ಭ್ರಷ್ಟಾಚಾರಿ ನಂಬರ್ ಒನ್ ಮೋದಿ ಹೇಳಿಕೆಗೆ ಆಯೋಗ ಕ್ಲೀನ್ ಚಿಟ್
ನವದೆಹಲಿ, ಮೇ 8: ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಭ್ರಷ್ಟಾಚಾರಿ ನಂಬರ್ ಒನ್ ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಕೇಂದ್ರ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ.
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಮೋದಿ, 'ಜೀವನದ ಕೊನೆಯ ಕ್ಷಣದವರೆಗೂ ರಾಜೀವ್ ಗಾಂಧಿ ಭ್ರಷ್ಟಾಚಾರಿ ನಂಬರ್ ಒನ್ ಆಗಿದ್ದರು' ಎಂದು ಹೇಳಿದ್ದರು. ಮೋದಿ ಹೇಳಿಕೆ ವಿರೋಧಿಸಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿತ್ತು.
ಮೋದಿ ಮತ್ತೆ ನಿರಾಳ: ಎರಡು ಪ್ರಕರಣಗಳಲ್ಲಿ ಕ್ಲೀನ್ ಚಿಟ್
ಆದರೆ ಮೋದಿ ಪ್ರಚಾರ ಭಾಷಣದಲ್ಲಿ ಯಾವುದೇ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಆಯೋಗದ ಸಮಿತಿ ಅಭಿಪ್ರಾಯ ಪಟ್ಟಿದೆ. ಈಗಾಗಲೇ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ನಾಯಕಿ ಸುಶ್ಮಿತಾ ದೇವ್ ಅರ್ಜಿ ಸಲ್ಲಿಸಿದ್ದಾರೆ.
ಆಯೋಗದಿಂದ ಕ್ಲೀನ್ ಚಿಟ್ ಸಿಗುವುದು ಖಾತ್ರಿಯಾಗಿದೆ. ಹೀಗಾಗಿ ಸುಪ್ರೀಂಕೋರ್ಟ್ ನೇರ ವಿಚಾರಣೆ ನಡೆಸಲಿ ಎಂದು ದೇವ್ ದಾಖಲಿಸಿದ್ದರು. ಈ ಅರ್ಜಿ ಸಲ್ಲಿಕೆಯಾದ ಬಳಿಕ ಆಯೋಗ ಕ್ಲೀನ್ ಚಿಟ್ ನೀಡಿದೆ.
ಭ್ರಷ್ಟಾಚಾರಿ ನಂಬರ್ ಒನ್ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದ್ದರೆ, ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷಗಳು ಟೀಕಿಸಿವೆ. ಹಾಲಿ ಪ್ರಧಾನಿಯನ್ನು ಚೋರ್ ಎಂದು ಕಾಂಗ್ರೆಸ್ ಸಂಬೋಧಿಸುತ್ತದೆ. ಆದರೆ ರಾಜೀವ್ ಗಾಂಧಿಯನ್ನು ಭ್ರಷ್ಟಾಚಾರಿ ಎಂದರೆ ಅವರಿಗೆ ಸಮಸ್ಯೆ ಏನು ಎಂದು ಬಿಜೆಪಿ ಪ್ರಶ್ನಿಸಿದೆ.
ರಾಜೀವ್ ಕುರಿತ ಮೋದಿ ಹೇಳಿಕೆ: ದೆಹಲಿ ವಿವಿಯ 200 ಅಧ್ಯಾಪಕರ ಖಂಡನೆ
ಆದರೆ ಪ್ರಧಾನಿ ಹುದ್ದೆಯಲ್ಲಿ ಇದ್ದುಕೊಂಡು ಮಾಜಿ ಪ್ರಧಾನಿಯೊಬ್ಬರ ಮೇಲೆ ಈ ರೀತಿ ಹೇಳಿಕ ನೀಡುವುದು ಸೂಕ್ತವಲ್ಲ ಎಂದು ಪ್ರತಿಪಕ್ಷಗಳ ಅಭಿಪ್ರಾಯವಾಗಿದೆ.