ದೆಹಲಿ ಟಗ್ ಆಫ್ ವಾರ್ : ಈ ಎಂಟು ಅಂಶಗಳೇ ನಿರ್ಣಾಯಕ
ನವದೆಹಲಿ, ಫೆ. 6: ರಾಷ್ಟ್ರ ರಾಜಧಾನಿಯಲ್ಲಿ ವಿಧಾನಸಭೆ ಚುನಾವಣೆ ಕುತೂಹಲದ ಘಟ್ಟ ತಲುಪಿದೆ. ಗೆಲುವಿನ ನಾಗಾಲೋಟದಲ್ಲಿದ್ದ ಬಿಜೆಪಿಗೆ ಅರವಿಂದ ಕೇಜ್ರಿವಾಲ್ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವ ಕಾರಣ ಗೆಲುವು ಆ ಪಕ್ಷಕ್ಕೆ ಪ್ರತಿಷ್ಠೆಯಾಗಿದ್ದರೆ, ಆಮ್ ಆದ್ಮಿಗೆ ಅಳಿವು ಉಳಿವಿನ ಹೋರಾಟ.
ಈ ಮಧ್ಯೆ ಡೇರಾ ಸಚ್ಚಾ ಸೌದಾ ಸಂಘಟನೆಯು ಬಿಜೆಪಿ ಹಾಗೂ ಅಕಾಲಿ ದಳಕ್ಕೆ ಬೆಂಬಲ ವ್ಯಕ್ತಪಡಸಿದೆ. ಮಮತಾ ಬ್ಯಾನರ್ಜಿ ಆಪ್ ಹಿಂದೆ ನಿಂತಿದ್ದಾರೆ. ಆದರೆ, ನವದೆಹಲಿ ಚುನಾವಣೆಯ ಮೇಲೆ ಪರಿಣಾಮ ಬೀರಬಹುದಾದ ಅಂಶಗಳು ಯಾವುವು ಗೊತ್ತೇ? [ಎಎಪಿಗೆ ಅರ್ಧ ಶತಕ ಸಂಭ್ರಮ]
1. ಅರವಿಂದ ಕೇಜ್ರಿವಾಲ್ ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಹೆಚ್ಚು ಅರ್ಹ ವ್ಯಕ್ತಿ ಎಂಬುದು ಸಮೀಕ್ಷೆಯಲ್ಲಿ ಬಯಲಾಗಿದೆ. ಆದರೆ, ಈ ಅಭಿಪ್ರಾಯ ಮತವಾಗಿ ಪರಿಣಮಿಸಬಲ್ಲದೇ ಎಂಬುದೇ ಖಾತ್ರಿಯಾಗಿಲ್ಲ.
2. ಲೋಕಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಲು ನರೇಂದ್ರ ಮೋದಿ ವರ್ಚಸ್ಸು ಕಾರಣ. ಇದನ್ನೇ ಆಧಾರವಾಗಿಟ್ಟುಕೊಂಡು ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲೂ ಅಭೂತಪೂರ್ವ ಜಯ ಗಳಿಸಿದ್ದಾರೆ. ಆದರೆ, ದೆಹಲಿಯಲ್ಲೇ ಆಡಳಿತ ನಡೆಸುವ ಮೋದಿ ಅವರಿಗೆ ಈ ಚುನಾವಣೆ ನಿಜವಾಗಿಯೂ ಪರೀಕ್ಷೆ ಎನಿಸಿದೆ. [ದೆಹಲಿ ಚುನಾವಣೆ ಪಕ್ಷಿ ನೋಟ]
3. ಅರವಿಂದ ಕೇಜ್ರಿವಾಲ್ ಅವರ ದಾಳಿ ಎದುಸಬಲ್ಲ ನಾಯಕತ್ವಕ್ಕಾಗಿ ಹುಡುಕುತ್ತಿದ್ದ ಅಮಿತ್ ಶಾ ಕೊನೆಗೆ ಕಿರಣ್ ಬೇಡಿಗೆ ಮೊರೆ ಹೋದರು. ಅಣ್ಣಾ ಹಜಾರೆ ಜೊತೆ ಲೋಕಪಾಲ್ ಕಾಯ್ದೆ ಜಾರಿಗಾಗಿ ನಡೆದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಿರಣ್ ಅವರು ಕೇಜ್ರಿವಾಲ್ ವಿರುದ್ಧ ಸಮರ್ಥ ನಾಯಕರಾಗಬಲ್ಲರೇ ಎಂಬುದನ್ನು ಕಾದು ನೋಡಬೇಕಾಗಿದೆ.
4. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ರಾಜ್ಯದಲ್ಲೂ ಅದೇ ಪಕ್ಷ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಕಾರ್ಯಗಳಿಗೆ ಸ್ಪಷ್ಟ ಬೆಂಬಲ ದೊರೆಯಲಿದೆ. ಈ ಅಂಶ ಬಿಜೆಪಿಗೆ ಹೆಚ್ಚು ನೆರವಾಗುವ ನಿರೀಕ್ಷೆ ಇದೆ. [ಬಿಜೆಪಿ, ಎಎಪಿ ಭರವಸೆಯ ಸಾಮ್ಯತೆಗಳು]
5. ದೆಹಲಿಯ ಹಿಂದುಳಿದ ವರ್ಗದವರು ಹಾಗೂ ಬಡವರು ಆಮ್ ಆದ್ಮಿ ಪರ ವಹಿಸುವ ಲಕ್ಷಣವಿದೆ. ಇವು ಕಾಂಗ್ರೆಸ್ನ ಸಾಂಪ್ರದಾಯಿಕ ಮತ ಬ್ಯಾಂಕ್ ಆಗಿತ್ತು. ಆದರೆ, 49 ದಿನಗಳ ಆಪ್ ಆಡಳಿತದಲ್ಲಿ ಪೊಲೀಸರ ಹಫ್ತಾ ವಸೂಲಿ ನಿಂತಿದ್ದಲ್ಲದೆ, ಲೈಂಗಿಕ ಕಿರುಕುಳಕ್ಕಾಗಿ ಸಹಾಯವಾಣಿ ಸ್ಥಾಪಿಸಿದ್ದು ಈ ಚುನಾವಣೆಯಲ್ಲಿ ಆಮ್ ಆದ್ಮಿಗೆ ವರವಾಗುವ ನಿರೀಕ್ಷೆಯಿದೆ.
7. ಚುನಾವಣೆ ಘೋಷಣೆ ತಡವಾದ ಕಾರಣ ಆಮ್ ಆದ್ಮಿಗೆ ಪುನರ್ ಸಂಘಟನೆಗೊಳ್ಳಲು ಅವಕಾಶ ಸಿಕ್ಕಿತು. ಆದರೆ, ಸಾಮಾನ್ಯ ಜನರನ್ನು ಈ ಪ್ರಮಾಣದಲ್ಲಿ ತಲುಪಲು ಬಿಜೆಪಿ ವಿಫಲವಾಗಿದೆ ಎನ್ನಲಾಗಿದೆ. [ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಹಣದ ಮೂಲ]
8. ದೆಹಲಿಯಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಪ ಸಂಖ್ಯಾತರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಈ ವರ್ಗ ಘರ್ ವಾಪಸಿ ಕಾರ್ಯಕ್ರಮ ಹಾಗೂ ಸಾಧ್ವಿ ನಿರಂಜನ್ ಮತ್ತು ಸಾಕ್ಷಿ ಮಹಾರಾಜ್ ಅವರ ಅಲ್ಪಸಂಖ್ಯಾತ ವಿರೋಧಿ ಹೇಳಿಕೆಗಳ ಹಿನ್ನೆಲೆಯಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದು ಮುಖ್ಯವಾಗುತ್ತದೆ.