Explained: ಕೇಂದ್ರದ ಚಳಿ ಬಿಡಿಸಿತಾ ರೈತರ ಒಂದೇ ಒಂದು ನಿರ್ಧಾರ!?
ನವದೆಹಲಿ, ಫೆಬ್ರವರಿ.24: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಸಂಬಂಧಿತ ಕಾಯ್ದೆಗಳ ರಾಷ್ಟ್ರ ರಾಜಧಾನಿಯಲ್ಲಿ ರೈತರ ಹೋರಾಟ ಮುಂದುವರಿದಿದೆ. ಶುಕ್ರವಾರ ದೆಹಲಿಯ ಕೃಷಿ ಸಚಿವಾಲಯಕ್ಕೆ ಮುತ್ತಿಗೆ ಹಾಕುವುದಾಗಿ ಘೋಷಿಸಿರುವ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ.
ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ 93 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ರೈತರ ಹೋರಾಟಕ್ಕೆ ಬೆಂಬಲಿಸಿರುವ ರೈತ ಸಂಘಟನೆಗಳು, ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ರೈತರ ಪ್ರತಿಭಟನೆಗೆ ಕೈಜೋಡಿಸುವುದಾಗಿ ಹೇಳಿವೆ.
ರೈತರಿಗೆ ಹಾನಿಕಾರಕ: ವಿವಾದಿತ 3 ಕೃಷಿ ಕಾಯ್ದೆಗಳ ಬಗ್ಗೆ ವಿವರಣಾತ್ಮಕ ಪಾಠ
ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆಗೆ ಫೆಬ್ರವರಿ.26ರಂದು ಮೂರು ತಿಂಗಳು ಪೂರ್ಣಗೊಳ್ಳಲಿದ್ದು, ಕೃಷಿ ಸಚಿವಾಲಯಕ್ಕೆ ಮುತ್ತಿಗೆ ಹಾಕುವುದಾಗಿ ಕಿಸಾನ್ ಕಾಂಗ್ರೆಸ್ ಘೋಷಿಸಿದೆ. ಈಗ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಮ್ಮೆ ಮಾತುಕತೆಗೆ ಸಿದ್ಧ ಎಂದು ಹೇಳುತ್ತಿದೆ. ಕಳೆದ ಮೂರು ತಿಂಗಳಿನಲ್ಲಿ ಕೇಂದ್ರ ಸರ್ಕಾರದ ನಿಲುವು ಮತ್ತು ರೈತರ ಪ್ರತಿಭಟನೆಯ ಕುರಿತು ಒಂದು ವರದಿ ಇಲ್ಲಿದೆ.
ನರೇಂದ್ರ ಸಿಂಗ್ ತೋಮರ್ ಮತ್ತು ಕೃಷಿ ಸಚಿವಾಲಯಕ್ಕೆ ಮುತ್ತಿಗೆ
ನವದೆಹಲಿಯ ಮೂರು ಗಡಿ ಪ್ರದೇಶಗಳಲ್ಲಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಫೆಬ್ರವರಿ.26ರಂದು ಸರಿಯಾಗಿ ಮೂರು ತಿಂಗಳ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಕೃಷಿ ಸಚಿವಾಲಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕಿಸಾನ್ ಕಾಂಗ್ರೆಸ್ ಚೇರ್ ಮನ್ ಸುರೇಂದ್ರ ಸೋಲಂಕಿ ಘೋಷಿಸಿದ್ದಾರೆ.
ಕೃಷಿ ಸಚಿವಾಲಯದ ಎದುರು ಕಿಸಾನ್ ಕಾಂಗ್ರೆಸ್ ಹೋರಾಟ
ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರವನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿ ಕಿಸಾನ್ ಕಾಂಗ್ರೆಸ್ ಸಂಘಟನೆ ಕಾರ್ಯಕರ್ತರು ಕೃಷಿ ಸಚಿವಾಲಯದ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ದೆಹಲಿ-ಹರಿಯಾಣ ಗಡಿಭಾಗದ ಟಿಕ್ರಿ ಗಡಿಯಲ್ಲಿ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಕಿಸಾನ್ ಕಾಂಗ್ರೆಸ್ ಸಂಘಟನೆಯು ಮೊದಲ ದಿನದಿಂದಲೂ ತನ್ನನ್ನು ತೊಡಗಿಸಿಕೊಂಡಿದೆ. ರೈತರ ಹೋರಾಟಕ್ಕೆ ಸಂಘಟನೆ ಸದಾ ಬೆಂಬಲ ನೀಡಲಿದೆ ಎಂದು ಕಿಸಾನ್ ಕಾಂಗ್ರೆಸ್ ಚೇರ್ ಮನ್ ಸುರೇಂದ್ರ ಸೋಲಂಕಿ ಹೇಳಿದ್ದಾರೆ.
ದೇಶಾದ್ಯಂತ ರೈತ ಕಹಳೆ: "ಜೀವನ ಕಿತ್ತುಕೊಂಡವರಿಗೆ ಮತ ಹಾಕಬೇಕೇ"?
"200 ರೈತರು ಪ್ರತಿಭಟನೆ ನಡೆಸುತ್ತಲೇ ಪ್ರಾಣ ಬಿಟ್ಟಿದ್ದಾರೆ"
ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ದೆಹಲಿಯಲ್ಲಿನ ವಾತಾವರಣ ಮೈಕೊರೆಯುವ ಚಳಿಯ ನಡುವೆ 200ಕ್ಕೂ ಹೆಚ್ಚು ಮಂದಿ ರೈತರು ಪ್ರಾಣತ್ಯಾಗ ಮಾಡಿದ್ದಾರೆ. ಭಾರತೀಯ ರೈತರ ಹೋರಾಟಕ್ಕೆ ಕೇವಲ ದೇಶದಲ್ಲಿಯಷ್ಟೇ ಅಲ್ಲ. ವಿದೇಶಗಳಲ್ಲೂ ಕೂಡಾ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ದೇಶದ ಯುವ ಜನಾಂಗ ಕೂಡ ಅರ್ಥ ಮಾಡಿಕೊಂಡಿದೆ. ರೈತರ ಹೋರಾಟ ಮತ್ತು ಬೇಡಿಕೆಗಳಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕಿಸಾನ್ ಕಾಂಗ್ರೆಸ್ ಕೊನೆಯವರಿಗೂ ಕೈ ಜೋಡಿಸಲಿದೆ ಎಂದು ಕಿಸಾನ್ ಕಾಂಗ್ರೆಸ್ ಚೇರ್ ಮನ್ ಸುರೇಂದ್ರ ಸೋಲಂಕಿ ತಿಳಿಸಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಸಂಸತ್ ಮುತ್ತಿಗೆಯ ಎಚ್ಚರಿಕೆ
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಇಲ್ಲದೇ ಹೋದಲ್ಲಿ ಸಂಸತ್ ಮುತ್ತಿಗೆ ಹಾಕಲಾಗುತ್ತದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಎಚ್ಚರಿಕೆ ನೀಡಿದ್ದಾರೆ. ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಉದ್ಯಾನವನಗಳಲ್ಲಿ ರೈತರು ಉಳುಮೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದಾರೆ. ಸಂಸತ್ ಘೇರಾವ್ ನಡೆಸುವ ದಿನಾಂಕದ ಬಗ್ಗೆ ಯುನೈಟೆಡ್ ಫ್ರೆಂಟ್ ತೀರ್ಮಾನಿಸಲಿದೆ ಎಂದಿದ್ದಾರೆ.
ದೆಹಲಿಗೆ 40 ಲಕ್ಷ ಟ್ರ್ಯಾಕ್ಟರ್ ಗಳಲ್ಲಿ ಜಾಥಾ
ಮಾರ್ಚ್ ತಿಂಗಳ ಆರಂಭದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಸಂಸತ್ ಮುತ್ತಿಗೆ ನಡೆಸಲಾಗುತ್ತದೆ. ಈ ಬಾರಿ 4 ಲಕ್ಷ ಟ್ರ್ಯಾಕ್ಟರ್ ಗಳ ಬದಲಿಗೆ 40 ಲಕ್ಷ ಟ್ರ್ಯಾಕ್ಚರ್ ಗಳೊಂದಿಗೆ ದೆಹಲಿಯ ಸಂಸತ್ ಮುತ್ತಿಗೆ ಹಾಕಲಾಗುತ್ತದೆ ಎಂದು ರಾಕೇಶ್ ತಿಕೈಟ್ ತಿಳಿಸಿದ್ದಾರೆ. ಯಾವುದೇ ಸಂದರ್ಭದಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸುವುದಕ್ಕೆ ದೇಶಾದ್ಯಂತ ರೈತರು ಅಣಿ ಆಗಿದ್ದಾರೆ. ಅಷ್ಟರಲ್ಲೇ ಕೇಂದ್ರ ಸರ್ಕಾರವು ಸೂಕ್ತ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.
ರೈತರೊಂದಿಗೆ ಚರ್ಚಿಸಲು ಸಿದ್ಧ ಎಂದ ತೋಮರ್
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರೈತರ ಕಲ್ಯಾಣ ಮತ್ತು ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರೂಪಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳ ಜಾರಿಗೆ ಬದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ. ದೇಶದ ಕೃಷಿ ಮತ್ತು ಕೃಷಿಕರ ಆದಾಯ ಅಭಿವೃದ್ಧಿಗೆ ಅಗತ್ಯವಾಗಿರುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿದೆ. ಕೇಂದ್ರ ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿದೆ. ಪ್ರತಿಭಟನಾನಿರತ ರೈತರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೇವೆ. ಕೃಷಿ ಕಾಯ್ದೆಗಳಲ್ಲಿ ಲೋಪವಿರುವ ಬಗ್ಗೆ ನಿಮ್ಮ ವಾದವನ್ನು ಮಂಡಿಸಿ ಎಂದು ಸಚಿವ ನರೇಂದ್ರ ಸಿಂಗ್ ತೋಮರ್ ಆಹ್ವಾನಿಸಿದ್ದಾರೆ.
ಕೇಂದ್ರ ಮತ್ತು ರೈತರ ನಡುವೆ 11 ಸುತ್ತಿನ ಮಾತುಕತೆ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಈಗಾಗಲೇ 11 ಸುತ್ತಿನ ಮಾತುಕತೆ ನಡೆಸಲಾಗಿದೆ. ಕಳೆದ ಜನವರಿ.22ರಂದು ಕೊನೆಯ 11ನೇ ಸುತ್ತಿನ ಶಾಂತಿ ಮಾತುಕತೆಯೂ ಸಹ ವಿಫಲವಾಗಿತ್ತು. ಇದರ ಬೆನ್ನಲ್ಲೇ ಜನವರಿ.26ರಂದು ನಡೆದ 72ನೇ ಗಣರಾಜ್ಯೋತ್ಸವದ ದಿನವೇ ರೈತರು ನಡೆಸಿದ ಟ್ರ್ಯಾಕ್ಟರ್ ಜಾಥಾ ಹಿಂಸಾಚಾರ ರೂಪ ಪಡೆದುಕೊಂಡಿತ್ತು.
ದೆಹಲಿಯ ಗಡಿಯಲ್ಲಿ 93ನೇ ದಿನದ ಹೋರಾಟ
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ 936 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ರೈತ ಹೋರಾಟದಲ್ಲಿ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ.