Video: ದೆಹಲಿ ಮಸೀದಿ ಮೇಲೆ ಹಿಂದೂ ಬಾವುಟ ಹಾರಿಸಿದ ಹಿಂದಿನ ರಹಸ್ಯ
ನವದೆಹಲಿ, ಫೆಬ್ರವರಿ.26: ಕಳೆದ ಮೂರು ದಿನಗಳಿಂದಲೂ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಮತ್ತು ಪರವಾಗಿ ನಡೆದ ಪ್ರತಿಭಟನೆಯ ಕಿಚ್ಚಿನಲ್ಲಿ ರಾಷ್ಟ್ರ ರಾಜಧಾನಿಯೇ ಹೊತ್ತಿ ಉರಿಯುತ್ತಿದೆ.
ನವದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ನಡುವೆಯೇ ರಾಣಾ ಆಯೂಬ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ ವಿಡಿಯೋ ಸಾಕಷ್ಟು ಸುದ್ದಿಯಾಗಿದೆ. ಫೆಬ್ರವರಿ.25ರಂದು ಅದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ದೆಹಲಿ ಹಿಂಸಾಚಾರದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ ಎಷ್ಟು?
ದೆಹಲಿಯ ಅಶೋಕ್ ನಗರದಲ್ಲಿ ಇರುವ ಬದಿ ಮಸೀದಿಯ ಗೋಪುರದ ಮೇಲೆರಿದ ದುಷ್ಕರ್ಮಿಗಳು ಅಲ್ಲಿ ಹಿಂದೂ ಬಾವುಟ ಹಾರಿಸಿದ ವಿಡಿಯೋ ಬಗ್ಗೆ ಸರಿ-ತಪ್ಪಿನ ಚರ್ಚೆ ನಡೆಯುತ್ತಿತ್ತು. ಮೊದಲಿಗೆ ಇದೊಂದು ಫೇಕ್ ನ್ಯೂಸ್ ಎಂದು ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದರು. ನಂತರದಲ್ಲಿ ಇಂಥದೊಂದು ಘಟನೆ ನಡೆದಿರುವುದು ಸ್ಪಷ್ಟ ಎಂದು ಅಲ್ಟ್ ಸುದ್ದಿ ಸಂಸ್ಥೆಯು ವರದಿ ಮಾಡಿದೆ.
ಫೆಬ್ರವರಿ.25ರ ಮಧ್ಯಾಹ್ನ 3.57ಕ್ಕೆ ನಡೆದ ಘಟನೆ
ನವದೆಹಲಿಯ ಅಶೋಕ್ ನಗರದಲ್ಲಿ ಇರುವ ಮಸೀದಿಯ ಮೇಲೆ ಏರಿದ ದುಷ್ಕರ್ಮಿಗಳು ಅಲ್ಲಿ ಹಿಂದೂ ಬಾವುಟ ಮತ್ತು ತ್ರಿವರ್ಣ ಧ್ವಜವನ್ನು ಹಾರಿಸಿದ್ದು, ಗೋಪುರದ ಮೇಲಿದ್ದ ನಕ್ಷತ್ರದ ಚಿಹ್ನೆಯನ್ನು ಧ್ವಂಸಗೊಳಿಸಿದ್ದರು. ಫೆಬ್ರವರಿ.25ರ ಮಧ್ಯಾಹ್ನ 3.57 ಗಂಟೆಗೆ ಘಟನೆ ನಡೆದಿರುವ ಬಗ್ಗೆ ಫೋಟೋ ಕ್ಲಿಕ್ ಮಾಡಿದ ದಾಖಲೆಯ ಸಮೇತವಾಗಿ ಆಲ್ಟ್ ಸುದ್ದಿ ಸಂಸ್ಥೆಯು ವರದಿಯನ್ನು ಪ್ರಕಟಿಸಿದೆ.
2 ವರ್ಷದ ಹಿಂದಿನ ವಿಡಿಯೋ ಎಂಬ ವದಂತಿ
ಮಸೀದಿ ಮೇಲೆ ಹಿಂದೂ ಬಾವುಟ ಹಾರಿಸಿದ ಈ ಘಟನೆಯು ಎರಡು ವರ್ಷಗಳ ಹಿಂದೆ ಬಿಹಾರದ ಸಮಸ್ತಿಪುರ್ ನಲ್ಲಿ ನಡೆದಿತ್ತು. ಇದಕ್ಕೂ ದೆಹಲಿಯೂ ಯಾವುದೇ ಸಂಬಂಧವಿಲ್ಲ. ಇಂಥ ಸುಳ್ಳು ವದಂತಿಗಳನ್ನು ಹರಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೆಲವು ಟ್ವಿಟ್ಟಿಗರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರು.
"ಮಸೀದಿ ಮೇಲೆ ಬಾವುಟ ನೆಟ್ಟಿದ್ದನ್ನು ನಾನೇ ಕಂಡಿದ್ದೇನೆ"
ದೆಹಲಿ ಅಶೋಕ್ ವಿಹಾರ್ ನಲ್ಲಿ ಅಲ್ಲ. ಅಶೋಕ್ ನಗರದಲ್ಲಿ ಇರುವ ಮಸೀದಿಯ ಗೋಪುರವನ್ನು ಏರಿದ ದುಷ್ಕರ್ಮಿಗಳು ಅಲ್ಲಿ ಬಾವುಟವನ್ನು ಹಾರಿಸಿದ ಘಟನೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ಪಕ್ಕದ ಚಪ್ಪಲಿ ಅಂಗಡಿಗೆ ತೆರಳಿದ್ದ ವೇಳೆ ಮಸೀದಿ ಮೇಲೆ ದುಷ್ಕರ್ಮಿಗಳ ನಡೆಸಿದ ದುಷ್ಕೃತ್ಯವು ನೇರವಾಗಿ ಕಂಡಿದ್ದೇನೆ. ಈ ದೃಶ್ಯವನ್ನು ಸೆರೆ ಹಿಡಿದ ಪತ್ರಕರ್ತ ಅವಿಚಲ್ ದುಬೆ ಕೂಡಾ ಅಂದು ನನ್ನ ಪಕ್ಕದಲ್ಲಿದ್ದರು ಎಂದು ನೌಮಿ ಬರ್ತೊನ್ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
|
ತಪ್ಪಿತಸ್ಥರ ವಿರುದ್ಧ ಈವರೆಗೆ ಯಾವುದೇ ಕ್ರಮವಿಲ್ಲ
ಇನ್ನು, ಮಂಗಳವಾರ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲೆಲ್ಲ ಹರಿದಾಡಿದೆ. ಆದರೆ, ಈವರೆಗೂ ತಪ್ಪಿಸ್ಥರ ಪತ್ತೆ ಮಾಡುವಲ್ಲಿ ದೆಹಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.