ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಖ್ಯಾತನಟಿ ಖುಷ್ಬೂ
ನವದೆಹಲಿ, ಅಕ್ಟೋಬರ್.12: ದಕ್ಷಿಣ ಭಾರತದ ಖ್ಯಾತನಟಿ ಖುಷ್ಬೂ ಸುಂದರ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನವದೆಹಲಿಯ ಪಕ್ಷದ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷದ ಜನರಲ್ ಸೆಕ್ರೆಟರಿ ಸಿ.ಟಿ.ರವಿ ಮತ್ತು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಸೇರಿದಂತೆ ಹಲವು ಕಾರ್ಯಕರ್ತರ ಸಮ್ಮುಖದಲ್ಲಿ ಖುಷ್ಬೂ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕಳೆದ 2014ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ನಟಿ ಖುಷ್ಬೂ ಅವರು ಬಿಜೆಪಿಗೆ ಸೇರಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಹಾಡಿ ಹೊಗಳಿದ್ದಾರೆ.
ವಕ್ತಾರ ಸ್ಥಾನದಿಂದ ಖುಷ್ಬೂ ತೆಗೆದು ಹಾಕಿದ ಕಾಂಗ್ರೆಸ್!
ಬಿಜೆಪಿಗೆ ಸೇರಿದ ನಂತರ ಮಾತನಾಡಿದ ಖುಷ್ಬೂ ಸುಂದರ್ ಅವರು, "ದೇಶವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯಂತಹ ನಾಯಕರು ಬೇಕು. ಈ ವಿಷಯವನ್ನು ನಾನು ಕಾಲಾನಂತರದಲ್ಲಿ ಅರಿತುಕೊಂಡಿದ್ದೇನೆ" ಎಂದು ತಿಳಿಸಿದ್ದಾರೆ.
ರಾಜಕಾರಣಕ್ಕಾಗಿ ಬಿಜೆಪಿಯ ನೀತಿಗಳಿಗೆ ವಿರೋಧ
ನಾನು ಕಾಂಗ್ರೆಸ್ ನಲ್ಲಿ ತೀರಾ ಕೆಳಮಟ್ಟದಲ್ಲಿದ್ದೆ. ಕೆಲವು ಬಾರಿ ನಾವು ಯಾವುದೇ ಕಾರಣಗಳಿಲ್ಲದೆಯೂ ಬಿಜೆಪಿಯ ನೀತಿಗಳನ್ನು ವಿರೋಧಿಸಿದ್ದು ಇದೆ. ಇಂಥ ನಡುವಳಿಕೆಯನ್ನು ನಾನು ತೋರಿಸಲಿಲ್ಲ. ಆ ರೀತಿ ತಂತ್ರಗಳನ್ನು ನಾನು ಎಂದಿಗೂ ಬಳಸಿಕೊಳ್ಳಲಿಲ್ಲ ಎಂದು ನಟಿ ಖುಷ್ಬೂ ಸುಂದರ್ ತಿಳಿಸಿದ್ದಾರೆ.
ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಒಳಿತು
"ಬಿಜೆಪಿಯಿಂದ ನನಗೇನು ಸಿಗುತ್ತದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ. ಬದಲಿಗೆ ಬಿಜೆಪಿಯಿಂದ ದೇಶಕ್ಕೇನು ಸಿಗುತ್ತದೆ ಎನ್ನುವುದರ ಬಗ್ಗೆ ನಾನು ಆಲೋಚಿಸುತ್ತೇನೆ. ದೇಶದ 128 ಕೋಟಿ ಜನರು ಒಬ್ಬ ವ್ಯಕ್ತಿಯ ಮೇಲೆ ಭರವಸೆಯಿಟ್ಟುಕೊಂಡಿದ್ದಾರೆ ಎಂದರೆ ಅದು ಪ್ರಧಾನಮಂತ್ರಿ ನರೇಂದ್ರ ಮೋದಿ ಒಬ್ಬರೇ. ಹಾಗಿದ್ದ ಮೇಲೆ ಅವರಿಂದ ಖಂಡಿತವಾಗಿಯೂ ದೇಶಕ್ಕೆ ಒಳಿತು ಆಗುತ್ತದೆ" ಎಂದು ನಟಿ ಖುಷ್ಬೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜೀನಾಮೆಗೆ ಕಾರಣ ತಿಳಿಸಿದ ಸೋನಿಯಾ ಗಾಂಧಿಯವರಿಗೆ ಪತ್ರ
ಕಾಂಗ್ರೆಸ್ ನಲ್ಲಿ ಕೆಳಮಟ್ಟದ ನಾಯಕರ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಪಕ್ಷದಲ್ಲೇ ಮೇಲ್ಮಟ್ಟದಲ್ಲಿ ಕುಳಿತ ನಾಯಕರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ನಮ್ಮಂಥ ನಾಯಕರು ತುಳಿತಕ್ಕೊಳಗಾಗಿದ್ದೇವೆ. ಹಿರಿಯ ನಾಯಕರ ಜೊತೆಗಂತೂ ಸಂಪರ್ಕವನ್ನೇ ಕಳೆದುಕೊಂಡಂತೆ ಆಗಿದೆ. ಹೀಗಾಗಿ ಪಕ್ಷಕ್ಕಾಗಿ ಮತ್ತು ದೇಶಕ್ಕಾಗಿ ನಿಷ್ಠಾವಂತರಾಗಿ ಕೆಲಸ ಮಾಡಲು ಇಚ್ಛಿಸುವ ನನ್ನಂಥ ನಾಯಕರಿಗೆ ಬಹಳಷ್ಟು ಬೇಸರ ಮತ್ತು ನೋವಾಗುತ್ತದೆ. ಈ ಹಿನ್ನೆಲೆ ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಸೋನಿಯಾ ಗಾಂಧಿ ಅವರಿಗೆ ನಟಿ ಖುಷ್ಬೂ ಸುಂದರ್ ಅವರು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಕ್ಷದ ಉನ್ನತ ಸ್ಥಾನದಿಂದ ನಟಿ ಖುಷ್ಬೂ ವಜಾ
ಕೇಂದ್ರ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪರವಾಗಿ ಮಾತನಾಡಿದ್ದ ಖುಷ್ಬೂ ಅವರ ವಿರುದ್ಧ ಕಾಂಗ್ರೆಸ್ ನಾಯಕರೇ ಕೆಂಡಾಮಂಡಲಾಗಿದ್ದರು. ಕಳೆದ ಜುಲೈ ತಿಂಗಳಿನಿಂದಲೂ ಕಾಂಗ್ರೆಸ್ ನಲ್ಲಿ ಆಂತರಿಕ ತಿಕ್ಕಾಟದಿಂದ ಬೇಸರಗೊಂಡಿದ್ದ ನಟಿ ಖುಷ್ಬೂ ಅವರು ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಕ್ಕಾಗಿಯೇ ನವದೆಹಲಿಗೆ ತೆರಳಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ನೀಡಿದ್ದ ಪ್ರಮುಖ ಸ್ಥಾನಗಳಿಂದ ಖುಷ್ಬೂ ಸುಂದರ್ ರನ್ನು ವಜಾಗೊಳಿಸಲಾಗಿತ್ತು.