ಗುಜರಾತ್ನಿಂದ ರಾಜ್ಯಸಭೆಗೆ ಸಚಿವ ಜೈಶಂಕರ್ ಆಯ್ಕೆ ಸಾಧ್ಯತೆ
ನವದೆಹಲಿ, ಜೂನ್ 4: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ನೇಮಕವಾಗಿರುವ ಮಾಜಿ ಅಧಿಕಾರಿ ಎಸ್. ಜೈಶಂಕರ್ ಅವರನ್ನು ಗುಜರಾತ್ನಿಂದ ರಾಜ್ಯಸಭೆಗೆ ಆಯ್ಕೆ ಮಾಡುವ ಸಾಧ್ಯತೆ ಇದೆ.
ರಾಜ್ಯಸಭಾ ಸದಸ್ಯತ್ವಕ್ಕೆ ಅಮಿತ್ ಶಾ, ಸ್ಮೃತಿ ಇರಾನಿ ರಾಜೀನಾಮೆ
ಮಾಜಿ ವಿದೇಶಾಂಗ ಕಾರ್ಯದರ್ಶಿಯಾಗಿರುವ ಜೈಶಂಕರ್ ಅವರು ಕಳೆದ ವಾರ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರ ಸೇರ್ಪಡೆ ಅಚ್ಚರಿ ಮೂಡಿಸಿತ್ತು. ತಮ್ಮ ಹುದ್ದೆಗೆ ನೇಮಕವಾದ ಬಳಿಕ ಅವರು ಆರು ತಿಂಗಳ ಒಳಗೆ ಸಂಸತ್ನ ಲೋಕಸಭೆ ಅಥವಾ ರಾಜ್ಯಸಭೆಗೆ ಆಯ್ಕೆಯಾಗಬೇಕಿದೆ.
ಸುಷ್ಮಾ ಸ್ವರಾಜ್ ಹಾಕಿಕೊಟ್ಟ ದಾರಿಯಲ್ಲೇ ಸಾಗುತ್ತೇನೆ: ವಿದೇಶಾಂಗ ಸಚಿವ ಜೈಶಂಕರ್
ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿರುವ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಅವರ ರಾಜೀನಾಮೆಯಿಂದ ಗುಜರಾತ್ನಲ್ಲಿ ಎರಡು ರಾಜ್ಯಸಭಾ ಸ್ಥಾನಗಳು ಖಾಲಿಯಾಗಿವೆ. ಇನ್ನೂ ನಾಲ್ಕು ವರ್ಷದ ಅವಧಿ ಬಾಕಿ ಇದೆ. ಇಲ್ಲಿನ ಎಲ್ಲ 26 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಜೈಶಂಕರ್ ಅವರೊಂದಿಗೆ ಎಲ್ಜೆಪಿ ನಾಯಕ ರಾಮ್ವಿಲಾಸ್ ಪಾಸ್ವಾನ್ ಅವರನ್ನೂ ಗುಜರಾತ್ನಿಂದ ರಾಜ್ಯಸಭೆಗೆ ಆಯ್ಕೆ ಮಾಡುವ ನಿರೀಕ್ಷೆಯಿದೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರು, ಆರೋಗ್ಯದ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮೊದಲೇ ಘೋಷಿಸಿದ್ದರು. ಹೀಗಾಗಿ ಅವರ ಸ್ಥಾನಕ್ಕೆ ಜೈಶಂಕರ್ ಅವರನ್ನು ಆಯ್ಕೆ ಮಾಡಲಾಗಿದೆ.