ಸೋನಿಯಾ ಅಳಿಯನ ಆಪ್ತರಿಗೆ 'ಇಡಿ' ಆಘಾತ, ಬೆಂಗಳೂರಲ್ಲೂ ದಾಳಿ
ನವದೆಹಲಿ, ಡಿಸೆಂಬರ್ 07: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವದ್ರಾ ಅವರಿಗೆ ಜಾರಿ ನಿರ್ದೇಶನಾಲಯವು ಬಿಸಿ ಮುಟ್ಟಿಸಿದೆ. ಭೂ ಹಗರಣ ಪ್ರಕರಣದಲ್ಲಿ ಸಿಲುಕಿರುವ ರಾಬರ್ಟ್ ಅವರಿಗೆ ಇತ್ತೀಚೆಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿಗೊಳಿಸಲಾಗಿತ್ತು. ಇದಾದ ಬಳಿಕ ಇಂದು ವಿವಿಧೆಡೆ ವದ್ರಾ ಅವರ ಆಪ್ತರ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ನವದೆಹಲಿ, ಎನ್ ಸಿಆರ್ ಪ್ರದೇಶ, ಬೆಂಗಳೂರಿನಲ್ಲಿ ಏಕಕಾಲಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಭೂ ಹಗರಣ: ರಾಬರ್ಟ್ ವದ್ರಾಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್
ರಕ್ಷಣಾ ಇಲಾಖೆಗೆ ಸಂಬಂಧಿಸಿದ ಒಪ್ಪಂದರಲ್ಲಿ ಮೂವರು ವ್ಯಕ್ತಿಗಳು ಕಮಿಷನ್ ಪಡೆದುಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಈ ಮೂರು ವ್ಯಕ್ತಿಗಳು ವದ್ರಾ ಅವರ ಕಂಪನಿಗೆ ನೇರವಾಗಿ ಸಂಪರ್ಕ ಹೊಂದಿರುವುದು ಖಚಿತವಾದ ಬಳಿಕ ಈ ದಾಳಿ ನಡೆಸಲಾಗಿದೆ.
ಸೇನೆಗೆ ಸೇರಿದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್ ಗೆ ಸೇರಿದ ಭೂ ಭಾಗವನ್ನು ಹೊಂದಿರುವ ಆರೋಪವನ್ನು ವದ್ರಾ ಹೊತ್ತುಕೊಂಡಿದ್ದಾರೆ. ವದ್ರಾ ವಿರುದ್ಧ 2015ರಲ್ಲೆ ಮನಿಲಾಂಡ್ರಿಂಗ್(ಪಿಎಂಎಲ್ಎ) ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಲಾಗಿದೆ. ಸ್ಥಳೀಯ ತಹಸೀಲ್ದಾರ್ ಅವರು ನಕಲಿ ಸಹಿ, ಫೋರ್ಜರಿ ಮಾಡಿದ ದಾಖಲೆ, ಕ್ರಯಪತ್ರ ಕಂಡು ಬಂದಿದ್ದರಿಂದ ಪೊಲೀಸರಿಗೆ ದೂರು ಸಲ್ಲಿಸಿದರು.