ರೈತ ದಂಗೆ: ದೆಹಲಿಯಲ್ಲಿ 18 ಪೊಲೀಸರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ
ನವದೆಹಲಿ, ಜನವರಿ.26: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ರೈತರ ಆಕ್ರೋಶದ ಕಿಚ್ಚಿಗೆ ರಾಷ್ಟ್ರ ರಾಜಧಾನಿ ಹೊತ್ತಿ ಉರಿದಿದೆ. 72ನೇ ಗಣರಾಜ್ಯೋತ್ಸವ ದಿನವು ಕಹಿ ನೆನಪಿಗೆ ಸಾಕ್ಷಿಯಾಗುವಂತಾ ಘಟನೆಯೊಂದು ನವದೆಹಲಿಯಲ್ಲಿ ನಡೆದು ಹೋಗಿದೆ.
ದೆಹಲಿಯಲ್ಲಿ ರೈತರು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ 18 ಮಂದಿ ಆರಕ್ಷಕರು ಗಾಯಗೊಂಡಿದ್ದಾರೆ. ಗಾಯಗೊಂಡ ಪೊಲೀಸರನ್ನು ದೆಹಲಿಯ ಲೋಕನಾಥ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕೆಂಪುಕೋಟೆ ಮೇಲೆ ರೈತಧ್ವಜ ಹಾರುವ ಮೊದಲು ನಡೆದಿದ್ದು ಏನು?
ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸಿದ ಟ್ರ್ಯಾಕ್ಟರ್ ಜಾಥಾ ಹೋರಾಟ ಹಿಂಸಾತ್ಮಕ ರೂಪಕ್ಕೆ ತಿರುಗಿತು. ನೋಡನೋಡುತ್ತಿದ್ದಂತೆ ನುಗ್ಗಿ ಬಂದ ರೈತರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಯಿತು. ಪ್ರತಿಭಟನಾನಿರತ ರೈತರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿ, ಅಶ್ರುವಾಯು ಸಿಡಿಸಿದರು.
ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ನಿರ್ಧಾರ
ರೈತರ ಹೋರಾಟ ಹಿಂಸಾತ್ಮಕ ರೂಪಕ್ಕೆ ತಿರುಗುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತುರ್ತು ಸಭೆ ನಡೆಸಿದರು. ದೆಹಲಿಯಲ್ಲಿ ಪರಿಸ್ಥಿತಿ ನಿಯಂತ್ರಿಸುವುದು ಹಾಗೂ ನಿರ್ವಹಿಸುವ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚನೆ ನೀಡಿದರು. ದೆಹಲಿಯಲ್ಲಿ 15 ಕಂಪನಿಗಳ ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಲು ಸೋಮವಾರವೇ ಕಳುಹಿಸಿ ಕೊಡಲಾಗಿತ್ತು. 5 ಕಂಪನಿಯ ಹೆಚ್ಚುವರಿ ಪಡೆಯನ್ನು ಮಂಗಳವಾರ ನಿಯೋಜಿಸುವುದಕ್ಕೆ ಸೂಚಿಸಲಾಗಿದೆ.
ಪ್ರತಿಭಟನಾನಿರತ ರೈತರನ್ನು ಹಿಮ್ಮೆಟ್ಟಿಸಿದ ಪೊಲೀಸರು
ದೆಹಲಿಯಲ್ಲಿ ತೀವ್ರ ಭದ್ರತೆ ನಡುವೆಯೂ ಪ್ರತಿಭಟನಾನಿರತ ರೈತರು ಕೆಂಪುಕೋಟೆಗೆ ಪ್ರವೇಶಿಸಿದರು. ತ್ರಿವರ್ಣ ಧ್ವಜದ ಎದುರಿನಲ್ಲೇ ನಿಶಾನ್ ಸಾಹೇಬ್ ಧ್ವಜವನ್ನು ಹಾರಿಸಿದರು. ಈ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು ಕೆಂಪುಕೋಟೆಗೆ ನುಗ್ಗಿದ ಎಲ್ಲ ರೈತರನ್ನು ಅಲ್ಲಿಂದ ಹೊರ ಕಳುಹಿಸಿದ್ದಾರೆ. ಇದೀಗ ಕೆಂಪುಕೋಟೆ ಸುತ್ತಲೂ ಭದ್ರತಾ ಸಿಬ್ಬಂದಿಯ ಸರ್ಪಗಾವಲು ಹಾಕಲಾಗಿದೆ.
ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ
ದೆಹಲಿಯ ಕೆಂಪುಕೋಟೆಗೆ ಹೋಗಲು ಅನುಮತಿ ನೀಡುವಂತೆ ಆಗ್ರಹಿಸಿ ರೈತರು ಸಂಘರ್ಷಕ್ಕೆ ಇಳಿದರು. ಐಟಿಓ ಬಳಿ ಬಸ್ ಗಳನ್ನು ಧ್ವಂಸಗೊಳಿಸಿದರು. ಕೆಲವು ದುಷ್ಕರ್ಮಿಗಳು ಪೊಲೀಸರ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಪ್ರಯತ್ನಿಸಿದ ಘಟನೆ ನಡೆಯಿತು. ಕೆಂಪುಕೋಟೆಗೆ ತೆರಳುವುದಕ್ಕೆ ಮುಂದಾದ ರೈತರನ್ನು ತಡೆಯುವುದಕ್ಕಾಗಿ ಲಾಠಿಚಾರ್ಜ್ ನಡೆಸಿದ ಪೊಲೀಸರು ಅಶ್ರುವಾಯು ಸಿಡಿಸಿದರು. ಒಬ್ಬ ಪ್ರತಿಭಟನಾನಿರತ ರೈತನ ಮೇಲೆ ಟ್ರ್ಯಾಕ್ಟರ್ ಹರಿದು ಮೃತಪಟ್ಟಿರುವ ಘಟನೆಯೂ ನಡೆಯಿತು. ಐಟಿಓ ಪ್ರದೇಶದಲ್ಲಿ ನಡೆದ ಒಂದೂವರೆ ಗಂಟೆಗಳ ಸುದೀರ್ಘ ಸಂಘರ್ಷದ ನಂತರ ಪ್ರತಿಭಟನಾನಿರತ ರೈತರು ಕೆಂಪುಕೋಟೆ ಪ್ರವೇಶಿಸಿದ್ದರು.
ದೆಹಲಿಯಲ್ಲಿ ತಾಳ್ಮೆ ಕಳೆದುಕೊಂಡು ರೈತರ ವರ್ತನೆ?
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿದ್ದ 63 ದಿನಗಳ ಹೋರಾಟ ಮಂಗಳವಾರ ಹಿಂಸಾತ್ಮಕ ರೂಪ ಪಡೆದುಕೊಂಡಿತು.