ರಾಜ್ಯಸಭೆ ಗದ್ದಲ-ಗಲಾಟೆ ಹಿಂದಿನ ಕಾರಣ ತಿಳಿಸಿದ ಉಪಾಧ್ಯಕ್ಷರು!
ನವದೆಹಲಿ, ಸಪ್ಟೆಂಬರ್.28: ಕೃಷಿ ಸಂಬಂಧಿತ ಮಸೂದೆ ಅಂಗೀಕಾರ ವೇಳೆ ರಾಜ್ಯಸಭೆಯಲ್ಲಿ ನಡೆದ ಗದ್ದಲದ ಆಯ್ದ ವಿಡಿಯೋ ಮತ್ತು ಫೋಟೋಗಳನ್ನು ಮಾತ್ರ ಸರ್ಕಾರವು ಬಿಡುಗಡೆ ಮಾಡಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ದೆರೆಕ್ ಒಬ್ರಿಯನ್ ದೂಷಿಸಿದ್ದಾರೆ. ಕಲಾಪದ ವಿಡಿಯೋ ತುಣುಕುಗಳಿಗೆ ಕತ್ತರಿ ಹಾಕಿರುವ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
"ಪ್ರತಿಷ್ಠಿತ ಪತ್ರಕರ್ತರ ಘನ ತನಿಖೆ, ವಿಡಿಯೋ ತುಣುಕನ್ನು ಮತ್ತು ನಿರಾಕರಿಸಲಾಗದ ಸಾಕ್ಷ್ಯಗಳ ಬೆಂಬಲದ ಜೊತೆಗೆ ಸುಳ್ಳುಗಳ ಮೂಲಕ ಈ ನಾಚಿಕೆಗೆಟ್ಟ ಸರ್ಕಾರವು ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ನೋಡುತ್ತಿದೆ. ಬೇಕಿದ್ದಲ್ಲಿ ರಾಜ್ಯಸಭೆಯಲ್ಲಿ ಅವರ ವಿಡಂಬನಾತ್ಮಕ 'ಸ್ಪಷ್ಟೀಕರಣ' ಮರು ಘಟನೆಗಳನ್ನು ಓದಿ ನೋಡಿ.
ರಾಜ್ಯಸಭೆಯಲ್ಲಿ ಅನುಚಿತ ವರ್ತನೆ: ಸಂಸದರ ಅಮಾನತು
ಕೃಷಿ ಮಸೂದೆ ಅಂಗೀಕಾರದ ಸಂದರ್ಭ ವಿಡಿಯೋದಲ್ಲಿ ಸರ್ಕಾರದ ಆವೃತ್ತಿಯನ್ನು ಕತ್ತರಿಸಲಾಗಿದೆ" ಎಂದು ಓ'ಬ್ರೇನ್ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಅನುಚಿತ ವರ್ತನೆ ತೋರಿದ ಆರೋಪದಡಿ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ ಸಿಂಗ್ ಅಮಾನತುಗೊಳಿಸಿದ್ದರು.
ಆತ್ಮಸಾಕ್ಷಿ ಪ್ರಶ್ನೆ ಮಾಡಿಕೊಳ್ಳಿರಿ ಎಂದ ಉಪಾಧ್ಯಕ್ಷರು
ಕೃಷಿ ಸಂಬಂಧಿತ ಮಸೂದೆ ಅಂಗೀಕಾರದ ವೇಳೆ ನಡೆದ ಗದ್ದಲದ ಕುರಿತು ಸ್ವತಃ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. "ಸಾಂವಿಧಾನಿಕ ಸ್ಥಾನದಲ್ಲಿರುವ ನಾನು ಔಪಚಾರಿಕವಾಗಿ ಖಂಡನೆ ವ್ಯಕ್ತಪಡಿಸುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಘಟನೆ ಕುರಿತು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಅದರಲ್ಲಿನ ಸರಿ ತಪ್ಪುಗಳೇನು ಎನ್ನುವ ಬಗ್ಗೆ ನಿಮ್ಮ ಆತ್ಮಸಾಕ್ಷಿಯನ್ನೇ ಪ್ರಶ್ನಿಸಿಕೊಳ್ಳಿ" ಎಂದು ಹೇಳಿದ್ದಾರೆ.
ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ ಸಿಂಗ್ ಸ್ಪಷ್ಟನೆ
"ರಾಜ್ಯಸಭೆಯಲ್ಲಿ ಕಳೆದ ಸಪ್ಟೆಂಬರ್.20ರಂದು ಕೃಷಿ ಸಂಬಂಧಿತ ತಿದ್ದುಪಡಿ ಮಸೂದೆ ಅಂಗೀಕರಿಸುವುದಕ್ಕೂ ಮೊದಲು ಧ್ವನಿ ಮತದಾನಕ್ಕೆ ಹಾಕಲಾಯಿತು. ಮಧ್ಯಾಹ್ನ 1.07 ವೇಳೆ ನಡೆದ ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಸಿಪಿಐ(ಎಂ) ಸಂಸದ ಕೆಕೆ ರಾಗೇಶ್ ಸದನದ ಬಾವಿಗಿಳಿದು, ವಿರೋಧ ವ್ಯಕ್ತಪಡಿಸುತ್ತಿದ್ದರು. ಈ ಹಿನ್ನೆಲೆ ಅವರ ಮತದಾನ ನಿರಾಕರಿಸಲಾಯಿತು. ಸದನದ ವಿಡಿಯೋಗಳನ್ನು ಸಹ ಶೇರ್ ಮಾಡಿದ್ದು, ಹಕ್ಕು ಕಿತ್ತುಕೊಳ್ಳಲಾಗಿದೆ ಎಂದು ವಾದಿಸುತ್ತಿದ್ದಾರೆ. ಆದರೆ ತಿದ್ದುಪಡಿ ಕುರಿತು ನಿರ್ಣಯ ತೆಗೆದುಕೊಳ್ಳುವ ಮೊದಲು ಕೆ.ಕೆ. ರಾಗೇಶ್ ಹೆಸರು ಕರೆಯಲಾಗಿದ್ದು, ನಾನು ಗ್ಯಾಲರಿಯಲ್ಲಿ ನೋಡಿದೆ. ಅವರು ಅಲ್ಲಿ ಇರಲಿಲ್ಲ" ಎಂದು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ ಸಿಂಗ್ ತಿಳಿಸಿದ್ದಾರೆ.
ರಾಜ್ಯಸಭಾ ಉಪಾಧ್ಯಕ್ಷ ಮೈಕ್ರೋಫೋನ್ ಕಸಿಯಲು ಯತ್ನ
ರಾಜ್ಯಸಭೆಯಲ್ಲಿ ಮೊದಲು ಕೃಷಿ ಸಂಬಂಧಿತ ಮಸೂದೆಗಳನ್ನು ಧ್ವನಿ ಮತದ ಮೂಲಕ ಮಂಡಿಸಲು ಉಪಾಧ್ಯಕ್ಷರು ಹೇಳಿದ್ದರಿಂದ ಸಮಸ್ಯೆ ಉಲ್ಬಣವಾಯಿತು. ವಿರೋಧ ಪಕ್ಷದ ನಾಯಕರು ಕಲಾಪದಲ್ಲಿ ಹಾಜರಾಗಿದ್ದ ಹಿನ್ನೆಲೆ ಭೌತಿಕ ಮತದಾನ ನಡೆಸುವಂತೆ ಪಟ್ಟು ಹಿಡಿದರು. ಈ ಮನವಿ ತಿರಸ್ಕರಿಸುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಸದನದ ಬಾವಿಗಿಳಿದು ಸಂಸದರು ಪ್ರತಿಭಟನೆ ನಡೆಸಿದ್ದು, ಕೆಲವರು ಉಪಾಧ್ಯಕ್ಷರ ಮುಂದಿದ್ದ ಪುಸ್ತಕವನ್ನು ಹರಿದು, ಮೈಕ್ರೋಫೋನ್ ಕಳೆದುಕೊಳ್ಳುವುದಕ್ಕೆ ಪ್ರಯತ್ನಿಸಿದರು.
ರಾಜ್ಯಸಭೆಯಲ್ಲಿ ಅನುಚಿತ ವರ್ತನೆ ತೋರಿದ್ದಕ್ಕೆ ಅಮಾನತು
ರಾಜ್ಯಸಭೆಯಲ್ಲಿ ಅನುಚಿತ ವರ್ತನೆ ತೋರಿದ ಹಿನ್ನೆಲೆ ಸಂಸದ ಡೆರೆಕ್ ಒಬ್ರಿಯಾನ್, ಸಯ್ಯದ್ ನಸೀರ್ ಹುಸೇನ್, ಸಂಜಯ್ ಸಿಂಗ್, ಕೆಕೆ ರಾಗೇಶ್, ರಿಪುನ್ ಬೋರಾ, ರಾಜೀವ್ ಸಟವ್, ಡೋಲಾ ಸೇನ್, ಎಲಮಾರಮ್ ಕರೀಮ್ ಅವರನ್ನು ಒಂದು ವಾರದವರೆಗೆ ಅಮಾನತುಗೊಳಿಸಿದ್ದಾಗಿ ರಾಜ್ಯಸಭಾ ಸಭಾಪತಿ ಆಗಿರುವ ವೆಂಕಯ್ಯ ನಾಯ್ಡು ಘೋಷಿಸಿದರು.