ರೈತರಿಗೆ ಕೃಷಿ ಸಂಬಂಧಿತ ಮಸೂದೆ ಮರಣಶಾಸನ: ರಾಹುಲ್ ಗಾಂಧಿ
ನವದೆಹಲಿ, ಸಪ್ಟೆಂಬರ್.20: ಮುಂಗಾರು ಅಧಿವೇಶನದ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಕೃಷಿ ಸಂಬಂಧಿತ ಮಸೂದೆಗಳು ದೇಶದ ರೈತರ ಪಾಲಿನ 'ಮರಣ ಶಾಸನ' ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟೀಕಿಸಿದ್ದಾರೆ.
"ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಅಂಗೀಕರಿಸಿದ ಕೃಷಿ ಸಂಬಂಧಿತ ಮಸೂದೆಗಳು ರೈತರಿಗೆ ಮರಣ ಶಾಸನದಂತೆ ಆಗುತ್ತವೆ. ಅಲ್ಲದೇ ಕೇಂದ್ರ ಸರ್ಕಾರದ ತೀರ್ಮಾನವು ಪ್ರಜಾಪ್ರಭುತ್ವ ವ್ಯವಸ್ಥೆಯೇ ತಲೆ ತಗ್ಗಿಸುವಂತೆ ಮಾಡಿದೆ" ಎಂದು ರಾಹುಲ್ ಗಾಂಧಿ ದೂಷಿಸಿದ್ದಾರೆ.
ಕೃಷಿ ಸಂಬಂಧಿತ ಮಸೂದೆ ಅಂಗೀಕಾರಕ್ಕೂ ಮೊದಲು 'ಮಹಾಭಾರತ'!
"ಮಣ್ಣಿನಿಂದ ಚಿನ್ನವನ್ನು ಬೆಳೆಯುವ ರೈತರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಕಣ್ಣೀರು ಹಾಕಿಸಲು ಹೊರಟಿದೆ. ಕೃಷಿ ಸಂಬಂಧಿತ ಮಸೂದೆ ಹೆಸರಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸುವಂತಾ ಕೆಲಸವನ್ನು ಕೇಂದ್ರ ಸರ್ಕಾರವು ಮಾಡಲು ಹೊರಟಿದೆ. ರಾಜ್ಯಸಭೆಯಲ್ಲಿ ಅಂಗೀಕರಿಸಿದ ಮಸೂದೆಯು ರೈತರ ಪಾಲಿನ ಮರಣ ಶಾಸನವಾಗಲಿದೆ" ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ರೈತವಿರೋಧಿ ಕಾಯ್ದೆ:
ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಕೃಷಿ ಸಂಬಂಧಿತ ಮಸೂದೆಯು ರೈತ ವಿರೋಧಿ ಕಾಯ್ದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ 'ಕಪ್ಪು ಕಾನೂನು' ಎಂದು ಕಿಡಿ ಕಾರಿದ್ದರು. ಇದಕ್ಕೂ ಮೊದಲು ಪ್ರಧಾನಮಂತ್ರಿಯವರು ದೇಶದ ರೈತರನ್ನು ಬಂಡವಾಳಶಾಹಿಗಳ ಅಡಿಯಾಳು ಮಾಡುವುದಕ್ಕೆ ಹೊರಟಿದ್ದಾರೆ ಎಂದು ರಾಹುಲ್ ಗಾಂಧಿ ದೂಷಿಸಿದ್ದರು.
ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಪ್ರಶ್ನೆ:
1. ಎಪಿಎಂಸಿ ಮತ್ತು ಕಿಸಾನ್ ಮಾರುಕಟ್ಟೆಗಳಿಲ್ಲದೇ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಸಿಗುವುದು ಹೇಗೆ?
2. ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸುವುದಕ್ಕೆ ಏಕೆ ಸಾಧ್ಯವಿಲ್ಲ?
3. ದೇಶದ ರೈತರನ್ನು ಬಂಡವಾಳಶಾಹಿಗಳ ಅಡಿಯಾಳು ಮಾಡುವುದಕ್ಕೆ ಹೊರಟಿದ್ದೀರಾ?