ಡಿಕೆ ಶಿವಕುಮಾರ್ ಮೇಲೆ ಇ.ಡಿ. ಅಧಿಕಾರಿಗಳ ಗಂಭೀರ ಆರೋಪ
ನವದೆಹಲಿ, ಸೆಪ್ಟೆಂಬರ್ 20: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮೇಲೆ ಇ.ಡಿ. ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು 'ಹವಾಲಾ ದಂಧೆಯ ಕಿಂಗ್ಪಿನ್' ಎಂದು ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿದೆ.
ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ದಾಖಲೆಗಳ ಮೂಲಕ ವಾದ ಮಂಡಿಸಿರುವ ಜಾರಿ ನಿರ್ದೇಶನಾಲಯದ ವಕೀಲರು, ಡಿಕೆಶಿ ವಿರುದ್ಧ ಗಂಭೀರ ಆರ್ಥಿಕ ಅಕ್ರಮಗಳ ಆರೋಪ ಹೊರಿಸಿದ್ದಾರೆ.
ಡಿಕೆಶಿಗೆ ನ್ಯಾಯಾಂಗ ಬಂಧನ, ತಿಹಾರ್ ಜೈಲು ಬದಲಿಗೆ ಆಸ್ಪತ್ರೆ ವಾಸ
ಆರ್ಥಿಕ ಅಪರಾಧಗಳಲ್ಲಿ ಡಿಕೆಶಿ ವೈಟ್ಕಾಲರ್ ಅಪರಾಧಿಯಾಗಿದ್ದಾರೆ ಎಂದು ದಾಖಲೆ ನೀಡಿದ್ದಾರೆ. ಹವಾಲಾ ದಂದೆ ಹೇಗೆ ನಡೆದಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಹಫ್ತಾ ನೀಡುವುದು ಪಿಎಂಎಲ್ಎಯಲ್ಲಿ ಅನುಸೂಚಿತ ಅಪರಾಧ. ಡಿಕೆಶಿಯ 317 ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಪಡೆದಿದ್ದೇವೆ. ಇದರಲ್ಲಿ ಅಕ್ರಮ ಹಣ ವ್ಯವಹಾರ ಕಾಣಿಸುತ್ತಿದೆ ಎಂದು ಇಡಿ ಆರೋಪಿಸಿದೆ.
ಎರಡು ಗಂಟೆಗಳ ಕಾಲ ವಾದ
ಸುದೀರ್ಘ ಎರಡು ಗಂಟೆಗಳ ಕಾಲ ವಾದ ಮಂಡಿಸಿದ ಅವರು, ಡಿಕೆಶಿ ಸಂಪತ್ತಿನ ಸಾಮ್ರಾಜ್ಯದ ಒಂದೊಂದೆ ಇಟ್ಟಿಗೆ ಕಳಚಿಟ್ಟರು. ಬಂಡಲ್ಗಟ್ಟಲೆ ದಾಖಲೆಗಳನ್ನು ಕೋರ್ಟ್ ಮುಂದಿಟ್ಟ ಅವರು, ಡಿಕೆಶಿಯ ಬ್ರಹ್ಮಾಂಡ ವ್ಯವಹಾರದ ಸಣ್ಣ ತುಣುಕು ಮಾತ್ರ ನಿಮ್ಮ ಮುಂದೆ ಇಟ್ಟಿದ್ದೇವೆ, ಸದ್ಯ ತನಿಖೆಯ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಶನಿವಾರಕ್ಕೆ ವಿಚಾರಣೆ ಮುಂದೂಡಿಕೆ
ಜಾರಿ ನಿರ್ದೇಶನಾಲಯದ ಪ್ರಕರಣ ಸಂಬಂಧ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಸುಮಾರು 2 ಗಂಟೆಗಳ ಕಾಲ ಸುದೀರ್ಘ ವಾದ ಮಂಡಿಸಿದ ಇಡಿ ಪರ ವಕೀಲ ಕೆಎಂ ನಟರಾಜ್ ಮತ್ತೆ ವಾದ ಮಂಡನೆಗೆ ಸಮಯ ಕೇಳಿದರು. ಈ ಹಿನ್ನೆಲೆಯಲ್ಲಿ ಸೆ.21ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆ ಮುಂದೂಡಲಾಗಿದೆ.
1.38 ಕೋಟಿ ಕೃಷಿ ಸಂಪಾದನೆ
ಆದಾಯ ತೆರಿಗೆ ಇಲಾಖೆಗೆ ನೀಡಿರುವ ತೆರಿಗೆ ಘೋಷಣೆಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ತೆರಿಗೆ ಕಟ್ಟಿದ ಮಾತ್ರಕ್ಕೆ ಪಿಎಂಎಲ್ಎ ಕಾಯ್ಎ ವ್ಯಾಪ್ತಿಯಿಂದ ನುಣುಚಿಕೊಳ್ಳುವಂತಿಲ್ಲ. ತೆರಿಗೆ ಕಟ್ಟಿದ ಮಾತ್ರಕ್ಕೆ ಕಪ್ಪು ಹಣ ಬಿಳಿ ಹಣ ಆಗುವುದಿಲ್ಲ. ಕೃಷಿಯಿಂದ 1.38 ಕೋಟಿ ಆದಾಯ ಬಂದಿದೆ. ಈ ಕೃಷಿ ಆದಾಯ ಬಳಸಿಯೇ 800 ಕೋಟಿ ರೂ ಆದಾಯಸಂಪಾದನೆ ಆಗಿದೆ ಎನ್ನುವುದನ್ನು ನಂಬಲು ಅಸಾಧ್ಯ ಎಂದು ವಾದ ಮಂಡಿಸಿದರು.
ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರಣೆ ಮುಂದುವರಿಕೆ
ಡಿಕೆ ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಿನವಿಡೀ ವಿಚಾರಣೆ ನಡೆಸಿದ್ದರು. ಡಿಕೆಶಿ ಬೇನಾಮಿ ಆಸ್ತಿ ಹಾಗೂ ಹೆಬ್ಬಾಳ್ಕರ್ ಕುಟುಂಬದ ನಂಟಿನ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಮನೆ ಹಾಗೂ ಕಚೇರಿ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಕೆಲ ಮಾಹಿತಿ ಕಲೆ ಹಾಕಿದ್ದರು. ಶುಕ್ರವಾರ ಕೂಡ ವಿಚಾರಣೆ ಮುಂದುವರೆಯಲಿದೆ.