ಮುಫ್ತಿ ವಿರುದ್ಧ ಗೌತಿ ಟ್ವೀಟ್ ವಾರ್, ಮೋದಿ ಸುನಾಮಿ ಎಚ್ಚರಿಕೆ
ನವದೆಹಲಿ, ಏಪ್ರಿಲ್ 12 : ಮಾಜಿ ಕ್ರಿಕೆಟಿಗ, ಬಿಜೆಪಿ ನಾಯಕ ಗೌತಮ್ ಗಂಭೀರ್ ಅವರು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ವಿರುದ್ಧ ಮತ್ತೊಮ್ಮೆ ಕಿಡಿಕಾರಿದ್ದಾರೆ. 2014ರಲ್ಲಿ ಅಲೆ ಮಾತ್ರ ಇತ್ತು. ಆದರೆ, 2019ರಲ್ಲಿ ಸುನಾಮಿಯೇ ಎದ್ದಿದೆ ಎಂದು ಎಚ್ಚರಿಸಿದ್ದಾರೆ.
ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ ನಲ್ಲಿ ಗೌತಮ್ ಖಾತೆಯನ್ನು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ಬ್ಲಾಕ್ ಮಾಡಿರುವುದು ಗೊತ್ತಿರಬಹುದು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಬಗ್ಗೆ ಗುರುವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಗಂಭೀರ್, ಮೆಹಬೂಬಾ ಮುಫ್ತಿ ಅವರು ನನ್ನನ್ನು ಬ್ಲಾಕ್ ಮಾಡಬಹುದು. ಆದರೆ, ದೇಶದ 130 ಕೋಟಿ ಜನರನ್ನು ಯಾವಾಗ ಬ್ಲಾಕ್ ಮಾಡಲಿದ್ದಾರೆ? ದೇಶದಲ್ಲಿ ಒಂದು ಅಲೆ ಇದೆ.
ಒಮರ್ ಅಬ್ದುಲ್ಲಾ, ಗೌತಮ್ ಗಂಭೀರ್ ನಡುವೆ ಟ್ವಿಟರ್ ವಾರ್!
ಒಂದು ವೇಳೆ ಅದರಲ್ಲಿ ಮುಫ್ತಿ ಅವರು ಈಜದಿದ್ದರೆ, ಖಂಡಿತವಾಗಿ ಮುಳುಗಿಬಿಡುತ್ತಾರೆ. 2014ರಲ್ಲಿ ಅಲೆ ಮಾತ್ರ ಇತ್ತು. ಆದರೆ, 2019ರಲ್ಲಿ ಸುನಾಮಿಯೇ ಎದ್ದಿದೆ. ಅದು ಅಭಿವೃದ್ಧಿಯ ಸುನಾಮಿ ಎಂದು ಗಂಭೀರ್ ಮುಫ್ತಿ ಅವರಿಗೆ ತಿರುಗೇಟು ನೀಡಿದ್ದಾರೆ.
ಸಂವಿಧಾನದ 370 ವಿಧಿ ಹಿಂಪಡೆಯುವ ಬಗ್ಗೆ ಟ್ವೀಟ್
ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಸಂವಿಧಾನದ 370ನೇ ವಿಧಿ ಹಿಂಪಡೆಯುವುದರ ಬಗ್ಗೆ ಉಲ್ಲೇಖವಿರುವುದನ್ನು ಮೆಹಬೂಬಾ ಮುಫ್ತಿ ಖಂಡಿಸಿ, ಟ್ವೀಟ್ ಮಾಡಿದ್ದರು.
'ಸಂವಿಧಾನದ 370ನೇ ವಿಧಿಯನ್ನು ಹಿಂಪಡೆಯುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಹಿಂಪಡೆಯಲು ಸಾಧ್ಯವಿಲ್ಲ. ಅದು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ. ಬಿಜೆಪಿ 370ನೇ ವಿಧಿಯನ್ನು ತೆಗೆದುಹಾಕುವ ಭರವಸೆ ನೀಡಿದೆ ಎಂದಿದ್ದರು.
ಗಂಭೀರ್ ನೀಡಿದ್ದರು ಖಡಕ್ ಪ್ರತಿಕ್ರಿಯೆ
ಮುಫ್ತಿ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಗೌತಮ್ ಗಂಭೀರ್,'ಭಾರತ ನಿಮ್ಮಂತೆ ಕಲೆಯಲ್ಲ, ಅದನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂದಿದ್ದರು. ಇದಕ್ಕೆ ಉತ್ತರಿಸಿದ್ದ ಮುಫ್ತಿ 'ಬಿಜೆಪಿಯಲ್ಲಿ ನಿಮ್ಮ ರಾಜಕೀಯದ ಇನಿಂಗ್ಸ್ ತಳಪಾಯ ಕ್ರಿಕೆಟ್ ಕೆರಿಯರ್ನಷ್ಟು ಗಟ್ಟಿಯಾಗಿಲ್ಲ' ಎಂದು ಟೀಕಿಸಿದ್ದರು.
ನಂತರ ಟ್ವೀಟ್ ವಾರ್ ಮುಂದುವರೆದಿತ್ತು. ಆದರೆ, ಗಂಭೀರ್ ಅವರ ಟ್ವೀಟ್ ಖಾತೆಯನ್ನು ಮುಫ್ತಿ ಬ್ಲಾಕ್ ಮಾಡಿದ್ದರು.ನೀವು ನನ್ನ ಖಾತೆಯನ್ನು ಬ್ಲಾಕ್ ಮಾಡಿದ್ದೀರಿ, ದೇಶದಲ್ಲಿ 136,53,86,456 ಜನರಿದ್ದು, ಎಷ್ಟು ಜನರನ್ನು ನೀವು ಬ್ಲಾಕ್ ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು.
ಒಮರ್ ಅಬ್ದುಲ್ಲಾಗೆ ತಿರುಗೇಟು
'ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನ ಮಂತ್ರಿ ಮಾಡಿಕೊಳ್ಳುತ್ತೇವೆ' ಎಂಬ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದರು.
ಗೌತಮ್ ಗಂಭೀರ್ ಟ್ವೀಟ್ಗೆ ಒಮರ್ ಅಬ್ದುಲ್ಲಾ ತಿರುಗೇಟು ನೀಡಿದ್ದರು. ಜಮ್ಮು ಮತ್ತು ಕಾಶ್ಮೀರದ ಇತಿಹಾಸ ಹಾಗೂ ಆ ಇತಿಹಾಸ ನಿರ್ಮಾಣದ ಹಿಂದೆ ನ್ಯಾಷನಲ್ ಕಾನ್ಪರೆನ್ಸ್ ಪಾತ್ರದ ಬಗ್ಗೆ ನಿಮಗೆ ಹೆಚ್ಚು ಗೊತ್ತಿಲ್ಲ. ನಿಮಗೆ ಗೊತ್ತಿರುವ ವಿಚಾರಗಳಿಗೆ ನೀವು ಸೀಮಿತವಾಗಿರಿ ಎಂದು ಹೇಳಿದ್ದರು.
|
ಜಿತೇಂದ್ರ ಸಿಂಗ್ ಪರ ಪ್ರಚಾರ
ಉಧಮ್ ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಪರ ಪ್ರಚಾರದಲ್ಲಿ ತೊಡಗಿದ್ದ ಗಂಭೀರ್ ಅವರು ಎಎನ್ಐ ಜತೆ ಮಾತನಾಡುತ್ತಾ, ಮುಫ್ತಿ ಜತೆಗಿನ ಟ್ವೀಟ್ ವಾರ್, ಮೋದಿ ಅಲೆ ಈಗ ಸುನಾಮಿ ಆಗಲಿದೆ ಎಂದಿದ್ದಾರೆ.