ಕೃಷಿ ಕಾಯ್ದೆಗಳು ಹೂಡಿಕೆಗಳನ್ನು ಸೆಳೆಯಲಿವೆ; ಧರ್ಮೇಂದ್ರ ಪ್ರಧಾನ್
ನವದೆಹಲಿ, ಫೆಬ್ರುವರಿ 12: ಕೇಂದ್ರ ಸರ್ಕಾರ ಪರಿಚಯಿಸಿರುವ ಮೂರು ಕೃಷಿ ಕಾಯ್ದೆಗಳು ಹೂಡಿಕೆಗಳನ್ನು ಸೆಳೆಯಲಿವೆ. ಹೊಸ ತಂತ್ರಜ್ಞಾನ ಹಾಗೂ ಉದ್ಯೋಗ ಸೃಷ್ಟಿಗೆ ಕಾರಣವಾಗಲಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಈಚೆಗೆ ಮಂಡನೆಯಾದ ಕೇಂದ್ರ ಬಜೆಟ್ನ ಪ್ರಮುಖ ಅಂಶಗಳ ಸಂವಾದಕ್ಕೆ ಬಿಜೆಪಿ ಯುವ ಘಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಮೂಲಸೌಲಭ್ಯಕ್ಕೆ ಬಜೆಟ್ ನಲ್ಲಿ ನೀಡಲಾಗಿರುವ 40 ಸಾವಿರ ಕೋಟಿ ರೂಪಾಯಿಯಿಂದ ಕೃಷಿ ಅಭಿವೃದ್ಧಿಯ ಹೊಸ ಸಾಧ್ಯತೆಗಳ ಬಾಗಿಲು ತೆರೆಯಲಿದೆ ಎಂದು ಹೇಳಿದ್ದಾರೆ.
ಕೃಷಿ ಸುಧಾರಣೆ ಅವಶ್ಯಕ; ಕಾಯ್ದೆಗಳು ರೈತರಿಗೆ ಆಯ್ಕೆಯಾಗಲಿವೆ; ಮೋದಿ
ಕೊರೊನಾ ಸೋಂಕಿನಿಂದ ದೇಶದ ಆರ್ಥಿಕತೆ ಮೇಲೆ ಪೆಟ್ಟು ಬಿದ್ದಿದೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಬಜೆಟ್ ಭರವಸೆ ತಂದಿದೆ. ಮೋದಿ ಸರ್ಕಾರ ರೈತರಿಗೆ ಹಾಗೂ ಕಾರ್ಮಿಕರಿಗೆ ಬಲ ತಂದಿದೆ ಎಂದಿದ್ದಾರೆ. ಕೊಳೆಗೇರಿ ನಿವಾಸಿಗಳು, ಬೀದಿಬದಿ ವ್ಯಾಪಾರಿಗಳು ಹಾಗೂ ನಿವಾಸಿ ಸಂಘದಂಥ ವಿವಿಧ ವರ್ಗಗಳೊಂದಿಗೆ ಬಜೆಟ್ ಕುರಿತು ಚರ್ಚೆ ನಡೆಸಿ ಅವರ ಆಕಾಂಕ್ಷೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ದೆಹಲಿ ಬಿಜೆಪಿ ಮುಖಂಡರನ್ನು ಪ್ರಧಾನ್ ಆಗ್ರಹಿಸಿದರು.
ಆರೋಗ್ಯ ವಲಯಕ್ಕೆ ಕಳೆದ ವರ್ಷಕ್ಕಿಂತ 137% ಹೆಚ್ಚಿಗೆ ಹಣವನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದ ಅವರು, ದೇಶದ ಆರ್ಥಿಕ ಬಲವು ಆವಿಷ್ಕಾರ ಹಾಗೂ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ ಹಾಗೂ ಇವನ್ನು ಕೇಂದ್ರವಾಗಿಟ್ಟುಕೊಂಡು ಬಜೆಟ್ ರೂಪಿಸಲಾಗಿದೆ ಎಂದು ಹೇಳಿದರು.