Breaking: ಖರ್ಗೆ ಹಾಜರಿ; ಯಂಗ್ ಇಂಡಿಯನ್ ಕಚೇರಿಯಲ್ಲಿ ಇಡಿ ಶೋಧ
ನವದೆಹಲಿ, ಆ.04: ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹಿಡುವಳಿ ಕಂಪನಿಯಾದ ಯಂಗ್ ಇಂಡಿಯನ್ (ವೈಐ) ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ ಗುರುವಾರ ಮತ್ತೆ ದಾಳಿ ನಡೆಸಿದೆ. ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇಲ್ಲಿನ ಹೆರಾಲ್ಡ್ ಹೌಸ್ ಕಟ್ಟಡದಲ್ಲಿ ಏಜೆನ್ಸಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ಏಜೆನ್ಸಿಯ ಸಮನ್ಸ್ನ ಮೇರೆಗೆ 80 ವರ್ಷ ವಯಸ್ಸಿನ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಬಹದ್ದೂರ್ ಷಾ ಜಫರ್ ಮಾರ್ಗ್ನಲ್ಲಿರುವ ಹೆರಾಲ್ಡ್ ಹೌಸ್ ಕಟ್ಟಡವನ್ನು ತಲುಪಿ ಇಡಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ.
ಅಧಿವೇಶನ ವೇಳೆ ಮಲ್ಲಿಕಾರ್ಜುನ ಖರ್ಗೆಗೆ ಇಡಿ ನೋಟಿಸ್: ಸಂಸತ್ತಿನಲ್ಲಿ ಕೋಲಾಹಲ
ಕಳೆದ ಬಾರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಅವರು ಹಾಜರಿರುವತೆ ಮನವಿ ಮಾಡಿತ್ತು. ಅಂದು ಅವರು ಹಾಜರಿರದ ಕಾರಣ ಯಂಗ್ ಇಂಡಿಯನ್ ಕಚೇರಿಗೆ ಬೀಗ ಜಡಿದಿತ್ತು.
ನಾಲ್ಕು ಅಂತಸ್ತಿನ ಹೆರಾಲ್ಡ್ ಹೌಸ್ ಕಟ್ಟಡದ ನೆಲ ಮಹಡಿಯಲ್ಲಿರುವ ಯಂಗ್ ಇಂಡಿಯನ್ನ ಸಿಂಗಲ್-ರೂಮ್ ಕಚೇರಿಯಲ್ಲಿ "ಸಾಕ್ಷ್ಯಗಳನ್ನು ಸಂರಕ್ಷಿಸಲು" ಮತ್ತು ಅಧಿಕೃತ ಪ್ರತಿನಿಧಿಗಳು ಲಭ್ಯವಿಲ್ಲದ ಕಾರಣ ತಾತ್ಕಾಲಿಕವಾಗಿ ಕಚೇರಿಗೆ ಇಡಿ ಸೀಲ್ ಮಾಡಿತ್ತು.
ಈ ದಾಳಿಯಲ್ಲಿ ಯಂಗ್ ಇಂಡಿಯನ್ ಕಚೇರಿಯಲ್ಲಿ ಶೋಧ ಮುಂದುವರೆಸಲಾಗುತ್ತದೆ. ಲಭ್ಯವಿರುವ ಪುರಾವೆಗಳನ್ನು ಸಂಗ್ರಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಂಗ್ ಇಂಡಿಯನ್ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಹುಪಾಲು ಷೇರುದಾರರು.
ಸಂಪಾದಕೀಯ ಸಿಬ್ಬಂದಿ ಮತ್ತು ಆಡಳಿತ ಸಿಬ್ಬಂದಿ ಕೆಲಸ ಮಾಡುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮತ್ತು ವೆಬ್ ಪೋರ್ಟಲ್ನ ಕಚೇರಿಯು ಹೆರಾಲ್ಡ್ ಹೌಸ್ ಕಟ್ಟಡದ ನಾಲ್ಕನೇ ಮಹಡಿಯಲ್ಲಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಪ್ರಕಟಿಸಿದೆ. ಅದರ ಮಾಲಿಕತ್ವವನ್ನು ಯಂಗ್ ಇಂಡಿಯನ್ ಕಂಒನಿ ನೋಡಿಕೊಳ್ಳುತ್ತದೆ. ಪತ್ರಿಕೆಯ ಕಛೇರಿಯನ್ನು AJL ಹೆಸರಿನಲ್ಲಿ ನೋಂದಾಯಿಸಲಾಗಿದೆ. ನ್ಯಾಷನಲ್ ಹೆರಾಲ್ಡ್-ಎಜೆಎಲ್-ಯಂಗ್ ಇಂಡಿಯನ್ ಡೀಲ್ನಲ್ಲಿ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಹೆರಾಲ್ಡ್ ಹೌಸ್ ಸೇರಿದಂತೆ ಹನ್ನೆರಡು ಸ್ಥಳಗಳಲ್ಲಿ ಮಂಗಳವಾರ ಇಡಿ ದಾಳಿ ನಡೆಸಿತ್ತು.
ಬುಧವಾರ ಮುಂಜಾನೆ ಏಜೆನ್ಸಿ ಅಧಿಕಾರಿಗಳು ಕೆಲವು ದಾಖಲೆಗಳು, ಡಿಜಿಟಲ್ ಡೇಟಾವನ್ನು ಸಂಗ್ರಹಿಸಿ ಕೆಲವು ಸಿಬ್ಬಂದಿಯನ್ನು ಪ್ರಶ್ನಿಸಿದ ನಂತರ ಕಚೇರಿಯಿಂದ ನಿರ್ಗಮಿಸಿದ್ದರು.
ಸಮನ್ಸ್ ಬಗ್ಗೆ ಗುರುವಾರ ಸದನದಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, 'ನನಗೆ ಇಡಿ ಸಮನ್ಸ್ ಬಂದಿದೆ. ಅವರು ನನಗೆ ಮಧ್ಯಾಹ್ನ 12.30 ಕ್ಕೆ ಕರೆ ಮಾಡಿದರು. ನಾನು ಕಾನೂನು ಪಾಲಿಸಲು ಬಯಸುತ್ತೇನೆ. ಆದರೆ ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಅವರು ಕರೆಸುವುದು ಸರಿಯೇ? ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಿವಾಸಗಳಿಗೆ ಪೊಲೀಸರು ಘೇರಾವ್ ಮಾಡುವುದು ಸರಿಯೇ? ಇದಕ್ಕೆಲ್ಲಾ ನಾವು ಹೆದರುವುದಿಲ್ಲ, ಹೋರಾಟ ಮಾಡುತ್ತೇವೆ' ಎಂದಿದ್ದರು.