ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಜ್ಯಸಭೆ ಮಾಜಿ ಸಂಸದ ಕೆ.ಡಿ. ಸಿಂಗ್ ಬಂಧನ
ನವದೆಹಲಿ, ಜನವರಿ 13: ರಾಜ್ಯಸಭೆ ಮಾಜಿ ಸದಸ್ಯ ಮತ್ತು ಉದ್ಯಮಿ ಕೆ.ಡಿ. ಸಿಂಗ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.
ಆಲ್ಕೆಮಿಸ್ಟ್ ಸಮೂಹದ ಪ್ರಕರಣದಲ್ಲಿ 2019ರಲ್ಲಿ ಇ.ಡಿ. ಕನ್ವರ್ ದೀಪ್ ಸಿಂಗ್ ಅವರ ನಿವಾಸದಲ್ಲಿ ಪರಿಶೀಲನೆ ನಡೆಸಿತ್ತು. ಪೊಂಝಿ ಚಿಟ್ ಫಂಡ್ ಯೋಜನೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 2016ರಲ್ಲಿ ಸಿಂಗ್ ಹಾಗೂ ಅವರಿಗೆ ಸಂಬಂಧಿಸಿದ ಆಲ್ಕೆಮಿಸ್ಟ್ ಇನ್ಫ್ರಾ ರಿಯಾಲ್ಟಿ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಕ್ಷಮಾದಾನ ಕೋರಿದ ನೀರವ್ ಮೋದಿಯ ತಂಗಿ ಮತ್ತು ಭಾವ: ಸಾಕ್ಷ್ಯ ಹೇಳಲು ಸಿದ್ಧ
ಆಲ್ಕೆಮಿಸ್ಟ್ ಸಮೂಹದ ಸಂಸ್ಥಾಪಕರಾದ ಸಿಂಗ್, 2012ರವರೆಗೂ ಅದರ ಅಧ್ಯಕ್ಷರಾಗಿದ್ದರು. ಪ್ರಸ್ತುತ ಅವರು ಅದರ ಗೌರವಾಧ್ಯಕ್ಷರಾಗಿದ್ದಾರೆ. 1,900 ಕೋಟಿ ಪೊಂಝಿ ಹಗರಣದಲ್ಲಿ ಸಿಂಗ್ ವಿರುದ್ಧ ಎರಡು ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆ ನಡೆಯುತ್ತಿದೆ.
2019ರ ಜನವರಿಯಲ್ಲಿ ಜಾರಿ ನಿರ್ದೇಶನಾಲಯವು ಸಿಂಗ್ ಅವರಿಗೆ ಸೇರಿದ 239 ಕೋಟಿ ರೂ ಮೌಲ್ಯದ ಸಂಸ್ಥೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಕಂಪೆನಿಯು ಅಕ್ರಮವಾಗಿ ಸಮಗ್ರ ಹೂಡಿಕೆ ಯೋಜನೆ ಆರಂಭಿಸಿತ್ತು. 2015ರವರೆಗೂ 1,916 ಕೋಟಿಗಳಷ್ಟು ಮೊತ್ತ ಸಂಗ್ರಹಿಸಿತ್ತು ಎಂದು ಆರೋಪಿಸಲಾಗಿದೆ. 2016ರಲ್ಲಿ ಈ ಪ್ರಕರಣದ ತನಿಖೆ ಅರಂಭವಾಗಿತ್ತು.
ಸಂಜಯ್ ರಾವತ್ ಸಂಬಂಧಿಯ 72 ಕೋಟಿ ರೂ ಆಸ್ತಿ ಮುಟ್ಟುಗೋಲು ಹಾಕಿದ ಇ.ಡಿ
ಕೆ.ಡಿ ಸಿಂಗ್ ಅವರು ಏಪ್ರಿಲ್ 2014ರಲ್ಲಿ ತೃಣಮೂಲ ಕಾಂಗ್ರೆಸ್ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆದರೆ ಹಗರಣ ಬೆಳಕಿಗೆ ಬಂದ ಬಳಿಕ ಪಕ್ಷ ಅವರನ್ನು ಮೂಲೆಗುಂಪು ಮಾಡಿತ್ತು. ಅವರ ಅವಧಿ ಕಳೆದ ಏಪ್ರಿಲ್ನಲ್ಲಿ ಅಂತ್ಯಗೊಂಡಿತ್ತು. ಪಕ್ಷಕ್ಕೂ ಕೆ.ಡಿ. ಸಿಂಗ್ ಅವರಿಗೂ ಪ್ರಸ್ತುತ ಯಾವುದೇ ಸಂಬಂಧ ಇಲ್ಲ ಎಂದು ಟಿಎಂಸಿ ಮುಖಂಡ ಸೌಗತಾ ರಾಯ್ ತಿಳಿಸಿದ್ದಾರೆ.