ರೈತರ ಪಾಲಿಗೆ ಕೃಷಿ ಸಂಬಂಧಿತ ಮಸೂದೆಯೇ ಡೆತ್ ವಾರಂಟ್!
ನವದೆಹಲಿ, ಸಪ್ಟೆಂಬರ್.20: ಲೋಕಸಭೆಯಲ್ಲಿ ಅಂಗೀಕಾರಗೊಂಡ ಕೃಷಿ ಸಂಬಂಧಿತ ಮಸೂದೆಗಳನ್ನು ಭಾನುವಾರ ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ರೈತರ ಆತ್ಮದ ಮೇಲೆ ದಾಳಿ ನಡೆಸುತ್ತಿರುವ ಈ ಮಸೂದೆಗೆ ನಾವು ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿತ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿರುವ ರಾಜ್ಯಸಭಾ ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಭಜ್ವಾ, ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಮಸೂದೆಗಳು ದೇಶದ "ರೈತರ ಪಾಲಿನ ಡೆತ್ ವಾರೆಂಟ್" ಎಂದು ವಾಖ್ಯಾನಿಸಿದ್ದಾರೆ.
ಕೃಷಿ ರಂಗದಲ್ಲೂ 'ಜಿಯೋ' ಜಿಂಗಾಲಾಲಾ: ಮಾಜಿ ಸಚಿವರ ಮಾತಿನ ಗೂಡಾರ್ಥವೇನು?
ರೈತ ವಿರೋಧಿ ಮಸೂದೆಗೆ ಕಾಂಗ್ರೆಸ್ ಎಂದಿಗೂ ಒಪ್ಪುವುದಿಲ್ಲ. ರೈತರ ಪಾಲಿಗೆ ಡೆತ್ ವಾರೆಂಟ್ ಆಗಿರುವ ಮಸೂದೆಗೆ ಕಾಂಗ್ರೆಸ್ ಸಂಸದರು ಯಾವುದೇ ಕಾರಣಕ್ಕೂ ಅಂಕಿತ ಹಾಕುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಗ್ ಭಜ್ವಾ ಪಟ್ಟು ಹಿಡಿದಿದ್ದರು. ಕೃಷಿ ಸಂಬಂಧಿತ ಮಸೂದೆಯು ರಾಜ್ಯಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನೆಲೆ ರಾಜ್ಯಸಭೆ ಕಲಾಪವನ್ನು ಸ್ಪೀಕರ್ ಸೋಮವಾರ ಬೆಳಗ್ಗೆ 9 ಗಂಟೆಗೆ ಮುಂದೂಡಿದರು.
ಮೇಲ್ಮನೆಯಲ್ಲಿ ಗೊಂದಲ ಸೃಷ್ಟಿಸಿದ ಚರ್ಚೆ
ಕೃಷಿ ಸಂಬಂಧಿತ ಮಸೂದೆಗಳಿಗೆ ಅಂಕಿತ ಹಾಕುವ ವಿಚಾರವು ಸಾಕಷ್ಟು ಗೊಂದಲವನ್ನು ಸೃಷ್ಟಿಸಿದವು. ಕೇಂದ್ರ ಸರ್ಕಾರದ ನೀತಿಗೆ ವಿರೋಧ ಪಕ್ಷದ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ದೇಶದ ರೈತರಿಗೆ ಕೇಂದ್ರ ಸರ್ಕಾರವು ಒದಗಿಸಲು ಹೊರಟಿರುವ ಈ ಸೌಲಭ್ಯವು ರೈತರಿಗೆ ಅಗತ್ಯವಿಲ್ಲ. ಹೀಗಿದ್ದ ಮೇಲೆ ಒತ್ತಾಯಪೂರ್ವಕವಾಗಿ ಈ ಸೌಲಭ್ಯವನ್ನು ಒದಗಿಸುವ ಅನಿವಾರ್ಯತೆ ಕೇಂದ್ರ ಸರ್ಕಾರಕ್ಕೇನಿದೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಹರಿಯಾಣ ಮತ್ತು ಪಂಜಾಬ್ ರೈತರ ಮೇಲೆ ದಾಳಿ
ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಮೂರು ಮಸೂದೆಗಳನ್ನು ಹರಿಯಾಣ ಮತ್ತು ಪಂಜಾಬ್ ರೈತರಿಗೆ ಭಾರಿ ಹೊಡೆತ ಕೊಡಲಿದೆ. "ಈ ಮಸೂದೆಗಳನ್ನು ಹರಿಯಾಣ ಮತ್ತು ಪಂಜಾಬ್ ರೈತರ ಆತ್ಮದ ಮೇಲೆ ಕೇಂದ್ರ ಸರ್ಕಾರವು ನಡೆಸುತ್ತಿರುವ ದಾಳಿ" ಎಂದು ಕಾಂಗ್ರೆಸ್ ವಾಖ್ಯಾನಿಸಿದೆ. ಕೃಷಿ ಮತ್ತು ಮಾರುಕಟ್ಟೆ ನಡುವಿನ ಸಹಕಾರಿ ಮನೋಭಾವಕ್ಕೆ ಕೇಂದ್ರ ಸರ್ಕಾರದ ಹೊಸ ನೀತಿಯು ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ಮಸೂದೆಗಳು ರೈತ ವಿರೋಧಿ ಎಂದೇ ಇಲ್ಲ: ಉಲ್ಟಾ ಹೊಡೆದ ಹರ್ಸಿಮ್ರತ್ ಕೌರ್
"ದಯವಿಟ್ಟು ಕೃಷಿ ವಿರೋಧಿ ಮಸೂದೆ ಜಾರಿಗೊಳಿಸಬೇಡಿ"
ಭಾರತದಲ್ಲಿ ದಯವಿಟ್ಟು ಕೃಷಿ ವಿರೋಧಿ ಕಾನೂನು ಜಾರಿಗೊಳಿಸುವುದು ಬೇಡ. ಜನರ ಗ್ರಹಿಕೆಗೆ ಬಾರದ ರೀತಿಯಲ್ಲಿ ನೀವು ಏನನ್ನಾದರೂ ಜಾರಿಗೊಳಿಸಬಹುದು. ನಾನು ಅದರ ಬಗ್ಗೆ ಮನವರಿಕೆ ಮಾಡುವ ಕೆಲಸವನ್ನು ಮಾಡುತ್ತೇನೆ. ಆದರೆ ನನ್ನ ಮಾತುಗಳು ಸಾಕಾಗುವುದಿಲ್ಲ. ಏಕೆಂದರೆ ನನ್ನ ಧ್ವನಿಯು ನಿಮ್ಮಷ್ಟು ದೊಡ್ಡದಾಗಿಲ್ಲ" ಎಂದು ಮಾಜಿ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ಕೇಂದ್ರ ಸರ್ಕಾರವನ್ನು ಕುಟುಕಿದ್ದರು.
ವಿಪಕ್ಷಗಳ ಟೀಕೆಗೆ ಕೇಂದ್ರ ಸರ್ಕಾರದ ಉತ್ತರವೇನು?
ಕಳೆದ ಜೂನ್ ತಿಂಗಳಿನಲ್ಲೇ ಕೇಂದ್ರ ಸರ್ಕಾರವು ರೈತರ ಉತ್ಪಾದನೆಯ ವ್ಯಾಪಾರ ಮತ್ತು ವಾಣಿಜ್ಯ(ಪ್ರಚಾರ ಮತ್ತು ಸೌಲಭ್ಯ) ಮಸೂದೆ, ಕೃಷಿ ಸೇವೆ ಮತ್ತು ಬೆಲೆ ನಿಗದಿ ಬಗ್ಗೆ ಒಪ್ಪಂದ (ಸಬಲೀಕರಣ ಮತ್ತು ಸಂರಕ್ಷಣೆ) ಮಸೂದೆ, ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆಗಳನ್ನು ಮಂಡಿಸಿತ್ತು. ವಿಪಕ್ಷಗಳ ವಿರೋಧದ ಹಿನ್ನೆಲೆ ಮುಂದೂಡಿಕೆಯಾಗುತ್ತಿದ್ದ ಮಸೂದೆಗಳಿಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ದೇಶದ ಬಡವ ಮತ್ತು ಮಧ್ಯಮ ವರ್ಗದ ರೈತರಿಗೆ ಈ ಮಸೂದೆಗಳಿಂದ ಹೆಚ್ಚು ಸಹಾಯವಾಗಲಿದೆ ಎಂದು ಕೇಂದ್ರ ಸರ್ಕಾರವು ವಾದಿಸುತ್ತಿದೆ.