ಕೃಷಿ ಸಂಬಂಧಿತ ಮಸೂದೆ ಅಂಗೀಕಾರ ವಿರೋಧಿಸಿ ಅವಿಶ್ವಾಸ ಮಂಡನೆ
ನವದೆಹಲಿ, ಸಪ್ಟೆಂಬರ್.21: ಸಂಸತ್ ಮೇಲ್ಮನೆಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಕೃಷಿ ಸಂಬಂಧಿತ ಎರಡು ಮಸೂದೆಗಳನ್ನು ಅಂಗೀಕರಿಸಿರುವುದಕ್ಕೆ 12 ಪಕ್ಷಗಳ ಸದಸ್ಯರು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಡೆಯ ವಿರುದ್ಧ ಅವಿಶ್ವಾಸ ಮಂಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೆಲಂಗಾಣ ರಾಷ್ಟ್ರೀಯ ಸಮಿತಿ, ಸಿಪಿಐ, ಸಿಪಿಎಂ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ರಾಷ್ಟ್ರೀಯ ಜನತಾ ದಳ, ಡಿಎಂಕೆ ಮತ್ತು ಆಮ್ ಆದ್ಮಿ ಪಕ್ಷಗಳು ಅವಿಶ್ವಾಸವನ್ನು ಮಂಡಿಸಿವೆ.
ಭಾರತೀಯರ ಖಾತೆಗೆ 15 ಲಕ್ಷ: ಕೇಂದ್ರ ಸರ್ಕಾರವನ್ನು ಕುಟುಕಿದ ಚಿದಂಬರಂ!
ಪ್ರತಿಪಕ್ಷಗಳ ತೀವ್ರ ವಿರೋಧ ಮತ್ತು ಗದ್ದಲದ ನಡುವೆ ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿತ ಮೂರು ಮಸೂದೆಗಳ ಪೈಕಿ ಎರಡು ಮಸೂದೆಗಳನ್ನು ಭಾನುವಾರ ಧ್ವನಿ ಮತದಾನ ಪ್ರಕ್ರಿಯೆ ಮೂಲಕ ಅಂಗೀಕರಿಸಲಾಯಿತು. ಇದರ ಬೆನ್ನಲ್ಲೇ ವಿರೋಧ ಪಕ್ಷಗಳ ಸದಸ್ಯರು ಸಂಸತ್ ಮೇಲ್ಮನೆಯಲ್ಲೇ ಪ್ರತಿಭಟನೆಗೆ ಮುಂದಾದರು. ಹೀಗಾಗಿ ರಾಜ್ಯಸಭಾ ಕಲಾಪವನ್ನು ಸೋಮವಾರ ಬೆಳಗ್ಗೆ 9 ಗಂಟೆಗೆ ಮುಂದೂಡಲಾಯಿತು.
ರಾಜ್ಯಸಭೆಯಲ್ಲಿ ಅವಿಶ್ವಾಸ ಮಂಡಿಸಿದ ಪ್ರತಿಪಕ್ಷಗಳು
ಕೃಷಿ ಸಂಬಂಧಿತ ಮಸೂದೆಗಳ ಅಂಗೀಕಾರಕ್ಕೂ ಮೊದಲು ಮತಗಳ ವಿಭಜನೆ ಮತ್ತು ಸದನದ ಮುಂದೂಡಿಕೆಗೆ ಸಲ್ಲಿಸಿದ ನಮ್ಮ ಬೇಡಿಕೆಯನ್ನು ತಿರಸ್ಕರಿಸಲಾಯಿತು ಎಂದು ಕಾಂಗ್ರೆಸ್ ಸಂಸದ ಅಹ್ಮದ್ ಪಟೇಲ್ ದೂಷಿಸಿದ್ದಾರೆ. "ರಾಜ್ಯಸಭಾ ಉಪಾಧ್ಯಕ್ಷರು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು, ಆದರೆ ಇಂದು ಅವರು ನಡೆದುಕೊಂಡ ರೀತಿ ಪ್ರಜಾಪ್ರಭುತ್ವ ಸಂಪ್ರದಾಯಕ್ಕೆ ಧಕ್ಕೆ ಉಂಟು ಮಾಡುವಂತಿತ್ತು. ಈ ಹಿನ್ನೆಲೆ ಅವಿಶ್ವಾಸ ಮಂಡನೆಗೆ ನಾವು ಮುಂದಾಗಿದ್ದೇವೆ" ಎಂದು ಕಾಂಗ್ರೆಸ್ ಸಂಸದ ಆಹ್ಮದ್ ಪಟೇಲ್ ತಿಳಿಸಿದ್ದಾರೆ.
ಕೇಂದ್ರದ ವಿರುದ್ಧ ಟಿಎಂಸಿ ಸಂಸದರ ಆರೋಪವೇನು?
"ಅವರು ತೀವ್ರ ವಂಚನೆ ಮಾಡಿದ್ದು, ಸಂಸತ್ತಿನ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದೊಂದು ಕೆಟ್ಟ ಇತಿಹಾಸವೇ ಆಗಲಿದೆ. ರಾಜ್ಯಸಭಾ ಟಿವಿಯಲ್ಲಿನ ದೃಶ್ಯಾವಳಿಗಳಿಗೆ ಕತ್ತರಿ ಹಾಕಲಾಗಿದ್ದು, ಸರ್ಕಾರದ ಪರವಾಗಿರುವ ದೃಶ್ಯವನ್ನಷ್ಟೇ ಪ್ರಸಾರ ಮಾಡಲಾಗಿದೆ. ತಮ್ಮ ಪ್ರಚಾರಕ್ಕೆ ರಾಜ್ಯಸಭಾ ಟಿವಿಯನ್ನು ಬಳಸಿಕೊಳ್ಳುವುದು ಬೇಕಾಗಿಲ್ಲ, ನಮಗೆ ಸಾಕ್ಷ್ಯ ಬೇಕು" ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ದೆರೆಕ್ ಒಬ್ರಿಯನ್ ಆಗ್ರಹಿಸಿದ್ದಾರೆ.
ಉಪಾಧ್ಯಕ್ಷರ ಮೈಕ್ರೋಫೋನ್ ಕಸಿಯಲು ಯತ್ನಿಸಿದ ಸಂಸದರು
ರಾಜ್ಯಸಭೆಯಲ್ಲಿ ಮೊದಲು ಕೃಷಿ ಸಂಬಂಧಿತ ಮಸೂದೆಗಳನ್ನು ಧ್ವನಿ ಮತದ ಮೂಲಕ ಮಂಡಿಸಲು ಉಪಾಧ್ಯಕ್ಷರು ಹೇಳಿದ್ದರಿಂದ ಸಮಸ್ಯೆ ಉಲ್ಬಣವಾಯಿತು. ವಿರೋಧ ಪಕ್ಷದ ನಾಯಕರು ಕಲಾಪದಲ್ಲಿ ಹಾಜರಾಗಿದ್ದ ಹಿನ್ನೆಲೆ ಭೌತಿಕ ಮತದಾನ ನಡೆಸುವಂತೆ ಪಟ್ಟು ಹಿಡಿದರು. ಈ ಮನವಿ ತಿರಸ್ಕರಿಸುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಸದನದ ಬಾವಿಗಿಳಿದು ಸಂಸದರು ಪ್ರತಿಭಟನೆ ನಡೆಸಿದ್ದು, ಕೆಲವರು ಉಪಾಧ್ಯಕ್ಷರ ಮುಂದಿದ್ದ ಪುಸ್ತಕವನ್ನು ಹರಿದು, ಮೈಕ್ರೋಫೋನ್ ಕಳೆದುಕೊಳ್ಳುವುದಕ್ಕೆ ಪ್ರಯತ್ನಿಸಿದರು.
"ಮಹಾಭಾರತ" ಯುದ್ಧಕ್ಕೆ ಸಾಕ್ಷಿಯಾದ ರಾಜ್ಯಸಭೆ
ಕೃಷಿ ಸಂಬಂಧಿತ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ರಾಜ್ಯಸಭೆಗೆ ರಾಜ್ಯಸಭೆಯೇ ರಣರಂಗವಾಯಿತು. ಕೆಲವು ಸಂಸದರು ತಮ್ಮ ಮೊಬೈಲ್ ಗಳಲ್ಲಿ ಇದನ್ನು ಸೆರೆ ಹಿಡಿಯುವುದರಲ್ಲೇ ಬ್ಯುಸಿ ಆಗಿದ್ದರು. ಸಂಸತ್ತಿನಲ್ಲಿ ಮಹಾಭಾರತ ಭುಗಿಲೆದ್ದಿತು ಎಂದು ಕಾಂಗ್ರೆಸ್ ಹಿರಿಯ ಸಂಸದ ಗುಲಾಮ್ ನಬಿ ಆಜಾದ್ ಕಿಡಿ ಕಾರಿದ್ದಾರೆ.