೆ ವಿರೋಧಿಸಿ ಭಾರತ್ ಬಂದ್ ನಡೆಸಿದ ರೈತರ ಜೊತೆಗೆ ಸಂಸದ ರಾಹುಲ್ ಗಾಂಧಿ ವಿಡಿಯೋ ಸಂವಾದ ನಡೆಸಿದರು. ಕೇಂದ್ರ ಸರ್ಕಾರದ ಮಸೂದೆಯಿಂದ ರೈತರು ಮತ್ತು ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಈ ಮಸೂದೆಯು ಉದ್ಯಮಗಳಿಗೆ ಮಾತ್ರ ಅನುಕೂಲವಾಗಲಿದೆ. ರೈತರ ಬೆಳೆಗೆ ಇದರಿಂದ ಗರಿಷ್ಠ ಬೆಂಬಲ ಬೆಲೆ ಸಿಗುತ್ತದೆಯೇ ಎಂಬ ಪ್ರಶ್ನೆಯನ್ನು ಎತ್ತುತ್ತಿದ್ದಾರೆ.
ಶುಕ್ರವಾರ ಭಾರತ್ ಬಂದ್:
ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಎರಡು ಕೃಷಿ ಸಂಬಂಧಿತ ಮಸೂದೆ ವಿರೋಧಿಸಿ ವಿವಿಧ ರೈತಪರ ಸಂಘಟನೆಗಳು ಶುಕ್ರವಾರ ಭಾರತ್ ಬಂದ್ ನಡೆಸುವುದಕ್ಕೆ ಕರೆ ನೀಡಲಾಗಿತ್ತು. ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರಿ ಸಮಿತಿ, ಅಖಿಲ ಭಾರತ ಕಿಸಾನ್ ಮಹಾಸಂಘ, ಭಾರತೀಯ ಕಿಸಾನ್ ಒಕ್ಕೂಟ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿವೆ. ಅಖಿಲ ಭಾರತ ಕಾಂಗ್ರೆಸ್ ಕಮಿಟಿ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಡಿಎಂಕೆ ಮತ್ತು ಟಿಆರ್ಎಸ್ ಸೇರಿದಂತೆ 18 ವಿರೋಧ ಪಕ್ಷಗಳು ಭಾರತ್ ಬಂದ್ ಗೆ ಬೆಂಬಲ ಸೂಚಿಸಿದ್ದವು.