ಭಾರತ-ಪಾಕಿಸ್ತಾನ ಕದನ ಎಂದ ಕಪಿಲ್ ಟ್ವೀಟ್ ಮೇಲೆ ಆಯೋಗ ಕೆಂಗಣ್ಣು
ನವದೆಹಲಿ, ಜನವರಿ 23: ದೇಶದೆಲ್ಲೆಡೆ ಚರ್ಚೆಗೀಡಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್ ಪಿಆರ್) ಕುರಿತಂತೆ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಗುರುವಾರದಂದು ಮಾಡಿದ ಟ್ವೀಟ್ ಮೇಲೆ ಚುನಾವಣಾ ಆಯೋಗದ ಕೆಂಗಣ್ಣು ಬೀರಿದೆ. ವಿವಾದಿತ ಟ್ವೀಟ್ ಡಿಲೀಟ್ ಮಾಡುವಂತೆ ಟ್ವಿಟ್ಟರ್ ಗೆ ಕೇಳಿಕೊಂಡಿದೆ.
ಫೆಬ್ರವರಿ 8ರಂದು ಭಾರತ ಹಾಗೂ ಪಾಕಿಸ್ತಾನದ ಕದನ ನೋಡಬಹುದು ಎಂದಿದ್ದರು. ಶಹೀನ್ ಬಾಗ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗಳನ್ನು ವಿರೋಧಿಸಿ, ದೆಹಲಿ ಚುನಾವಣೆಯನ್ನು ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ಧ ಎಂಬರ್ಥದಲ್ಲಿ ಮಿಶ್ರಾ ಹೇಳಿದ್ದರು.
ಫೆಬ್ರವರಿ 8ಕ್ಕೆ ಭಾರತ-ಪಾಕಿಸ್ತಾನ ಕದನ ಎಂದ ಕಪಿಲ್ ಮಿಶ್ರಾ
ದೆಹಲಿ ಮುಖ್ಯ ಚುನಾವಣಾ ಅಧಿಕಾರಿಯವರು ಆಯೋಗಕ್ಕೆ ಈ ಕುರಿತಂತೆ ಪತ್ರ ಕಳಿಸಿ, ಟ್ವೀಟ್ ಡಿಲೀಟ್ ಮಾಡಲು ಶಿಫಾರಸು ಕಳಿಸಿದ್ದರು. ನಂತರ ಟ್ವೀಟ್ ಕುರಿತಂತೆ ಮಿಶ್ರಾಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವರಾಗಿದ್ದ ಮಿಶ್ರಾ ಈಗ ಬಿಜೆಪಿಯಿಂದ ಮಾಡೆಲ್ ಟೌನ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. 2017ರಲ್ಲಿ ಮಾಜಿ ಎಎಪಿ ನಾಯಕ ಮಿಶ್ರಾರನ್ನು ಕೇಜ್ರಿವಾಲ್ ಅವರು ಸಂಪುಟದಿಂದ ಕೈಬಿಟ್ಟಿದ್ದರು. ನಂತರ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಎಎಪಿ ಶಾಸಕತ್ವದಿಂದ ಅನರ್ಹಗೊಂಡಿದ್ದರು.
ದೆಹಲಿ ಚುನಾವಣೆ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಿಶ್ರಾ, ಪಾಕಿಸ್ತಾನ ಈಗಾಗಲೇ ಶಹೀನ್ ಬಾಗ್ ಪ್ರವೇಶಿಸಿದೆ ಹಾಗೂ ಪಾಕಿಸ್ತಾನದ ಕೆಲ ತುಣುಕುಗಳನ್ನು ದೆಹಲಿಯಲ್ಲಿ ಕಾಣಬಹುದು ಎಂದಿದ್ದಾರೆ.
Kapil Mishra, BJP: Roads are encroached upon in Shaheen Bagh, people aren't being allowed to go to schools, offices, hospitals, inciting slogans are being raised. The shamelessness with which Manish Sisodia said he stands with Shaheen Bagh means that this is a political movement. https://t.co/PpYXzFMfm1
— ANI (@ANI) January 24, 2020
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಸುಲಭವಾಗಿ ಜಯಭೇರಿ ಬಾರಿಸಲಿದ್ದು, ಕೇಜ್ರಿವಾಲ್ ಅವರು ಫೆಬ್ರವರಿ 11ರಂದು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮಿಶ್ರಾ ಅವರು ಎಎಪಿ ಶಾಸಕ ಅಖಿಲೇಶ್ ಪತಿ ತ್ರಿಪಾಠಿ ಎದುರು ಸ್ಪರ್ಧೆಗಿಳಿದಿದ್ದಾರೆ.
2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದುಕೊಂಡಿತ್ತು. ಬಿಜೆಪಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆದರೆ 2017ರಲ್ಲಿ ಮುನ್ಸಿಪಾಲ್ ಕಾರ್ಪೊರೇಷನ್ ಚುನಾವಣೆ, 2019ರ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಲಯಕ್ಕೆ ಮರಳಿದೆ.
ಈ ಬಾರಿ ಬಿಜೆಪಿ ಮಿತ್ರ ಪಕ್ಷ ಜೆಜೆಪಿ ಪಕ್ಷ ಕೂಡಾ ಕಣಕ್ಕಿಳಿಯಲಿದೆ. ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿ ಮುರಿದಿರುವುದರಿಂದ ಮತದಾರರನ್ನು ಸೆಳೆಯುವುದು ಬಿಜೆಪಿಗೆ ಸುಲಭವಾಗಲಿದೆ. ದೆಹಲಿಯಲ್ಲಿ ಜನವರಿ 14ರಿಂದ ಚುನಾವಣಾ ಆಯೋಗ ಅಧಿಸೂಚನೆ ಜಾರಿಯಾಗಲಿದೆ. ಜನವರಿ 24ರೊಳಗೆ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆಯಬಹುದು. ಫೆಬ್ರವರಿ 08ರಂದು ಮತದಾನ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಹೊರಬರಲಿದೆ.