ಉತ್ತರ ಭಾರತದ ಕೆಲವೆಡೆ ಲಘು ಭೂಕಂಪನ, ಹಾನಿ ಇಲ್ಲ
ನವ ದೆಹಲಿ, ಜನವರಿ 31: ಉತ್ತರ ಭಾರತದ ಕೆಲವು ನಗರಗಳಲ್ಲಿ ಬುಧವಾರ ಮಧ್ಯಾಹ್ನದ ವೇಳೆ ಲಘು ಭೂಕಂಪನದ ಅನುಭವವಾಗಿದೆ. ಆದರೆ ಯಾವುದೇ ಜೀವ ಅಥವಾ ಆಸ್ತಿ ಹಾನಿ ಆಗಿಲ್ಲ.
ಕಾಶ್ಮೀರ, ನವ ದೆಹಲಿ, ಹರ್ಯಾಣ ಮತ್ತು ಪಂಜಾಬ್ನ ಕೆಲವು ನಗರಗಳಲ್ಲಿ ಭೂಕಂಪನದ ಅನುಭವವಾಗಿದ್ದು, ಯಾವುದೇ ಆಸ್ತಿ ಅಥವಾ ಪ್ರಾಣ ಹಾನಿಯಾಗಿರುವ ವರದಿ ಬಂದಿಲ್ಲ. ಕಾಶ್ಮೀರದಲ್ಲಿ ತುಸು ಹೆಚ್ಚಿನ ಭೂಕಂಪನದ ಅನುಭವವಾಗಿದೆ. ಉಳಿದೆಡೆ ಲಘುವಾಗಿ ಭೂಮಿ ಕಂಪಿಸಿದೆ. ಭೂಕಂಪನದ ಕಾರಣ ದೆಹಲಿಯಲ್ಲಿ ಕೆಲ ಕಾಲ ಮೆಟ್ರೊ ಓಡಾಟ ಸ್ಥಗಿತಗೊಳಿಸಲಾಗಿದೆ.
ಭೂಕಂಪನದ ಕೇಂದ್ರ ಅಪ್ಘಾನಿಸ್ಥಾನದ ಹಿಂದೂಖುಷ್ ಎನ್ನಲಾಗಿದ್ದು, ಅಲ್ಲಿ 6.2 ರಿಕ್ಟರ್ ತೀರ್ವತೆಯ ಭೂಕಂಪನವಾಗಿದೆ. ಹಿಂದೂ ಖುಷ್ನ ಭೂಕಂಪನದ ಪರಿಣಾಮವು 190 ಕಿ.ಮೀ ಪರಿದಿಯವರೆಗೆ ಹರಡಿದೆ, ಹಾಗಾಗಿ ಭಾರತದ ಕೆಲವು ರಾಜ್ಯಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಭೂಕಂಪಶಾಸ್ತ್ರ ತಜ್ಞರು ಹೇಳಿದ್ದಾರೆ.
ಅಪ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪನದಿಂದ ಬಲೂಚಿಸ್ತಾನದ ಲಾಸಬೆಲ್ಲಾ ನಲ್ಲಿ ಒರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಆಸ್ತಿ ಪಾಸ್ತಿ ನಷ್ಟವಾಗಿದೆ. ಪಾಕಿಸ್ತಾನದಲ್ಲೂ 6.1 ರಿಕ್ಟರ್ ತೀರ್ವತೆಯ ಭೂಕಂಪನದ ಅನುಭವವಾಗಿದ್ದು ಅಲ್ಲಿಯೂ ಆಸ್ತಿ-ಪಾಸ್ತಿ ನಷ್ಟವುಂಟಾಗಿದೆ.