ಕನ್ಹಯ್ಯ ಕುಮಾರ್ ವಿರುದ್ಧ ಕಾನೂನುಕ್ರಮ ಒಪ್ಪಿಗೆಗೆ ಚಿದಂಬರಂ ಆಕ್ರೋಶ
ನವದೆಹಲಿ, ಫೆಬ್ರವರಿ.29: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕನ್ಹಯ್ಯ ಕುಮಾರ್ ವಿರುದ್ಧ ಕಾನೂನು ಕ್ರಮಕ್ಕೆ ಒಪ್ಪಿಗೆ ನೀಡಿದ ದೆಹಲಿ ಸರ್ಕಾರವನ್ನು ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಟೀಕಿಸಿದ್ದಾರೆ.
ರಾಜದ್ರೋಹ ಪ್ರಕರಣದ ಬಗ್ಗೆ ಅರ್ಥ ಮಾಡಿಕೊಳ್ಳುವಲ್ಲಿ ಕೇಂದ್ರ ಸರ್ಕಾರಕ್ಕಿಂತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರವು ಹಿಂದೆ ಉಳಿದಿದೆ. ಕನ್ಹಯ್ಯ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 124ಎ ಮತ್ತು 120ಬಿ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲು ಅನುಮತಿ ನೀಡಿದ ದೆಹಲಿ ಸರ್ಕಾರದ ನಡೆಯನ್ನು ನಾನು ಖಂಡಿಸುತ್ತೇನೆ ಎಂದು ಮಾಜಿ ಸಚಿವ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಕನ್ಹಯ್ಯ ವಿರುದ್ಧ ಕಾನೂನು ಕ್ರಮಕ್ಕೆ ಅಸ್ತು ಎಂದ ದೆಹಲಿ ಸರ್ಕಾರ
ಕಳೆದ ಏಳು ತಿಂಗಳ ನಂತರದಲ್ಲಿ ಶುಕ್ರವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರವು ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಲು ದೆಹಲಿ ಪೊಲೀಸರಿಗೆ ಒಪ್ಪಿಗೆ ನೀಡಿತ್ತು.
ರಾಜದ್ರೋಹ ಪ್ರಕರಣದ ಕ್ಷಿಪ್ರ ತನಿಖೆಗೆ ಕನ್ಹಯ್ಯ ಕುಮಾರ್ ಆಗ್ರಹ:
ಏಳು ತಿಂಗಳ ನಂತರ ಕಾನೂನು ಕ್ರಮಕ್ಕೆ ದೆಹಲಿ ಸರ್ಕಾರವು ಅನುಮತಿ ನೀಡಿದೆ. ತಮ್ಮ ವಿರುದ್ಧದ ರಾಜದ್ರೋಹ ಪ್ರಕರಣದ ತನಿಖೆಯು ಕ್ಷಿಪ್ರಗತಿಯಲ್ಲಿ ನಡೆಯಬೇಕು. ದೇಶದಲ್ಲಿ ರಾಜದ್ರೋಹ ಪ್ರಕರಣವು ರಾಜಕೀಯವಾಗಿ ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದು ಜನರಿಗೂ ತಿಳಿಯಬೇಕು ಎಂದು ಕನ್ಹಯ್ಯ ಕುಮಾರ್ ಆಗ್ರಹಿಸಿದ್ದರು.
ಕನ್ಹಯ್ಯ ಕುಮಾರ್ ವಿರುದ್ಧ ರಾಜದ್ರೋಹ ಪ್ರಕರಣಕ್ಕೆ ಕಾರಣ:
ಕಳೆದ 2016ರಲ್ಲಿ ಜೆಎನ್ ಯುನಲ್ಲಿ ಅಫ್ಜಲ್ ಗುರು ಸಾವಿನ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ವಿರುದ್ಧ ರಾಜದ್ರೋಹದ ಪ್ರಕರಣ ದಾಖಲು ಮಾಡಲಾಗಿದೆ. ನ್ಯಾಯಾಲಯ ಕಾನೂನು ಕ್ರಮ ಜರುಗಿಸಲು ಅಗತ್ಯವಾದ ಅನುಮತಿಯನ್ನು ಪಡೆದುಕೊಳ್ಳಿ. ಏಪ್ರಿಲ್. 3ರೊಳಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿ ಎಂದು ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶದ ಬಳಿಕ ದೆಹಲಿ ಸರ್ಕಾರ ಇದೀಗ ಅನುಮತಿ ನೀಡಿದೆ.