ನಮ್ಮ ಕತ್ತು ಸೀಳಿದರೂ ನಾವು ಮುಸ್ಲಿಮರಾಗಿಯೇ ಇರುತ್ತೇವೆ: ಓವೈಸಿ
ನವದೆಹಲಿ, ಆಗಸ್ಟ್ 06: "ನೀವು ನಮ್ಮ ಕತ್ತನ್ನು ಸೀಳಿದರೂ ಸರಿ, ನಾವು ಮುಸ್ಲಿಮರಾಗಿಯೇ ಇರುತ್ತೇವೆ" ಎಂದು ಎಐಎಂಐಎಂ (All India Majlis-e-Ittehadul Muslimeen) ಮುಖಂಡ ಅಸಾದುದ್ದಿನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರ್ಯಾಣದಲ್ಲಿ ಮುಸ್ಲಿಂ ಒಬ್ಬರ ಗಡ್ಡವನ್ನು ಒತ್ತಾಯ ಪೂರ್ವಕವಾಗಿ ಕತ್ತರಿಸಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದರು.
ಮುಸ್ಲಿಮರು ಮುಸ್ಲಿಮರಿಗೇ ಮತ ಹಾಕಿ: ಓವೈಸಿ ವಿವಾದಾತ್ಮಕ ಹೇಳಿಕೆ
"ಒಬ್ಬ ಮುಸ್ಲಿಂ ವ್ಯಕ್ತಿಯ ಗಡ್ಡವನ್ನು ಕತ್ತರಿಸಲಾಗಿದೆ. ಈ ಕೆಲಸವನ್ನು ಯಾರು ಮಾಡಿದ್ದಾರೋ ಅವರಿಗೆ ಮತ್ತು ಅವರ ತಂದೆಯರಿಗೆ ನಾನು ಹೇಳುವುದಿಷ್ಟೆ, ನೀವು ನಮ್ಮ ಗಡ್ಡ ಕತ್ತರಿಸುವುದಿರಲಿ, ನಮ್ಮ ಕತ್ತು ಸೀಳಿದರೂ ನಾವು ಮುಸ್ಲಿಮರಾಗಿಯೇ ಉಳಿಯುತ್ತೇವೆ" ಎಂದು ಅವರು ಹೇಳಿದರು.
ಅಷ್ಟೇ ಅಲ್ಲ, "ನಿಮ್ಮನ್ನು ಮುಸ್ಲಿಮರನ್ನಾಗಿ ಮತಾಂತರಿಸಿ, ನೀವೂ ಗಡ್ಡ ಬಿಡುವಂತೆ ಮಾಡುತ್ತೇವೆ" ಎಂದು ಸಹ ಓವೈಸಿ ಈ ಸಮಯದಲ್ಲಿ ಹೇಳಿದರು.
ಹರ್ಯಾಣದ ಗುರ್ಗಾಂವ್ ನಲ್ಲಿ ಗುರುವಾರ ಮುಸ್ಲಿಂ ವ್ಯಕ್ತಿಯ ಗಡ್ಡವನ್ನು ಒತ್ತಾಯಪೂರ್ವಕವಾಗಿ ಕತ್ತರಿಸಲಾಗಿತ್ತು. ಈ ಘಟನೆ ಸಲೂನ್ ವೊಂದರಲ್ಲಿ ನಡೆದಿತ್ತು. ಈ ಕುರಿತು ಸಂತ್ರಸ್ತ ಮುಸ್ಲಿಂ ಗುರ್ಗಾಂವ್ ನ ಸೆಕ್ಟರ್ 29 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.