ತ್ರಿಪುರ ಲೋಕಸಭಾ ಚುನಾವಣೆಯನ್ನು ಮುಂದೂಡಿದ ಚುನಾವಣಾ ಆಯೋಗ
ನವದೆಹಲಿ, ಏಪ್ರಿಲ್ 17: ಈಶಾನ್ಯ ರಾಜ್ಯವಾದ ತ್ರಿಪುರದಲ್ಲಿ ಚುನಾವಣೆ ದಿನಾಂಕವನ್ನು ಏಪ್ರಿಲ್ 18 ರಿಂದ 23 ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ತ್ರಿಪುರದಲ್ಲಿ ಕಾನೂನು, ಸುವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದಿರುವ ಕಾರಣ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಆಯೋಗ ತಿಳಿಸಿದೆ.
ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ರದ್ದು
ಈ ರಾಜ್ಯದಲ್ಲಿ ಎರಡು ಲೋಕಸಭಾ ಕ್ಷೇತ್ರಗಳಿದ್ದು, ತ್ರಿಪುರ ಪಶ್ಚಿಮ ಕ್ಷೇತ್ರದಲ್ಲಿ ಈಗಾಗಲೇ ಚುನಾವಣೆ ನಡೆದಿದೆ. ಏಪ್ರಿಲ್ 11 ರಂದು ಅಲ್ಲಿ ಚುನಾವಣೆ ನಡೆದಿತ್ತು. ಇದೀಗ ಏಪ್ರಿಲ್ 18 ರಂದು ತ್ರಿಪುರ ಪೂರ್ವ ಕ್ಷೇತ್ರದಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದರಿಂದ ಪಾರದರ್ಶಕವಾಗಿ, ನಿರ್ಭಯವಾಗಿ ಮತದಾನ ನಡೆಸಲು ಸಾಧ್ಯವಾಗದಿರಬಹುದಾದ ಕಾರಣ ಚುನಾವಣೆಯನ್ನು ಮುಂದೂಡಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.
ಮಂಗಳವಾರವಷ್ಟೇ ತಮಿಳುನಾಡಿನ ವೆಲ್ಲೂರಿನಲ್ಲಿ ಚುನಾವಣಾ ಆಯೋಗದ ಶಿಫಾರಸ್ಸಿನ ಮೇರೆಗೆ ಚುನಾವಣೆಯನ್ನು ರದ್ದುಗೊಳಿಸಲಾಗಿತ್ತು. ಮತದಾರರ ಮೇಲೆ ಪ್ರಭಾವ ಬೀರುವ ಸಲುವಾಗಿ ಕೋಟ್ಯಂತರ ರೂಪಾಯಿ ಹಣ ಹಂಚಿಕೆಯಾದ ಆರೋಪದ ದೂರು ಸ್ವೀಕರಿಸಿದ ಚುನಾವಣಾ ಆಯೋಗ ಈ ಆದೇಶ ಹೊರಡಿಸಿತ್ತು.