ಚುನಾವಣಾ ಸಮಾವೇಶ ರದ್ದುಗೊಳಿಸಲು ಹಿಂಜರಿಯುವುದಿಲ್ಲ; ಆಯೋಗ ಎಚ್ಚರಿಕೆ
ನವದೆಹಲಿ, ಏಪ್ರಿಲ್ 10: ಶನಿವಾರ ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಚುನಾವಣೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ರಾಜಕೀಯ ಸಮಾವೇಶದಲ್ಲಿ ಕೊರೊನಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದು ಕಂಡುಬಂದರೆ ಸಮಾವೇಶವನ್ನು ರದ್ದುಗೊಳಿಸುವುದಕ್ಕೂ ಹಿಂಜರಿಯುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದೆ.
ಎಲ್ಲಾ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಪತ್ರ ಬರೆದಿದ್ದು, ಕೊರೊನಾ ನಿಯಮಾವಳಿಗಳ ಪಾಲನೆ ಸಂಬಂಧ ಕಟ್ಟುನಿಟ್ಟಿನ ನಿಗಾವಹಿಸಲಾಗುವುದು. ಈ ನಿಯಮಗಳನ್ನು ಪಾಲಿಸದಿರುವುದು ಕಂಡುಬಂದರೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ಅದರಲ್ಲೂ ರಾಜಕಾರಣಿಗಳು ವೇದಿಕೆಯಲ್ಲಿ ಮಾಸ್ಕ್ ಧರಿಸಿದೇ ಇದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಇಲ್ಲವೇ ಸಮಾವೇಶವನ್ನೇ ರದ್ದುಗೊಳಿಸಲಾಗುವುದು ಎಂದು ಉಲ್ಲೇಖಿಸಿದೆ.
ಚುನಾವಣಾ ಪ್ರಚಾರ ವೇಳೆ ಮಾಸ್ಕ್ ಕಡ್ಡಾಯ: ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್
"ಯಾವುದೇ ಸ್ಟಾರ್ ಪ್ರಚಾರಕರು, ರಾಜಕೀಯ ಮುಖಂಡರು, ಅಭ್ಯರ್ಥಿಗಳು, ಕಾರ್ಯಕರ್ತರು ಸಾರ್ವಜನಿಕ ಸಭೆಯಲ್ಲಿ ಅಥವಾ ಸಮಾವೇಶದಲ್ಲಿ ಕೊರೊನಾ ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದರೆ ಆ ಸಭೆ, ಸಮಾವೇಶಕ್ಕೆ ತಡೆಹಿಡಿಯಲಾಗುವುದು" ಎಂದು ಆಯೋಗ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ.
ಈಚಿನ ವಾರಗಳಲ್ಲಿ ದೇಶದಲ್ಲಿ ಕೊರೊನಾ ಪ್ರಕರಣಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದೆ. ಚುನಾವಣಾ ಸಭೆ ಸಮಾವೇಶಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಇತರೆ ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಆಯೋಗದ ಗಮನಕ್ಕೆ ಬಂದಿದೆ.