ಶಿವಮೊಗ್ಗದ ಬಳಿಕ ಚಿಕ್ಕಬಳ್ಳಾಪುರ ಸಮೀಪ ಸ್ಪೋಟ; ಕೇಂದ್ರ ಸಚಿವರ ಕಳವಳ!
ಬೆಂಗಳೂರು, ಫೆ. 23: ರಾಜ್ಯದಲ್ಲಿ ಒಂದು ತಿಂಗಳಲ್ಲಿ ಎರಡನೇ ಬಾರಿ ಕಲ್ಲುಗಣಿ ಜಿಲೆಟಿನ್ ಸ್ಫೋಟ ನಡೆದಿದೆ. ಇದಕ್ಕೆ ನಿರ್ಲಕ್ಷವೇ ಕಾರಣ ಎಂದು ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದಿವೆ. ಸ್ಪೋಟ ನಡೆದರೆ ನಾವೇನು ಮಾಡಲು ಸಾಧ್ಯ ಎಂದು ಸಿಎಂ ಯಡಿಯೂರಪ್ಪ ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ದುರ್ಘಟನೆಯಲ್ಲಿ 6 ಜನರು ಮೃತಪಟ್ಟು ಒಬ್ಬರಿಗೆ ಗಾಯಗಳಾಗಿವೆ. ಘಟನೆಯಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದರು.
ಘಟನೆಯ ಕುರಿತು ಪ್ರತಿಕ್ರಿಯೆ ಕೊಟ್ಟಿರುವ ಕೇಂದ್ರ ಸಚಿವ ಡಿ.ವಿ, ಸದಾನಂದಗೌಡ ಅವರು, ಚಿಕ್ಕಬಳ್ಳಾಪುರ ಸಮೀಪದ ಕಲ್ಲುಗಣಿ ಪ್ರದೇಶದಲ್ಲಿ ನಡೆದ ಜಿಲೆಟಿನ್ ಸ್ಫೋಟದಲ್ಲಿ ಆರುಜನ ಮೃತಪಟ್ಟಿರುವುದು ಆಘಾತ ಉಂಟುಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಮೃತರ ಕುಟುಂಬಸ್ಥರ ದುಃಖದಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ. ಕುಟುಂಬದವರಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಶಿವಮೊಗ್ಗ ಬಳಿ ನಡೆದ ಕಲ್ಲುಗಣಿ ದುರಂತದ ಬಿಸಿ ಆರುವ ಮುನ್ನವೇ ಮತ್ತೆ ಅಂತಹದೊಂದು ದುರ್ಘಟನೆ ನಡೆದಿರುವುದು ಕಳವಳಕಾರಿಯಾಗಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಅಕ್ರಮ ಎಸಗುವವರಿಗೆ ಕಠಿಣ ಸಂದೇಶ ರವಾನಿಸಬೇಕಿದ್ದು ರಾಜ್ಯ ಸರ್ಕಾರ ಈಗಾಗಲೇ ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಟ್ವೀಟ್ನನಲ್ಲಿ ಡಿವಿಎಸ್ ಭರವಸೆ ಕೊಟ್ಟಿದ್ದಾರೆ.