ದಿನಕರನ್ ಪ್ರಕರಣ ತನಿಖೆಗೆ ಅಡ್ಡಿಯಾಯ್ತು ವಾಟ್ಸಾಪ್ ತಂತ್ರಜ್ಞಾನ
ಟಿಟಿವಿ ದಿನಕರನ್ ಹಾಗೂ ಅವರ ಏಜೆಂಟ್ ಸುಖೇಶ್ ನಡುವಿನ ಸಂಭಾಷಣೆಗಳನ್ನು ಆಲಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅದರೆ, ಫೋನ್ ಕಾಲ್ ಗಳನ್ನು ಬೇಧಿಸಲು ಸಾಧ್ಯವಾಗಿಲ್ಲ.
ನವದೆಹಲಿ, ಏಪ್ರಿಲ್ 25: ಚುನಾವಣಾ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಅವರ ಸಂಬಂಧಿ ಟಿಟಿವಿ ದಿನಕರನ್ ಹಾಗೂ ಈ ಪ್ರಕರಣದಲ್ಲಿ ಅವರ ಏಜೆಂಟ್ ಆಗಿ ಕಾರ್ಯ ನಿರ್ವಹಿಸಿರುವ ಸುಖೇಶ್ ಚಂದ್ರಶೇಖರ್ ಅವರ ನಡುವಿನ ತನಿಖೆಗೆ ಕೊಂಚ ಹಿನ್ನೆಡೆಯುಂಟಾಗಿದೆ.
ಇದಕ್ಕೆ ಕಾರಣ, ಈ ಇಬ್ಬರೂ ವಾಟ್ಸಾಪ್ ನಲ್ಲಿ ಫೋನ್, ಮೆಸೇಜ್ ಮಾಡಿಕೊಂಡಿರುವುದು. ಇವರಿಬ್ಬರ ನಡುವಿನ ಸಂಭಾಷಣೆಗಳನ್ನು ಆಲಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅದರೆ, ಫೋನ್ ಕಾಲ್ ಗಳನ್ನು ಬೇಧಿಸಲು ಸಾಧ್ಯವಾಗಿಲ್ಲ.
ವಾಟ್ಸಾಪ್ ಸಂಸ್ಥೆಯು ತನ್ನ ಫೋನ್ ಕಾಲ್ಸ್, ಮೇಸೇಜ್ ಹಾಗೂ ವೀಡಿಯೋಗಳಲ್ಲಿ ಎನ್-ಟು-ಎಂಡ್ ಎನ್ ಕ್ರಿಪ್ಷನ್ ಎಂಬ ತಂತ್ರಜ್ಞಾನವನ್ನು ಉಪಯೋಗಿಸುತ್ತಿರುವುದರಿಂದ ಯಾರೂ ಈ ಮೇಸೆಜ್ ಹಾಗೂ ಕರೆಗಳನ್ನು ಬೇಧಿಸಲು ಸಾಧ್ಯವಾಗುವುದಿಲ್ಲ.
ಆದರೂ, ದಿನಕರನ್ ಅವರು ವಿಚಾರಣೆ ವೇಳೆ, ತಾವು ಸುಖೇಶ್ ನನ್ನು ಭೇಟಿಯಾಗಿದ್ದಾಗಿ ಒಪ್ಪಿಕೊಂಡಿದ್ದಾರೆಂದು ಹೇಳಲಾಗಿದೆ. ಆದರೂ, ಅವರ ನಡುವಿನ ಮಾತುಕತೆಯ ಸಂಪೂರ್ಣ ವಿವರಗಳನ್ನು ತಿಳಿಯಲು ಅವರಿಬ್ಬರ ವಾಟ್ಸಾಪ್ ಕರೆ, ಮೆಸೇಜುಗಳನ್ನು ಜಾಲಾಡಲು ನಿರ್ಧರಿಸಿದೆ.