ಕೋಟಿ ರುಪಾಯಿ ಸಮೋಸ ತಿಂದು, ಟೀ ಕುಡಿದು ತೇಗಿತೆ ಆಪ್?
ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರಕಾರ ಹದಿನೆಂಟು ತಿಂಗಳಲ್ಲಿ ಒಂದು ಕೋಟಿ ರುಪಾಯಿಯಷ್ಟು ಟೀ-ಸಮೋಸಕ್ಕೆ ಖರ್ಚು ಮಾಡಿದೆಯಂತೆ. ಇದೇ ಸಂಖ್ಯೆಯನ್ನು ಮುಂದಿಟ್ಟುಕೊಂಡು ಬಿಜೆಪಿ ದೆಹಲಿಯಲ್ಲಿ ಪೋಸ್ಟರ್ ಗಳನ್ನು ಹಚ್ಚಿದೆ
ನವದೆಹಲಿ, ಏಪ್ರಿಲ್ 11: ಇದೀಗ ಆಮ್ ಆದ್ಮಿ ಪಕ್ಷದ ಮೇಲೆ 1 ಕೋಟಿ ರುಪಾಯಿ ಸಮೋಸ ಹಗರಣದ ಆರೋಪ ಕೇಳಿಬಂದಿದೆ. ಬಿಜೆಪಿ ವಕ್ತಾರ ತಜಿಂದರ್ ಪಾಲ್ ಸಿಂಗ್ ಬಗ್ಗ ಈ ಬಗ್ಗೆ ದೆಹಲಿಯಲ್ಲಿ ಪೋಸ್ಟರ್ ಗಳನ್ನು ಹಾಕಿಸಿದ್ದು, ಕಳೆದ ಹದಿನೆಂಟು ತಿಂಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರ ಸಮೋಸ ಹಾಗೂ ಟೀಗಾಗಿ ಸಾರ್ವಜನಿಕರ ಹಣ ಒಂದು ಕೋಟಿ ರುಪಾಯಿ ಖರ್ಚು ಮಾಡಿದೆ ಎಂದು ಆರೋಪಿಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಕೇಜ್ರಿವಾಲ್ ಮನೆಯಲ್ಲಿ ನಡೆದ ಔತಣಕೂಟದಲ್ಲಿ ಒಬ್ಬ ವ್ಯಕ್ತಿಗೆ ಹದಿಮೂರು ಸಾವಿರ ರುಪಾಯಿ ಖರ್ಚು ಮಾಡಲಾಗಿತ್ತು. ಅದಕ್ಕಾಗಿ ಸಾರ್ವಜನಿಕ ಹಣ ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದ ನಂತರ ಇದೀಗ ಸಮೋಸ ಹಗರಣದ ಬಗ್ಗೆ ಬಿಜೆಪಿ ಪ್ರಸ್ತಾವ ಮಾಡಿದೆ.[ದೆಹಲಿಯಲ್ಲಿ ಎಎಪಿಯಿಂದ ಅಧಿಕಾರ ದುರುಪಯೋಗ: ವರದಿಯಲ್ಲಿ ಏನಿದೆ?]
ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ದೆಹಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಜೇಂದ್ರ ಗುಪ್ತಾ ಆಗ್ರಹಿಸಿದ್ದಾರೆ. ಸರಕಾರವು ಸಾರ್ವಜನಿಕ ಹಣವನ್ನು ಪೋಲು ಮಾಡಬಾರದು. ಆದರೆ ಕೇಜ್ರಿವಾಲ್ ಮತ್ತು ಅವರ ಪಕ್ಷ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.[ಬಿಜೆಪಿ ಗೆಲುವಿಗೆ ಇವಿಎಂ ಲೋಪ ಎನ್ನುತ್ತಿದ್ದ ಕೇಜ್ರಿವಾಲ್ ಈಗ ಏನು ಹೇಳ್ತಾರೋ?]
ಆದರೆ, ಈ ಆರೋಪವನ್ನು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿರಾಕರಿಸಿದ್ದಾರೆ. ಬಿಲ್ ಗಳನ್ನು ತನ್ನ ಬಳಿ ಕಳುಹಿಸಿದ್ದು ಹೌದು, ಆದರೆ ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಇದಕ್ಕೆ ಸಂಬಂಧಪಟ್ಟ ಕಡತದ ಮಾಹಿತಿಯು ಲೆಫ್ಟಿನೆಂಟ್ ಜನರಲ್ ಕಚೇರಿಯಿಂದ ಸೋರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.