'ಆನೆ ಪಾಪದ ಜಂಟಲ್ಮ್ಯಾನ್, ಅದಕ್ಕೆ ದಾರಿಬಿಡಿ'
ನವದೆಹಲಿ, ಜನವರಿ 25: ಆನೆಗಳು ದುರ್ಬಲವಾದ ಪ್ರಾಣಿ. ಅವುಗಳ ಓಡಾಟಕ್ಕೆ ಮನುಷ್ಯರು ದಾರಿ ಬಿಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ತಮಿಳುನಾಡಿನ ನೀಲಗಿರಿ ಬೆಟ್ಟ ಪ್ರದೇಶದಲ್ಲಿ ವನ್ಯಜೀವಿ ಕಾರಿಡಾರ್ನಲ್ಲಿ ಅಕ್ರಮವಾಗಿ ನಿರ್ಮಾಣವಾದ ರೆಸಾರ್ಟ್ಗಳ ಕುರಿತಾದ ಪ್ರಕರಣಗಳ ವಿಚಾರಣೆ ನಡೆಸುವ ವೇಳೆ ಸುಪ್ರೀಂಕೋರ್ಟ್, ವನ್ಯಜೀವಿಗಳ ಅಸ್ತಿತ್ವ ಇರುವ ಅರಣ್ಯಗಳಿಂದ ಮಾನವ ಚಟುವಟಿಕೆಗಳನ್ನು ತಡೆಯುವ ನಿಯಮವನ್ನು ಎತ್ತಿ ಹಿಡಿದಿದೆ.
ಈ ರೆಸಾರ್ಟ್ಗಳಲ್ಲಿ ವಾಸಿಸುವವರು ಆನೆಗಳನ್ನು ಸಾಯಿಸಲು ಬಯಸಿದ್ದಾರೆ. ನಾವು ದುರ್ಬಲ ಪರಿಸರ ವ್ಯವಸ್ಥೆಯೊಂದಿಗೆ ಆಟವಾಡುತ್ತಿದ್ದೇವೆ ಎಂದು ಸುಪ್ರೀಂಕೋರ್ಟ್ ಕಿಡಿಕಾರಿದೆ.
ಅರಣ್ಯ ಇಲಾಖೆ ವಾಹನದ ಮೇಲೆ ಒಂಟಿ ಸಲಗದ ದಾಳಿ: ಎದೆ ನಡುಗಿಸುವ ವಿಡಿಯೋ
ಆನೆಗಳ ಸಾವಿನ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ನ್ಯಾಯಪೀಠ, ಅಸ್ಸಾಂನಲ್ಲಿ ಘೇಂಡಾಮೃಗಗಳನ್ನು ಹೇಗೆ ಬೇಟೆಯಾಡಿದ್ದಾರೆ ನೋಡಿ. ಬೇಟೆಗೆ ಎಷ್ಟೊಂದು ಹಣ ಹರಿದಾಡುತ್ತಿದೆ. ಇದು ಆತಂಕಕಾರಿ ಎಂದು ತಿಳಿಸಿದೆ.
ಆನೆ ಜಂಟಲ್ಮ್ಯಾನ್
'ಆನೆ ಸಂಭಾವಿತ (ಜೆಂಟಲ್ಮ್ಯಾನ್). ಆನೆ ದೊಡ್ಡದು ಮತ್ತು ಶಕ್ತಿಶಾಲಿ. ಆದರೆ ಪಾಪದವು. ರೆಸಾರ್ಟ್ಗಳಲ್ಲಿ ವಾಸಿಸಲು ಬಯಸುವವರು ಆನೆಯನ್ನು ಕೊಲ್ಲಲು ಬಯಸಿದ್ದಾರೆ. ನಾವು ಅತ್ಯಂತ ದುರ್ಬಲವಾದ ಪರಿಸರ ವ್ಯವಸ್ಥೆಯೊಂದಿಗೆ ವ್ಯವಹರಿಸುತ್ತಿದ್ದೇವೆ' ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಹೇಳಿದೆ.
ಆನೆಗೆ ಅಡ್ಡ ಬರುವುದನ್ನು ಸಹಿಸೊಲ್ಲ
ನಾವು ಆನೆಗಳಿಗೆ ದಾರಿ ಬಿಟ್ಟುಕೊಡಬೇಕು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಆನೆ ದಾರಿಯಲ್ಲಿ ಯಾರೇ ಅಡ್ಡ ಬರುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದಿತು. ಈ ಪ್ರಕರಣದ ಕುರಿತು ಶೀಘ್ರದಲ್ಲಿಯೇ ಅಂತಿಮ ತೀರ್ಪು ಪ್ರಕಟಿಸುವುದಾಗಿ ಹೇಳಿತು.
ಊಟಿ-ಮೈಸೂರು ರಸ್ತೆ
ತಮಿಳುನಾಡು ಸರ್ಕಾರವು ಆನೆ ಕಾರಿಡಾರ್ ಎಂದು ಗುರುತಿಸಿರುವ ಪ್ರದೇಶದೊಳಗಿನ ಬುಡಕಟ್ಟು ಸಮುದಾಯದ ಮನೆಗಳನ್ನು ಹೊರುತುಪಡಿಸಿ 800ಕ್ಕೂ ಅಧಿಕ ಕಟ್ಟಡಗಳನ್ನು ಕೆಡವಬೇಕು ಅಥವಾ ಮುಚ್ಚಬೇಕು ಎಂದು ಅಮಿಕಸ್ ಕ್ಯೂರಿ ಎಡಿಎನ್ ರಾವ್ ವರದಿ ನೀಡಿದ್ದರು. ಅದನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ. ಈ ಕಾರಿಡಾರ್ ಊಟಿಯಿಂದ ಮೈಸೂರಿಗೆ ಬರುವ ಮಾರ್ಗದ ನೀಲಗಿರಿ ಅರಣ್ಯದ ಮದುಮಲೈ ರಾಷ್ಟ್ರೀಯ ಉದ್ಯಾನದ ಸಮೀಪವಿದೆ.
ರೆಸಾರ್ಟ್ ಮಾಲೀಕರ ಅರ್ಜಿ
ತಮಿಳುನಾಡು ಸರ್ಕಾರವು ರೆಸಾರ್ಟ್ಗಳನ್ನು ಮುಚ್ಚಿ ತೆಗೆದುಕೊಂಡಿರುವ ಕ್ರಮದ ವಿರುದ್ಧ ರೆಸಾರ್ಟ್ ಮಾಲೀಕರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರಲ್ಲಿ ನಟ ಮತ್ತು ರಾಜ್ಯಸಭೆಯ ಮಾಜಿ ಸಂಸದ ಮಿಥುನ್ ಚಕ್ರವರ್ತಿ ಸಹ ಸೇರಿದ್ದಾರೆ. ಎಲ್ಲ ಅಗತ್ಯ ಅನುಮತಿ ಹಾಗೂ ಪರವಾನಗಿಗಳನ್ನು ಪಡೆದುಕೊಂಡಿದ್ದರೂ ತಮ್ಮ ರೆಸಾರ್ಟ್ಗಳನ್ನು ಮುಚ್ಚಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಆನೆ ಕಾರಿಡಾರ್ ಪ್ರದೇಶದ ಒಳಗೆ ಅಕ್ರಮ ನಿರ್ಮಾಣಗಳನ್ನು ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವರದಿ ನೀಡಿದ ಬಳಿಕ ನೀಲಗಿರಿಯಲ್ಲಿ ರೆಸಾರ್ಟ್ಗಳನ್ನು ಬಂದ್ ಮಾಡುವಂತೆ ಸುಪ್ರಿಂಕೋರ್ಟ್ 2019ರ ಆಗಸ್ಟ್ನಲ್ಲಿ ಆದೇಶಿಸಿತ್ತು.
ಕಟ್ಟಡ ಮುಚ್ಚಲು ಅರ್ಜಿ
ನೀಲಗಿರಿ ಆನೆ ಕಾರಿಡಾರ್ನಲ್ಲಿರುವ ಎಲ್ಲ ರೆಸಾರ್ಟ್ಗಳನ್ನು ಮತ್ತು ಅಕ್ರಮ ಕಟ್ಟಡಗಳನ್ನು ಮುಚ್ಚುವಂತೆ 2011ರಲ್ಲಿ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿತ್ತು. ಅದನ್ನು ತಮಿಳುನಾಡು ಸರ್ಕಾರ ಜಾರಿಗೊಳಿಸಿತ್ತು. ಆದರೆ ಅದರ ವಿರುದ್ಧ ರೆಸಾರ್ಟ್ ಮಾಲೀಕರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದಿದ್ದರು.
ಅಕ್ರಮ ಕಟ್ಟಡಗಳ ವಿರುದ್ಧ 1996ರಲ್ಲಿ ಎ. ರಂಗರಾಜನ್, ಎಲಿಫೆಂಟ್ ರಾಜೇಂದ್ರ ಮತ್ತು 2007ರಲ್ಲಿ ನೀಲಗಿರಿ ವನ್ಯಜೀವಿ ಸಂರಕ್ಷಣೆ ಎಂಬ ಎನ್ಜಿಓ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಮೂರೂ ಅರ್ಜಿಗಳು ಸುಪ್ರೀಂಕೋರ್ಟ್ ಮುಂದೆ ಇದ್ದು, ರೆಸಾರ್ಟ್ ಮಾಲೀಕರ ಅರ್ಜಿಗಳ ಜತೆಗೆ ವಿಚಾರಣೆಗೆ ಒಳಪಡಲಿವೆ.