ಫೇಸ್ಬುಕ್ ಪಾಲಿಸಿ ಮುಖ್ಯಸ್ಥೆ ಅಂಖಿ ದಾಸ್ಗೆ ಜೀವ ಬೆದರಿಕೆ: ದೂರು ದಾಖಲು
ನವದೆಹಲಿ,ಆಗಸ್ಟ್ 17: ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ಸಾರ್ವಜನಿಕ ನೀತಿ ನಿರ್ದೇಶಕಿ ಅಂಖಿ ದಾಸ್ಗೆ ಜೀವ ಬೆದರಿಕೆ ಬರುತ್ತಿದ್ದು, ಸಂತ್ರಸ್ತ ನಿರ್ದೇಶಕಿ ದೆಹಲಿ ಪೋಲೀಸರ ಕ್ರೈ ಬ್ರ್ಯಾಂಚ್ನಲ್ಲಿ ದೂರು ನೀಡಿದ್ದಾರೆ.
ತಮಗೆ ಫೇಸ್ಬುಕ್ ಹಾಗೂ ಟ್ವಿಟರ್ ಮೂಲಕ ಬೆದರಿಕೆ ನೀಡಲಾಗುತ್ತಿದೆ ಎಂದು ಅಂಖಿ ದಾಸ್ ಬೆದರಿಕೆ ಕುರಿತು ದೂರು ನೀಡಿದ್ದಾರೆ. ಜೊತೆಗೆ ಫೋನ್ ಮಾಡಿ ಕೂಡ ಬೆದರಿಕೆ ಹಾಕಲಾಗುತ್ತಿದೆ ಎಂದು ತಮ್ಮ ನಾಲ್ಕು ಪುಟಗಳ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬೆದರಿಕೆ ಕರೆಗಳು ಆಗಸ್ಟ್ 14ರ ಬಳಿಕ ಬರಲು ಶುರು ಆದವು ಎಂದು ಅಂಖಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳ ದೊರೆಯಾಗಲು ಹೊರಟ ಮಾರ್ಕ್ ಜುಕರ್ಬರ್ಗ್: 700 ಕೋಟಿ ಬಳಕೆದಾರರು
ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, "ದೂರು ಸ್ವೀಕರಿಸಲಾಗಿದೆ ಮತ್ತು ಈ ವಿಷಯವು ತನಿಖೆಯಲ್ಲಿದೆ" ಎಂದು ಹೇಳಿದ್ದು, ಆಂಖಿ ಅವರು 5-6 ಜನರ ಹೆಸರನ್ನೂ ಸಹ ಉಲ್ಲೇಖಿಸಿದ್ದಾರೆ. ದೂರು ಪಡೆದ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.
ಬಿಜೆಪಿ ನಾಯಕರ ಭಾಷಣಗಳನ್ನು ಫೇಸ್ಬುಕ್ ನಿರ್ಲಕ್ಷಿಸುತ್ತಿದೆ..?
ಆಗಸ್ಟ್ 14 ರಂದು ಯುಎಸ್ ಮೂಲದ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟಗೊಂಡ ವರದಿಯೊಂದು ಫೇಸ್ಬುಕ್ ಭಾರತದಲ್ಲಿ ತನ್ನ ಕಾರ್ಯವನ್ನು ಸುಧಾರಿಸಲು ಯತ್ನಿಸುತ್ತಿದ್ದು, ಯಾವುದೇ ತೊಂದರೆಗಳಿಲ್ಲದೆ ಕೆಲಸ ಮಾಡಲು ಬಿಜೆಪಿ ನಾಯಕ ನಾಯಕರ ಪರ ಕಾರ್ಯನಿರ್ವಹಿಸುತ್ತಿದೆ ಎಂದಿದೆ.
‘ದ್ವೇಷ ಭಾಷಣ ನಿಯಮಗಳನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜಕಾರಣಿ ಮತ್ತು ಇತರ ಹಿಂದೂ ರಾಷ್ಟ್ರೀಯವಾದಿ ವ್ಯಕ್ತಿಗಳು ಮತ್ತು ಗುಂಪುಗಳಿಗೆ ಅನ್ವಯಿಸುವುದನ್ನು ಫೇಸ್ಬುಕ್ ನಿಲ್ಲಿಸಿದೆ ಎಂದು ಹೇಳಿದೆ. ಇದರಂತೆ ಬಿಜೆಪಿ ನಾಯಕರ ದ್ವೇಷ ಭಾಷಣಗಳನ್ನು ಫೇಸ್ಬುಕ್ ನಿರ್ಲಕ್ಷಿಸುತ್ತಿದೆ ಎಂದು ಅಮೆರಿಕದ ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣವನ್ನು ಬಿಜೆಪಿ ನಿಯಂತ್ರಿಸುತ್ತಿದೆ..!
ವಾಲ್ಸ್ಟ್ರೀಟ್ ಜರ್ನಲ್ ವರದಿಯನ್ನು ಉಲ್ಲೇಖಿಸಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಫೇಸ್'ಬುಕ್ ಮತ್ತು ವಾಟ್ಸ್'ಆ್ಯಪ್ ಗಳನ್ನು ಭಾರತದಲ್ಲಿ ಬಿಜೆಪಿ ಮತ್ತು ಆರ್'ಎಸ್ಎಸ್ ನಿಯಂತ್ರಿಸುತ್ತಿವೆ. ಈ ಜಾಲತಾಣಗಳನ್ನು ಬಳಸಿಕೊಂಡು ಮತದಾರರ ಮೇಲೆ ಪ್ರಭಾವ ಬೀರುತ್ತಿವೆ. ಅಮೆರಿಕಾದ ಮಾಧ್ಯಮಗಳು ಕೊನೆಗೂ ಫೇಸ್'ಬುಕ್'ನ ಬಗ್ಗೆ ಸತ್ಯ ಹೊರಗೆಡವಿವೆ ಎಂದು ಟ್ವೀಟ್ ಮಾಡಿದ್ದರು.
ಫೇಸ್ಬುಕ್ ನೀಡಿತು ಸ್ಪಷ್ಟನೆ
ಆಗಸ್ಟ್ 16ರಂದು ಕಾಂಗ್ರೆಸ್ ನಾಯಕರ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಫೇಸ್ಬುಕ್ ''ಯಾವುದೇ ರಾಜಕೀಯ ಪಕ್ಷವಾದರೂ, ಆ ಪಕ್ಷ ಯಾವುದೇ ಸ್ಥಾನದಲ್ಲಿದ್ದರೂ ಕೂಡ ಹಿಂಸಾಚಾರ ಪ್ರಚೋದಿಸುವ ದ್ವೇಷದ ಮಾತುಗಳು ಹಾಗೂ ವಿಷಯಗಳನ್ನು ನಾವು ನಿಷೇಧಿಸುದ್ದೇವೆ. ಈ ನೀತಿ ಇಡೀ ವಿಶ್ವದಲ್ಲಿ ಜಾರಿಯಲ್ಲಿದೆ ಎಂದು ತನ್ನ ವಿರುದ್ಧ ಕೇಳಿ ಬಂದಿರುವ ಪಕ್ಷಪಾತ ಆರೋಪ ಕುರಿತು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ ಫೇಸ್'ಬುಕ್ ಸ್ಪಷ್ಟನೆ ನೀಡಿದೆ.
ಯಾವುದೇ ತಾರತಮ್ಯವಿಲ್ಲದೆ ಫೋಸ್ಟ್ಗಳು ಡಿಲೀಟ್: ಫೇಸ್ಬುಕ್
ಫೇಸ್ಬುಕ್ ತನ್ನ ನಿಯಮಗಳ ಪ್ರಕಾರ ಯಾವುದೇ ರಾಜಕೀಯ ಒತ್ತಡ ಅಥವಾ ತಾರತಮ್ಯವಿಲ್ಲದೆ ದ್ವೇಷ ಭಾಷಣದಂತಹ ಪೋಸ್ಟ್ಗಳನ್ನು ತಕ್ಷಣ ತೆಗೆದುಹಾಕುತ್ತದೆ ಎಂದು ಹೇಳಿದೆ.
ಯಾವುದೇ ಪಕ್ಷ, ಯಾವುದೇ ರಾಜಕೀಯ ಸ್ಥಾನದಲ್ಲಿದ್ದರೂ, ಯಾವುದೇ ಸಂಬಂಧ ಇದ್ದರೂ ಕೂಡ ಹಿಂಸಾಚಾರ ಪ್ರಚೋದಿಸುವ ದ್ವೇಷದ ಭಾಷಣ, ಮಾತು ಹಾಗೂ ವಿಚಾರಗಳನ್ನು ನಾವು ನಿಷೇಧಿಸುತ್ತೇವೆ. ಈ ನೀತಿಗಳನ್ನು ಜಾಗತಿಕವಾಗಿ ಜಾರಿಗೊಳಿಸುತ್ತವೆ. ಈ ಕುರಿತು ಮತ್ತಷ್ಟು ಕೆಲಸಗಳು ಮಾಡುವ ಬಗ್ಗೆ ನಮಗೆ ತಿಳಿದಿದ್ದು, ಈ ಕುರಿತ ಕಾರ್ಯದಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ ಎಂದಿದೆ.