ಜಮ್ಮು ಮತ್ತು ಕಾಶ್ಮೀರ ಕುರಿತು ಚುನಾವಣಾ ಆಯೋಗದ ಮಹತ್ವದ ಚರ್ಚೆ
ನವದೆಹಲಿ, ಆಗಸ್ಟ್ 14: ಭಾರತೀಯ ಚುನಾವಣಾ ಆಯೋಗವು ಜಮ್ಮು ಕಾಶ್ಮೀರ ಮರುಸಂಘಟನೆ ಕಾಯ್ದೆ 2019ರ ಕುರಿತು ಮಂಗಳವಾರ ಸಭೆ ನಡೆಸಿತು.
ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಹಾಗೂ ಹಲವು ಅಧಿಕಾರಿಗಳು ಈ ವಿಚಾರ ಕುರಿತು ಚರ್ಚಿಸಿದರು. ಆರ್ಟಿಕಲ್ 370, 35(ಎ) ರದ್ದು ಕುರಿತ ಯಾವುದೇ ಮಾಹಿತಿಯನ್ನು ಕೇಂದ್ರ ಸರ್ಕಾರವು ಚುನಾವಣಾ ಆಯೋಗಕ್ಕೆ ನೀಡಿರಲಿಲ್ಲ. ಹೀಗಾಗಿ ಏನೇನಾಗಿದೆ ಪ್ರಸ್ತುತ ಸ್ಥಿತಿ ಏನು ಎನ್ನುವುದರ ಕುರಿತು ಅಧ್ಯಯನ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು.
ಜಮ್ಮು ಕಾಶ್ಮೀರಕ್ಕೂ ದೇಶದ ಎಲ್ಲಾ ಕಾನೂನು ಅನ್ವಯ
ಭಾರತ ಸರ್ಕಾರವು ಸಂವಿಧಾನದ ವಿಧಿ 370 ರದ್ದುಗೊಳಿಸಿದ ಬೆನ್ನಲ್ಲೇ ಇದೀಗ ಈಗ ದೇಶದ ಬೇರೆಡೆ ಚಾಲ್ತಿಯಲ್ಲಿದ್ದ ಕಾನೂನು ಜಮ್ಮು ಮತ್ತು ಕಾಶ್ಮೀರಕ್ಕೂ ಅನ್ವಯವಾಗಲಿದೆ. ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿದ್ದು, ವಿಧಾನಸಭೆಯೂ ಇರಲಿದೆ.
ಜಮ್ಮು ಮತ್ತು ಕಾಶ್ಮೀರ ಮರು ಸಂಘಟನೆ ಕಾಯ್ದೆ
ಆಗಸ್ಟ್ 5 ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ 2019 ಅನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿತು. ನಂತರ ಮಸೂದೆಯನ್ನು ಮರುದಿನ ಆಗಸ್ಟ್ 6 ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ಈ ಮಸೂದೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರವು ಈಗ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವನ್ನು ಹೊಂದಿರುತ್ತದೆ. ಲಡಾಖ್ ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿದೆ.
ಅನುಚ್ಛೇದ 370 ಮತ್ತು 35 ಎ ರದ್ದು
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಅನುಚ್ಛೇದ 370 ಮತ್ತು 35 ಎ ರದ್ದುಗೊಳಿಸಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ 2019 ಮಸೂದೆಯನ್ನು ಮಂಡಿಸಿತು.
ಇದೀಗ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಅನುಚ್ಛೇದ 370 ಮತ್ತು 35 ಎ ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಗಡಿ ನಿರ್ಧಾರದ ಬಗ್ಗೆ ಚುನಾವಣಾ ಆಯೋಗದ ಸಭೆ ಮಹತ್ವದ್ದಾಗಿದೆ. ಜಮ್ಮು ಮತ್ತು ಕಾಶ್ಮೀರ ಪ್ರಸ್ತುತ ರಾಷ್ಟ್ರಪತಿಗಳ ಆಡಳಿತದಲ್ಲಿದೆ.
ಬಿಜೆಪಿ, ಪಿಡಿಪಿ ಮೈತ್ರಿ ಪತನ
2018 ರ ಜೂನ್ನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಡುವಿನ ಮೈತ್ರಿ ಪತನದ ನಂತರ ನವೆಂಬರ್ 2018 ರಂದು ಜಮ್ಮು-ಕಾಶ್ಮೀರ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಲಾಯಿತು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ಈ ವರ್ಷದ ಕೊನೆಯಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗ ಜೂನ್ನಲ್ಲಿ ತಿಳಿಸಿತ್ತು.