ದೆಹಲಿಯ ಟಿಕ್ರಿಯಲ್ಲಿ ಶಾಶ್ವತ ಮನೆ ನಿರ್ಮಿಸಿ ಹೋರಾಟ ಮುಂದುವರೆಸಿದ ರೈತರು
ನವದೆಹಲಿ, ಮಾರ್ಚ್ 13: ದೆಹಲಿಯ ಟಿಕ್ರಿ ಗಡಿಯಲ್ಲಿ ರೈತರು 25 ಶಾಶ್ವತ ಮನೆಗಳನ್ನು ನಿರ್ಮಿಸಿ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.
ರೈತರ ಆಂದೋಲನವು ದೀರ್ಘ ಹೋರಾಟವಾಗಲಿದೆ ಮತ್ತು ಅದನ್ನು ಪರಾಕಾಷ್ಠೆಗೆ ಕೊಂಡೊಯ್ಯಲು ಯುವಕರು ಸಿದ್ಧರಾಗಬೇಕು ಎಂದು ಟಿಕಾಯತ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮತ ನೀಡದಂತೆ ರಾಕೇಶ್ ಟಿಕಾಯತ್ ಮನವಿ
ಈ ಮನೆಗಳು ರೈತರ ಹೋರಾದಷ್ಟೇ ಬಲವಾಗಿವೆ, ಇವೆಲ್ಲಾ ಶಾಶ್ವತ ಮನೆಗಳು, ಸದ್ಯ 25 ಮನೆಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಅಂತಹುದೇ 1-2 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು ಎಂದು ಕಿಸಾನ್ ಸೋಶಿಯಲ್ ಆರ್ಮಿಯ ಅನಿಲ್ ಮಲಿಕ್ ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಇದೀಗ ಅಲ್ಲಿಯೇ ಶಾಶ್ವತ ಮನೆಗಳನ್ನು ಕಟ್ಟಿಕೊಳ್ಳುವ ಮೂಲಕ ಕೃಷಿ ಕಾಯ್ದೆಗಳನ್ನು ರದ್ದು ಮಾಡದ ಹೊರತು ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂಬ ನಿರ್ಧಾರವನ್ನು ತಿಳಿಸಿದ್ದಾರೆ.
ಶುಕ್ರವಾರ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಯಾರೊಬ್ಬರ ಮಾತನ್ನೂ ಕೇಳದ ಇಬ್ಬರು ವ್ಯಕ್ತಿಗಳ ಆಡಳಿತ ಎಂದು ಟೀಕಿಸಿದ್ದರು.
ನರೇಂದ್ರ ಮೋದಿ ಸರ್ಕಾರವು ತಮ್ಮನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸಬಹುದೆಂಬ ಭಯದಿಂದ ಪ್ರತಿಪಕ್ಷ ನಾಯಕರು ಕೂಡ ರೈತರ ಪ್ರತಿಭಟನೆಗೆ ಹೆಚ್ಚಿನ ಬೆಂಬಲ ನೀಡುತ್ತಿಲ್ಲ ಎಂದರು.
ಸರ್ಕಾರವಿದ್ದರೆ ಮಾತುಕತೆ ಸಾಧ್ಯವಾಗುತ್ತಿತ್ತು, ಆದರೆ, ದೇಶದಲ್ಲಿ ಇಬ್ಬರು ವ್ಯಕ್ತಿಗಳ ಸರ್ಕಾರವಿದೆ, ಈ ಆಡಳಿತವು ಯಾರ ಅಭಿಪ್ರಾಯವನ್ನೂ ಬಯಸುವುದಿಲ್ಲ ಎಂದು ಅವರು ಹೇಳಿದರು.