ಸಿಸಿಟಿವಿ ಚಿತ್ರ: ನಡುರಸ್ತೆಯಲ್ಲೇ ಯುವತಿಯನ್ನು ಇರಿದು ಕೊಂದ ಭಗ್ನಪ್ರೇಮಿ
ನವದೆಹಲಿ ಅಕ್ಟೋಬರ್ 20: ಪ್ರೀತಿಯನ್ನು ನಿರಾಕರಿಸಿದ ಕೋಪಕ್ಕೆ ಯುವಕನೊಬ್ಬ ನಡು ರಸ್ತೆಯಲ್ಲಿ ಮನಬಂದಂತೆ ಚಾಕುವಿನಿಂದ ಇರಿದು ಯುವತಿಯನ್ನು ಕೊಲೆ ಮಾಡಿದ ಭಯಾನಕ ಘಟನೆ ದೆಹಲಿಯ ದ್ವಾರಕದಲ್ಲಿ ನಡೆದಿದೆ. ಸೋಮವಾರ ರಾತ್ರಿ ದ್ವಾರಕಾದಲ್ಲಿರುವ ಯುವತಿ ಮನೆಯ ಬಳಿ ಈ ಘಟನೆ ನಡೆದಿದೆ. ಯುವತಿಯ ಮೇಲೆ ಯುವಕ ಹಲ್ಲೆ ಮಾಡಿ ಬಳಿಕ ಚಾಕುವಿನಿಂದ ಆರು ಬಾರಿ ಇರಿದು ಕೊಲೆಗೈದಿದ್ದಾನೆ.
23 ವರ್ಷದ ಡಾಲಿ ಬಬ್ಬರ್ ಎಂಬ ಯುವತಿ ಮೃತ ದುರ್ದೈವಿ. ಬಾಲ್ಯದಿಂದಲೂ ಪರಸ್ಪರ ಪರಿಚಯವಿದ್ದ ಅಂಕಿತ್ ಗಾಬಾ (25) ಕೊಲೆಗೈದ ಆರೋಪಿಯಾಗಿದ್ದಾನೆ. ಆಕೆಯ ಶವ ಸೋಮವಾರ ರಾತ್ರಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಘಟನೆಯಿಂದ ನೆರೆಹೊರೆಯವರಲ್ಲಿ ಆತಂಕ ಹುಟ್ಟಿಸಿದೆ.
ಬಬ್ಬರ್ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳೊಂದಿಗೆ ಕೆಲಸ ಮಾಡುತ್ತಿದ್ದಳು. ಸೋಮವಾರ ರಾತ್ರಿ ತನ್ನ ಕುಟುಂಬಕ್ಕೆ ತಾನು ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಡೆಲಿವರಿ ಎಕ್ಸಿಕ್ಯುಟಿವ್ ಒಬ್ಬರು ಕಾಲೋನಿಯ ಮೂಲಕ ಹಾದು ಹೋಗುತ್ತಿದ್ದಾಗ ಗಾಯಗೊಂಡ ಯುವತಿಯನ್ನು ನೋಡಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಸಿಸಿಟಿವಿ ದೃಶ್ಯ
ಸಿಸಿಟಿವಿ ದೃಶ್ಯಾವಳಿಯಲ್ಲಿ ಮೂವರು ಪುರುಷರು ಯುವತಿಯೊಂದಿಗೆ ನಿಂತಿದ್ದಾರೆ. ಅವರಲ್ಲಿ ಒಬ್ಬನು ಏಕಾಏಕಿ ಅವಳ ಮೇಲೆ ಹಲ್ಲೆ ಮಾಡುತ್ತಾನೆ. ನಂತರ ಚಾಕುವಿನಿಂದ ಇರಿಯಲು ಆರಂಭಿಸುತ್ತಾನೆ. ಘಟನೆಯನ್ನು ಯುವಕನೊಂದಿಗೆ ಇದ್ದ ಇತರರು ಮೂಕಪ್ರೇಕ್ಷಕರಾಗಿ ನೋಡುತ್ತಿರುವುದು ಸೆರೆಯಾಗಿದೆ. ಜೊತೆಗೆ ಅನೇಕ ನಿವಾಸಿಗಳು ಮಹಿಳೆಯ ಕಿರುಚಾಟವನ್ನು ಕೇಳಿದರೂ ಯಾರೂ ಆಕೆಯ ಸಹಾಯಕ್ಕೆ ಮುಂದೆ ಬರಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಹಿಂದೆ ಕೊಲೆಗೈದ ಆರೋಪಿಗಳು ಆಕೆಗೆ ಪಿಸ್ಲೂಲ್ ತೋರಿಸಿ ಬೆದರಿಕೆ ಹಾಕಿದ್ದರು ಎಂದು ಕುಟುಂಬ ಹೇಳಿಕೊಂಡಿದೆ.
ಪೊಲೀಸರ ಪ್ರತಿಕ್ರಿಯೆ
"ರಸ್ತೆಯ ಮೇಲೆ ಮಲಗಿರುವ ಮಹಿಳೆಯ ಬಗ್ಗೆ ನಮಗೆ ಕರೆ ಬಂತು. ನಾವು ಸ್ಥಳವನ್ನು ತಲುಪಿದೆವು. ಅವಳಿಗೆ ಅನೇಕ ಇರಿತದ ಗಾಯಗಳು ಕಂಡುಬಂದಿವೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ನಾವು ಕೂಡಲೆ ಕುಟುಂಬಕ್ಕೆ ಮಾಹಿತಿ ನೀಡಿದ ತಕ್ಷಣ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಘಟನೆಯ ಬಗ್ಗೆ ನೆರೆಹೊರೆಯವರೊಂದಿಗೆ ಮಾಹಿತಿ ಪಡೆದಾಗ ಅವರು ಅಂಕಿತ್ ಗಾಬಾ (25) ಎಂದು ಗುರುತಿಸಲ್ಪಟ್ಟ ಒಬ್ಬ ವ್ಯಕ್ತಿಯನ್ನು ನೋಡಿರುವುದಾಗಿ ಮಾಹಿತಿ ನೀಡಿದರು. ಬಬ್ಬರ್ ಮೇಲೆ ಅಂಕಿತ್ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆತನು ಅವಳಿಗೆ ಮೊದಲೇ ಪ್ರೀತಿ ಪ್ರಸ್ತಾಪ ಮಾಡಿದ್ದನು ಎಂದು ನಮಗೆ ಹೇಳಲಾಯಿತು, "ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಕುಟುಂಬಸ್ಥರ ಆರೋಪ
ಆಕೆಯ ಕಿರಿಯ ಸಹೋದರ ಲಕ್ಷಯ್ ಮಾತನಾಡಿ "ಅಂಕಿತ್ ತನ್ನನ್ನು ಬಂದೂಕಿನಿಂದ ಬೆದರಿಸಿದನೆಂದು ಅವಳು ತನ್ನ ಸ್ನೇಹಿತರೊಬ್ಬರಿಗೆ ತಿಳಿಸಿದ್ದಳು. ಪೊಲೀಸರು ನಮಗೆ ಮಾಹಿತಿ ನೀಡಿದಾಗ ನಾವು ಮಲಗಿದ್ದೆವು. ವಿಷಯ ತಿಳಿದ ತಕ್ಷಣ ಘಟನೆಯ ಸ್ಥಳಕ್ಕೆ ನಾನು ಓಡಿ ಹೋದೆ. ಅವಳು ರಸ್ತೆಯಲ್ಲಿ ಬಿದ್ದಿರುವುದನ್ನು ನಾನು ನೋಡಿದೆ. ಅಲ್ಲಿ ಅನೇಕ ಜನರಿದ್ದರು. ಆದರೆ ಯಾರೂ ಆಕೆಗೆ ಸಹಾಯ ಮಾಡಿರಲಿಲ್ಲ. ಡಾಲಿ ಅಕ್ಕ ತನ್ನ ಇವೆಂಟ್ ಮ್ಯಾನೇಜ್ಮೆಂಟ್ ಕೆಲಸವನ್ನು ಮತ್ತೆ ಪ್ರಾರಂಭಿಸಲು ಬಯಸಿದ್ದಳು. ಅವಳು ಎಲ್ಲರೊಂದಿಗೆ ಸ್ನೇಹಪರಳಾಗಿದ್ದಳು. ಜೊತೆಗೆ ಅವಳು ಅಂಕಿತ್ (ಆರೋಪಿ)ನನ್ನು ಸಹೋದರರಂತೆ ನೋಡಿಕೊಂಡಿದ್ದಳು," ಎಂದಿದ್ದಾರೆ.
ಅಂಕಿತ್ ಈ ಹಿಂದೆ ಹಲವು ಬಾರಿ ಡಾಲಿಯನ್ನು ಸಂಪರ್ಕಿಸಿದ್ದನು. ತಾನು ಆಕೆಯನ್ನು ಪ್ರೀತಿ ಮಾಡುವ ಬಗ್ಗೆಯೂ ಹೇಳಿಕೊಂಡಿದ್ದನು. ಆದರೆ ಅವಳು ಆಸಕ್ತಿ ತೋರಿಸಿರಲಿಲ್ಲ ಎಂದು ಆಕೆಯ ಸೋದರಸಂಬಂಧಿ ಸಂಜನಾ ಹೇಳಿದ್ದಾರೆ. "ಅವರು ಬಾಲ್ಯದಿಂದಲೂ ಪರಸ್ಪರ ತಿಳಿದಿದ್ದಾರೆ. ಆತ ಸ್ಥಳೀಯ ದುಷ್ಕೃತ್ಯವೆಸಗುವ ಗ್ಯಾಂಗ್ಗಳೊಂದಿಗೆ ಭಾಗಿಯಾಗಿದ್ದಾನೆ. ಡಾಲಿಗೆ ಆಗಾಗ ಬೆದರಿಕೆ ಹಾಕುತ್ತಿದ್ದನು," ಎಂದು ಅವರು ಹೇಳಿದರು.
"ನಾನು ಅವಳನ್ನು ಹೊರಗೆ ಹೋಗದಂತೆ ತಡೆದಿದ್ದೆ. ಅವಳು ಚಿಕ್ಕವಳು. ಲಾಕ್ಡೌನ್ನಿಂದಾಗಿ ಅವಳು ಕೆಲಸ ಕಳೆದುಕೊಂಡಿದ್ದಳು. ಆದರೆ ಮತ್ತೆ ಕೆಲಸ ಪಡೆಯಲು ಪ್ರಾರಂಭಿಸುತ್ತಿದ್ದಳು. ಇದರಿಂದ ನಾನು ಸಂತೋಷವಾಗಿದ್ದೆ. ಅವಳು ಈ ಮನೆಯನ್ನು ನಡೆಸುತ್ತಿದ್ದಳು. ಆಕೆಯ ತಂದೆ ಆಟೋರಿಕ್ಷಾ ಓಡಿಸುತ್ತಾರೆ. ಈಗ ನಮಗೆ ಯಾರು ಸಹಾಯ ಮಾಡುತ್ತಾರೆ? ನನಗೆ ನನ್ನ ಮಗಳಿಗೆ ನ್ಯಾಯ ಬೇಕು," ಎಂದು ಆಕೆಯ ತಾಯಿ ಮೀನಾ ಅಳಲು ತೋಡಿಕೊಂಡಿದ್ದಾರೆ.
ತಲೆಮರೆಸಿಕೊಂಡ ಆರೋಪಿ
ಇನ್ನೂ ಈ ಘಟನೆ ಬಗ್ಗೆ ಮಾತನಾಡಿದ ದ್ವಾರಕಾ ಡಿಸಿಪಿ ಶಂಕರ್ ಚೌಧರಿ, "ಮೂವರು ಆರೋಪಿಗಳನ್ನು ಬಂಧಿಸಲು ನಾವು ಅನೇಕ ತಂಡಗಳನ್ನು ಕಳುಹಿಸಿದ್ದೇವೆ. ಕೊಲೆ ಪ್ರಕರಣ ದಾಖಲಾಗಿದೆ. ನಾವು ಆಕೆಯ ಕುಟುಂಬ ಮತ್ತು ನೆರೆಹೊರೆಯವರನ್ನು ವಿಚಾರಣೆ ಮಾಡುತ್ತಿದ್ದೇವೆ. ಘಟನೆಯ ಬಳಿಕ ಆರೋಪಿಗಳು ತಲೆಮರಿಸಿಕೊಂಡಿದ್ದರು. ಸದ್ಯ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ," ಎಂದು ಹೇಳಿದ್ದಾರೆ.
ನಿವಾಸಿಗಳ ಆತಂಕ
ಘಟನೆಯ ಬಳಿಕ ಆತಂಕಗೊಂಡ ದ್ವಾರಕದ ಬಿಂದಾಪುರದಲ್ಲಿನ ಜನ, ಓಂ ವಿಹಾರ್ ಪ್ರದೇಶದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. "ನಾವು ಹಲವಾರು ಬಾರಿ ಪೊಲೀಸರಿಗೆ ದೂರು ನೀಡಿದ್ದೇವೆ ಆದರೆ ಯಾರೂ ದೂರು ಸ್ವೀಕರಿಸಿಲ್ಲ. ನಿನ್ನೆ ರಾತ್ರಿ ನಾನು ಮಹಿಳೆಯ ಕಿರುಚಾಟವನ್ನು ಕೇಳಿದೆ ಮತ್ತು ಮೂವರು ಹುಡುಗರನ್ನು ನೋಡಿದೆ ಆದರೆ ಪೊಲೀಸರು ಬರುವ ವೇಳೆಗೆ ಅವರು ಪರಾರಿಯಾದರು "ಎಂದು ಸ್ಥಳದ ಪಕ್ಕದ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿರುವ ಅನಿತಾ ಹೇಳಿದರು.