ಕರ್ನಾಟಕದ ಉಪ ಚುನಾವಣೆ: ಆಯೋಗ ನೀಡಿದ ಸಮರ್ಥನೆ ಏನು ಗೊತ್ತೇ?
ನವದೆಹಲಿ, ಅಕ್ಟೋಬರ್ 9: ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಸಲು ಕೇವಲ ಐದು ತಿಂಗಳು ಬಾಕಿ ಇರುವಾಗ ಕರ್ನಾಟಕದ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸುವ ನಿರ್ಧಾರ ಹುಟ್ಟುಹಾಕಿರುವ ವಿವಾದವನ್ನು ಶಮನಗೊಳಿಸಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ.
ಕರ್ನಾಟಕದಲ್ಲಿ ಮೂರು ಸೀಟುಗಳ ಭರ್ತಿಗೆ ಉಪ ಚುನಾವಣೆ ಘೋಷಿಸಿದ್ದರೂ, ನೆರೆಯ ಆಂಧ್ರಪ್ರದೇಶದಲ್ಲಿ ಹೀಗೆ ತೆರವಾಗಿರುವ ಐದು ಲೋಕಸಭಾ ಸ್ಥಾನಗಳಿಗೆ ಚುನಾವಣೆ ಘೋಷಿಸದೆ ಇರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಲೋಕಸಭೆ ಉಪಚುನಾವಣೆ ಅಗತ್ಯವಿರಲಿಲ್ಲ: ಬಿಎಸ್ ಯಡಿಯೂರಪ್ಪ
ರಾಜ್ಯದಲ್ಲಿ ಎಲ್ಲ ಪಕ್ಷಗಳ ಮುಖಂಡರೂ ಚುನಾವಣಾ ಆಯೋಗದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಭ್ಯರ್ಥಿಗಳ ಆಯ್ಕೆ, ಪ್ರಚಾರ ನಡೆಸಲು ಸಮಯವೇ ಇಲ್ಲ ಎನ್ನುವುದು ಅವರ ಆರೋಪ. ಅಲ್ಲದೆ, ಐದು ತಿಂಗಳ ಅವಧಿಗೆ ಚುನಾವಣೆ ನಡೆಸುವುದು ಕೋಟ್ಯಂತರ ರೂಪಾಯಿ ಖರ್ಚಿನ ಹೊಣೆಯಾಗಲಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಚುನಾವಣಾ ಆಯೋಗ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಕರ್ನಾಟಕದಲ್ಲಿ ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವುದಕ್ಕೆ ಅದು ನೀಡಿರುವ ಕಾರಣ ಹೀಗಿದೆ.
ಆರು ತಿಂಗಳ ಒಳಗೆ ಚುನಾವಣೆ
1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 151ಎ ಅಡಿಯ ಪ್ರಕಾರ, ಸಂಸತ್ ಅಥವಾ ವಿಧಾನಸಭೆ ಕ್ಷೇತ್ರದ ಜನಪ್ರತಿನಿಧಿ ಮೃತಪಟ್ಟರೆ ಅಥವಾ ರಾಜೀನಾಮೆ ನೀಡಿದರೆ, ಅವರಿಂದ ತೆರವಾದ ಕ್ಷೇತ್ರವನ್ನು ಆ ದಿನಾಂಕದಿಂದ ಆರು ತಿಂಗಳ ಒಳಗೆ ಉಪಚುನಾವಣೆ ಮೂಲಕ ಭರ್ತಿ ಮಾಡುವುದು ಚುನಾವಣಾ ಆಯೋಗದ ಜವಾಬ್ದಾರಿ.
ಒಂದು ವರ್ಷದ ಮಿತಿ
ಕಾನೂನಿನ ಪ್ರಕಾರ, ಮುಂದಿನ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷಕ್ಕೂ ಮೀರಿದ ಅವಧಿ ಬಾಕಿಯಿದ್ದರೆ ಯಾವುದೇ ಕ್ಷೇತ್ರವನ್ನು ಜನಪ್ರತಿನಿಧಿಯಿಲ್ಲದೆ ಖಾಲಿ ಬಿಡುವಂತಿಲ್ಲ. ಮುಂದಿನ ಲೋಕಸಭೆ ಚುನಾವಣೆಗೆ ಮುಂದಿನ ವರ್ಷದ ಜೂನ್ 3ರವರೆಗೂ ಸಮಯವಿದೆ. ಹೀಗಾಗಿ ಕರ್ನಾಟಕದಲ್ಲಿ ತೆರವಾದ ಮೂರು ಸ್ಥಾನಗಳಿಗೆ ಆ ದಿನಾಂಕವನ್ನು ಪರಿಗಣನೆಗೆ ತೆಗೆದುಕೊಂಡು ಚುನಾವಣೆ ನಡೆಸುವುದು ಸೂಕ್ತ.
ಕರ್ನಾಟಕ ಲೋಕಸಭೆ, ವಿಧಾನಸಭೆ ಉಪಚುನಾವಣೆಗಳಿಗೆ ಮುಹೂರ್ತ ನಿಗದಿ: ನ.3ರಂದು ಮತದಾನ
ಆಂಧ್ರದಲ್ಲಿ ಅನಿವಾರ್ಯವಲ್ಲ
ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರವು 2018ರ ಮೇ 18 ಹಾಗೂ ಮಂಡ್ಯ ಕ್ಷೇತ್ರವು 21ರಂದು ತೆರವಾಗಿದ್ದವು. ಆದರೆ, ಆಂಧ್ರಪ್ರದೇಶದ ಐದು ಸಂಸದೀಯ ಸ್ಥಾನಗಳಿಗೆ 2018ರ ಜೂನ್ 20ರಂದು ಸಂಸದರು ರಾಜೀನಾಮೆ ಸಲ್ಲಿಸಿದ್ದರು. ಈ ಅವಧಿಯಿಂದ ಸಂಸತ್ ಚುನಾವಣೆಗೆ ಇರುವ ಅವಧಿ ಒಂದು ವರ್ಷಕ್ಕೂ ಕಡಿಮೆ ಆಗಿರುವುದರಿಂದ ಈ ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವ ಅಗತ್ಯ ಬೀಳುವುದಿಲ್ಲ.
ಸಮಯ ಮತ್ತು ಹಣದ ವೆಚ್ಚ
'ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವ ಅಗತ್ಯವೇ ಇರಲಿಲ್ಲ. ಮೂರ್ನಾಲ್ಕು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈಗ ಮತ್ತೆ ಮೂರು ಕ್ಷೇತ್ರಗಳಲ್ಲಿ ಚುನಾವಣೆ ನಡೆದರೆ ವೃಥಾ ದುಂದುವೆಚ್ಚ. ಸಮಯವೂ ವ್ಯರ್ಥ ಎಂದು ಯಡಿಯೂರಪ್ಪ ಹೇಳಿದ್ದರು.
ಉಪಚುನಾವಣೆ ಕದನ: ದೋಸ್ತಿ ಸರ್ಕಾರದ ಮೈತ್ರಿ ಜಪ ಯಶಸ್ವಿಯಾಗುತ್ತಾ?
ಕಾಂಗ್ರೆಸ್ನಿಂದಲೂ ಆಕ್ಷೇಪ
ಲೋಕಸಭಾ ಉಪಚುನಾವಣೆಯ ದಿನಾಂಕ ಘೋಷಣೆ ಕುರಿತು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅಚ್ಚರಿ ವ್ಯಕ್ತಪಡಿಸಿದ್ದರು. ಈ ಚುನಾವಣೆಯ ಅಗತ್ಯವಿರಲಿಲ್ಲ ಎಂದು ಅವರು ಹೇಳಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ, ವಿಧಾನಸಭೆ ಕ್ಷೇತ್ರಗಳ ಚುನಾವಣೆಗೆ ಇನ್ನೂ ನಾಲ್ಕೂವರೆ ವರ್ಷ ಸಮಯ ಇರುವುದರಿಂದ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವುದು ಸೂಕ್ತ. ಆದರೆ, ನಾಲ್ಕೈದು ತಿಂಗಳಿಗೆ ಚುನಾವಣೆ ನಡೆಸಲು ಅಗತ್ಯವಿರಲಿಲ್ಲ ಎಂದಿದ್ದರು.
ಸಮ್ಮಿಶ್ರ ಸರ್ಕಾರಕ್ಕೆ ಉಪಚುನಾವಣೆ ಜ್ವರ: ಬಿಜೆಪಿಗೆ ಮರ್ಯಾದೆ ಪ್ರಶ್ನೆ