ಉಡುಗಿಸುವ ಚಳಿಯ ನಡುವೆ ಮತ್ತಷ್ಟು ನಡುಗಿಸಿದ ಭೂಮಿ: ದೆಹಲಿಯಲ್ಲಿ ಭೂಕಂಪನ
ನವದೆಹಲಿ, ಡಿಸೆಂಬರ್ 18: ತೀವ್ರ ಚಳಿ, ರೈತರ ಪ್ರತಿಭಟನೆ, ಕೊರೊನಾ ವೈರಸ್ ಸೋಂಕು, ವಾಯುಮಾಲಿನ್ಯ ಮುಂತಾದ ಸಮಸ್ಯೆಗಳಿಂದ ನಡುಗುತ್ತಿರುವ ದೆಹಲಿ ಜನತೆಯನ್ನು ಭೂಮಿ ಕೂಡ ನಡುಗಿಸಿದೆ. ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ರಾತ್ರಿ ಭೂಕಂಪನದ ಅನುಭವವಾಗಿದೆ. ಇದರಿಂದ ಸವಿನಿದ್ದೆಯಲ್ಲಿದ್ದವರು, ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದವರು ಭಯದಿಂದ ಎದ್ದು ಮನೆಯಿಂದ ಹೊರಗೋಡಿದ್ದಾರೆ. ಯಾವುದೇ ಸಾವು-ನೋವು, ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಭೂಕಂಪನದ ಕೇಂದ್ರಬಿಂದು ಇದ್ದು, ರಿಕ್ಟರ್ ಮಾಪನದಲ್ಲಿ ಮಧ್ಯಮ ಪ್ರಮಾಣದ 4.2 ತೀವ್ರತೆಯಷ್ಟು ಭೂಕಂಪನ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. ಕೇಂದ್ರ ಬಿಂದು ಅಲ್ವಾರ್ನಲ್ಲಿ ಸುಮಾರು ಐದು ಕಿಮೀ ಆಳದ ಭಾಗದಲ್ಲಿ ಗುರುವಾರ ರಾತ್ರಿ 11.46ಕ್ಕೆ ಭೂಮಿ ನಡುಗಿದೆ.
ದೆಹಲಿ, ನೋಯ್ಡಾ, ಗುರುಗ್ರಾಮ ಮತ್ತು ಘಾಜಿಯಾಬಾದ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಭೂಮಿ ಕಂಪಿಸಿದಾಗಿ ಟ್ವಿಟ್ಟರ್ ಬಳಕೆದಾರರು ಹೇಳಿಕೊಂಡಿದ್ದಾರೆ. ಹರ್ಯಾಣದ ಗುರುಗ್ರಾಮದಿಂದ ನೈಋತ್ಯ ಭಾಗದ 48 ಕಿಮೀ ದೂರದ ಪ್ರದೇಶದಲ್ಲಿ 7.5 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಇದ್ದಿದ್ದಾಗಿ ಆರಂಭದ ವರದಿಗಳು ಹೇಳಿದ್ದವು.
ಈ ತಿಂಗಳ ಆರಂಭದಲ್ಲಿ ರಿಕ್ಟರ್ ಮಾಪಕದಲ್ಲಿ 1.7 ರಿಂದ 3.3 ತೀವ್ರತೆವರೆಗಿನ 19 ಭೂಕಂಪನಗಳು ಗುಜರಾತ್ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಉಂಟಾಗಿದ್ದವು. ಈ ಭೂಕಂಪನಗಳು ಮುಂಗಾರಿನ ಪರಿಣಾಮವಾಗಿ ಉಂಟಾಗಿದ್ದು ಎಂದುಗುಜರಾತ್ನ ಭೂಕಂಪ ಸಂಶೋಧನಾ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದರು.