ಕೇಂದ್ರ ಸರ್ಕಾರಕ್ಕೆ ಭವಿಷ್ಯದಲ್ಲಿನ ತೆರಬೇಕಾದ ದಂಡದ ಬಗ್ಗೆ ರೈತರ ಎಚ್ಚರಿಕೆ
ನವದೆಹಲಿ, ನವೆಂಬರ್.30: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆ ಕುರಿತು ನಿರ್ಣಾಯಕ ನಿಲುವು ಸ್ಪಷ್ಟಪಡಿಸಿಕೊಳ್ಳಬೇಕಿದೆ. ನಮ್ಮ ಬೇಡಿಕೆಗಳು ಈಡೇರಿಸಿಕೊಳ್ಳುವುದಕ್ಕಾಗಿ ನಾವು ದೆಹಲಿಗೆ ಬಂದಿದ್ದೇವೆ. ಅದು ಪೂರ್ಣಗೊಳ್ಳುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ" ಎಂದು ರೈತ ಮುಖಂಡರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಸಿಂಘು ಗಡಿ ಪ್ರದೇಶದಲ್ಲಿ ಪ್ರತಿಭಟನಾನಿರತ ರೈತರ ಪ್ರತಿನಿಧಿಯೊಬ್ಬರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಅನ್ನು ಆಲಿಸಬೇಕು ಎಂದು ಆಗ್ರಹಿಸಿದರು.
ಲಾಠಿ ಬೀಸಿದ ಪೊಲೀಸರಿಗೆ ಊಟ ಕೊಟ್ಟ ರೈತರು
"ನಮ್ಮ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ತೋರುವಂತಿಲ್ಲ, ಒಂದು ವೇಳೆ ಆಡಳಿತ ಪಕ್ಷವು ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಭವಿಷ್ಯದಲ್ಲಿ ಅದಕ್ಕೆ ತಕ್ಕ ದಂಡ ತೆರಬೇಕಾಗುತ್ತದೆ. ನಾವಿಲ್ಲಿ ಒಂದು ನಿರ್ಧಾರವನ್ನು ತೆಗೆದುಕೊಂಡು ಹೋಗುವುದಕ್ಕಾಗಿಯೇ ಬಂದಿದ್ದೇವೆ. ಅಲ್ಲಿಯವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚಿರಿಕೆ ನೀಡಿದ್ದಾರೆ.
ರೈತರ ಮೇಲೆ 31 ರೀತಿ ಪ್ರಕರಣ ದಾಖಲು:
ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿರುವ ರೈತರ ವಿರುದ್ಧ ಈವರೆಗೂ 31 ರೀತಿಯ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಆ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ರೈತ ಗುರ್ನಮ್ ಸಿಂಗ್ ಚಾದುನಿ ಆರೋಪಿಸಿದ್ದಾರೆ. ನಮ್ಮ ಹೋರಾಟದ ಉದ್ದೇಶ ಪೂರ್ತಿಯಾಗುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ.
ಅಮಿತ್ ಶಾ ಪ್ರಸ್ತಾವನೆಯನ್ನು ನಿರಾಕರಿಸಿದ್ದ ರೈತರು:
ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಸಂಧಾನ ಮಾತುಕತೆ ಆಹ್ವಾನವನ್ನು ಈಗಾಗಲೇ ರೈತರು ನಿರಾಕರಿಸಿದ್ದಾರೆ. ಶಾಂತಿ ಮಾತುಕತೆ ನಡೆಸಲು ಪ್ರತಿಭಟನಾನಿರತ ರೈತರೆಲ್ಲ ಬುರಾರಿ ಸ್ಥಳಕ್ಕೆ ತೆರಳಬೇಕು ಎಂದು ಅಮಿತ್ ಶಾ ಷರತ್ತು ವಿಧಿಸಿದ್ದರು. ಈ ಹಿನ್ನೆಲೆ ಕೇಂದ್ರದ ಪ್ರಸ್ತಾವನೆಯನ್ನು ರೈತರು ತಳ್ಳಿ ಹಾಕಿದ್ದಾರೆ. ಕೇಂದ್ರ ಸರ್ಕಾರವು ಮೊದಲು ಷರತ್ತು ವಿಧಿಸುವುದನ್ನು ಬಿಡಬೇಕು. ಕೃಷಿ ಸಂಬಂಧಿತ ಕಾಯ್ದೆಗಳಿಂದ ರೈತರಿಗೆ ಅನುಕೂಲ ಆಗಲಿವೆ ಎಂದು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಅದರ ಬದಲಿಗೆ ತಮ್ಮ ಪ್ರಸ್ತಾವನೆಯನ್ನು ಹಿಡಿದುಕೊಂಡು ನೇರವಾಗಿ ಚರ್ಚೆಗೆ ಬರಲಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.