ಲಾಕ್ ಡೌನ್ ವೇಳೆ ರಾಸಾಯನಿಕ, ರಸಗೊಬ್ಬರ ಇಲಾಖೆಯ ಸಾಧನೆ ಇದು!
ನವದೆಹಲಿ, ಮೇ 8: ಔದ್ಯೋಗಿಕವಾಗಿ, ಆರ್ಥಿಕವಾಗಿ, ವೈದ್ಯಕೀಯ ಸೌಕರ್ಯಗಳ ದೃಷ್ಟಿಯಿಂದ ಭಾರತಕ್ಕಿಂತ ಬಹಳಷ್ಟು ಮುಂದುವರಿದಿರುವ ಹಾಗೂ ಜನಸಂಖ್ಯೆ ಕಡಿಮೆ ಇರುವ ಅಮೇರಿಕಾ, ಇಟಲಿ, ಫ್ರಾನ್ಸ್, ಜರ್ಮನಿ, ಸ್ಪೇನ್ ಮುಂತಾದ ದೇಶಗಳಲ್ಲಿ ಲಕ್ಷಾಂತರ ಜನ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಇOತಹ ಸಂದರ್ಭದಲ್ಲಿ ಭಾರತವು ಕಳೆದ 6 ವಾರಗಳಲ್ಲಿ ಕೊರೊನಾ ಸೋಂಕು ಹಾಗೂ ಲಾಕ್ ಡೌನ್ ಪರಿಣಾಮಗಳನ್ನು ನಿರ್ವಹಿಸಿದ ರೀತಿಗೆ ಇಡೀ ವಿಶ್ವವೇ ತಲೆದೂಗಿದೆ.
Recommended Video
ಕೊರೊನಾ ಸೋಂಕಿತರ ಸಂಖ್ಯೆಯನ್ನು ನಿರ್ವಹಿಸಬಹುದಾದ ಮಿತಿಯಲ್ಲಿ ಇಡುವಲ್ಲಿ ಲಾಕ್ ಡೌನ್ ಯಶಸ್ವಿಯಾಗಿದೆ. ಬಹುತೇಕ ಜನ ಲಾಕ್ ಡೌನ್ ನಿಯಮಗಳನ್ನು ಪಾಲಿಸಿ ಕೊರೊನಾ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ಹೋರಾಟದಲ್ಲಿ ಕೈಜೋಡಿಸಿದ್ದಾರೆ.
ಆರೋಗ್ಯ ಸೇತು ಹ್ಯಾಕ್, ಕೇಂದ್ರ ಸರ್ಕಾರ ನೀಡಿದ ಉತ್ತರವೇನು?
ದೇಶವು ಲಾಕ್ ಡೌನ್ ನ 3ನೇ ಹಂತವನ್ನು ಪ್ರವೇಶಿಸಿಯಾಗಿದೆ. ಮೊದಲೆರಡು ಹಂತದಲ್ಲಿ ಕೈಗೊಳ್ಳಲಾದ ಕ್ರಮಗಳ ಪರಾಮರ್ಶೆ ನಡೆದಿದೆ. ಗಮನಾರ್ಹ ಸಂಗತಿಯೆಂದರೆ ಬಹುತೇಕ ಇಲಾಖೆಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಕೇಂದ್ರ ನಾಯಕತ್ವದಿಂದ ಸೈ ಅನಿಸಿಕೊಂಡಿವೆ. ಹೀಗೆ 'ಕೊರೊನಾ ಪರೀಕ್ಷೆ'ಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣವಾದ ಇಲಾಖೆಗಳ ಪೈಕಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ನಿರ್ವಹಿಸುವ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆಯೂ ಒಂದು.
ಹೆಚ್ಚಿನ ಮಹತ್ವ
''ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ವಿಷಮ ಸ್ಥಿತಿ ಹಿನ್ನೆಲೆಯಲ್ಲಿ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆಗೆ ಸಹಜವಾಗಿಯೇ ಮಹತ್ವ ಹೆಚ್ಚಿದೆ. ಯಾಕೆಂದರೆ, ಜೀವರಕ್ಷಕ ಔಷಧ ಉತ್ಪಾದನೆ ಮತ್ತು ಸರಬರಾಜಿನ ಜವಾಬ್ಧಾರಿ ಇಲಾಖೆಯದ್ದೇ. ಕೊರೊನಾ ರೋಗಕ್ಕೆ ಸದ್ಯಕ್ಕೆ ಲಭ್ಯವಿರುವ ಸಂಜೀವಿನಿ ಅಂದರೆ ಹೈಡ್ರೋಕ್ಸಿಕ್ಲೋರೋಕ್ವಿನ್ (Hydroxychloroquine-HCQ), ಪೆರಾಸಿಟೊಮೊಲ್ (Paracetamol)ನಂತಹ ಮಾತ್ರೆಗಳೇ. ಇವುಗಳನ್ನು ಉತ್ಪಾದಿಸುವ ಜಗತ್ತಿನ ಪ್ರಮುಖ ರಾಷ್ಟ್ರ ಭಾರತ. ಹಾಗಾಗಿ ಅಮೆರಿಕ, ಬ್ರೆಜಿಲ್, ಇಂಗ್ಲೆಂಡ್, ಇಟಲಿ, ಫ್ರಾನ್ಸ್, ಜರ್ಮನಿ, ಸ್ಪೇನ್ ಮುಂತಾದ ದೇಶಗಳಿಂದ ಈ ಎರಡು ಔಷಧಗಳಿಗಾಗಿ ಭಾರಿ ಬೇಡಿಕೆಯಿತ್ತು. ಹಾಗೆಯೇ ದೇಶದ ಆಂತರಿಕ ಬೇಡಿಕೆಯನ್ನೂ ಆದ್ಯತೆ ಮೇರೆಗೆ ಪೂರೈಸಬೇಕಿತ್ತು. ಜೊತೆಗೇ ದೇಶಾದ್ಯಂತ ಇರುವ ಸುಮಾರು ಆರು ಸಾವಿರ ಜನೌಷಧ ಕೇಂದ್ರಗಳಿಗೆ ರಿಯಾಯಿತಿ ದರದಲ್ಲಿ ಔಷಧಗಳ ಪೂರೈಕೆ ನಿರಂತರವಾಗಿರುವಂತೆ ನೋಡಿಕೋಳ್ಳಬೇಕು. ಮತ್ತೆ, ರಸಗೊಬ್ಬರ - ಕೃಷಿ ಚಟುವಟಿಕೆಯ ಅವಿಭಾಜ್ಯ ಅಂಗ, ರೈತರ ಜೀವನಾಡಿ. ಹೀಗಾಗಿ ಎಲ್ಲರ ಗಮನ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆಯ ಕಡೆಯಿತ್ತು'' - ಕೇಂದ್ರ ಸಚಿವ ಸದಾನಂದ ಗೌಡ
ಮುಂಗಾರು ಬೆಳೆಯ ಮುನ್ಸೂಚನೆ
''ಕೊರೊನಾ ಸೋಂಕಿನ ಋಣಾತ್ಮಕ ಸುದ್ದಿಯನ್ನು ಕೇಳಿಕೇಳಿ ಬೇಸತ್ತಿರುವ ದೇಶದ ಜನ ಸಂಭ್ರಮಿಸುವ ವಿಚಾರವೊಂದಿದೆ. ಬಂಪರ್ ಮುಂಗಾರು ಬೆಳೆಯ ಮುನ್ಸೂಚನೆ ಸಿಕ್ಕಿದೆ. ರೈತರು ಮುಂಗಾರು ಬಿತ್ತನೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಕಳೆದ ಏಪ್ರಿಲ್ ತಿಂಗಳಲ್ಲಿ ರೈತರು ಖರೀದಿಸಿದ ರಸಗೊಬ್ಬರ ಪ್ರಮಾಣಲ್ಲಿ 2019ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಶೇಕಡಾ 49ರಷ್ಟು ಭಾರೀ ಏರಿಕೆ ಕಂಡುಬಂದಿರುವುದೇ ಇದಕ್ಕೆ ಸಾಕ್ಷಿ. ರೈತರು 2019ರ ಏಪ್ರಿಲ್ ತಿಂಗಳಲ್ಲಿ 11.93 ಲಕ್ಷ ಟನ್ ರಸಗೊಬ್ಬರ (ಯೂರಿಯಾ, ಡಿಎಪಿ ಹಾಗೂ ಕಾಂಪ್ಲೆಕ್ಸ್ ಸೇರಿ) ಖರೀದಿಸಿದ್ದರು. ಅದೇ ರೈತರು ಮೊನ್ನೆ ಮುಗಿದ ಏಪ್ರಿಲ್ನಲ್ಲಿ 17.82 ಲಕ್ಷ ಟನ್ ರಸಗೊಬ್ಬರ ಖರೀದಿಸಿದ್ದಾರೆ. ಇನ್ನು, ಉತ್ಪಾದಕರು (ಕಾರ್ಖಾನೆಗಳು) ಸಗಟು ಡೀಲರುಗಳಿಗೆ ಪೂರೈಸಿದ ರಸಗೊಬ್ಬರ ಪ್ರಮಾಣದಲ್ಲಿಯೂ ಶೇಕಡಾ 47ರಷ್ಟು ಹೆಚ್ಚಳವಾಗಿದೆ. ಕಾರ್ಖಾನೆಗಳು 2019ರ ಏಪ್ರಿಲ್ನಲ್ಲಿ ಡೀಲರುಗಳಿಗೆ 22.43 ಲಕ್ಷ ಟನ್ ರಸಗೊಬ್ಬರ ಪೂರೈಸಿದ್ದವು. ಅದು ಈ ಸಲ (2020 ಏಪ್ರಿಲ್) 32.9 ಲಕ್ಷ ಟನ್ ತಲುಪಿದೆ'' - ಕೇಂದ್ರ ಸಚಿವ ಸದಾನಂದ ಗೌಡ
"ಒಂದಲ್ಲ, ಎರಡಲ್ಲ ಏಳು ತಂಡಗಳಾಗಿ ಪೀಸ್ ಪೀಸ್ ಆಯ್ತಾ ಕಾಂಗ್ರೆಸ್?"
ದಾಖಲೆ ಮಟ್ಟದ ಸಬ್ಸಿಡಿ ಹಣ
''ಕಳೆದ ತಿಂಗಳು ಒಟ್ಟು 21,115.48 ಕೋಟಿ ರೂಪಾಯಿ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇದೊಂದು ದಾಖಲೆ. ಯಾಕೆಂದರೆ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಏಪ್ರಿಲ್ ತಿಂಗಳಲ್ಲಿ ಇಷ್ಟೊಂದು ಬೃಹತ್ ಮೊತ್ತದ ಸಬ್ಸಿಡಿ ಬಿಡುಗಡೆ ಮಾಡಲಾಯಿತು. ಇದರಿಂದ ಸಹಜವಾಗಿಯೇ ಉತ್ಪಾದನೆ ಮತ್ತು ಸರಬರಾಜು ಸೇರಿದಂತೆ ಈ ವಲಯದ ಒಟ್ಟಾರೆ ಆರ್ಥಿಕ ಚಟುವಟಿಕೆಗೆ ಉತ್ತೇಜನ ದೊರೆಯಿತು'' - ಕೇಂದ್ರ ಸಚಿವ ಸದಾನಂದ ಗೌಡ
ಔಷಧ ಉತ್ಪಾದನೆಯಲ್ಲಿ ಸಾಧನೆ
"ಲಾಕ್ಡೌನ್ ಅಡಚಣೆಯ ಮಧ್ಯೆಯೇ ನಾವು ಔಷಧ ಉತ್ಪಾದನೆಯಲ್ಲೂ ಗುರುತರ ಸಾಧನೆ ಮಾಡಿದ್ದೇವೆ. ಜಗತ್ತಿನ ಎಲ್ಲ ದೇಶಗಳಿಂದ ಬೇಡಿಕೆಯಲ್ಲಿರುವ ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆ ಉತ್ಪಾದನೆ ದ್ವಿಗುಣಗೊಳಿಸಲಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ 30 ಕೋಟಿ ಮಾತ್ರೆಗಳನ್ನು ಉತ್ಪಾದಿಸಿದ್ದೇವೆ. ಇದು ಮಾಮೂಲಿ ಉತ್ಪಾದನೆಗಿಂತ ಎರಡುಪಟ್ಟು ಜಾಸ್ತಿ. 15 ಕೋಟಿ ಮಾತ್ರೆಗಳನ್ನು ದೇಶದ ಆಂತರಿಕ ಉಪಯೋಗಕ್ಕೆ ಇಟ್ಟುಕೊಂಡು ಉಳಿದದ್ದನ್ನು (15 ಕೋಟಿ) ರಫ್ತು ಮಾಡಲು ಅವಕಾಶ ನೀಡಲಾಗಿದೆ. ಪೆರಾಸೆಟೊಮೊಲ್ ಮಾತ್ರೆ ಉತ್ಪಾದನೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ಅದೇ ರೀತಿ ಅಜಿತ್ರೋಮೈಸಿನ್ (Azithromycin) ಉತ್ಪಾದನೆಯನ್ನೂ ಹೆಚ್ಚಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ 500 mgಯ 15 ಕೋಟಿ ಅಜಿತ್ರೋಮೈಸಿನ್ ಮಾತ್ರೆ ಉತ್ಪಾದನೆಗೊಂಡಿದೆ" - ಕೇಂದ್ರ ಸಚಿವ ಸದಾನಂದ ಗೌಡ
ದಾಖಲೆಯ ವಹಿವಾಟು ನಡೆಸಿದ ಜನೌಷಧ ಕೇಂದ್ರ
"ಸದ್ಯ 745 ಮಾದರಿಯ ಔಷಧಗಳು ಹಾಗೂ 108 ನಮೂನೆಯ ಶಸ್ತ್ರಚಿಕಿತ್ಸಾ ಉಪಕರಣಗಳು ಜನೌಷಧಿ ಕೇಂದ್ರಗಳಲ್ಲಿ ಲಭ್ಯ ಇವೆ. ನಿಜ ಹೇಳಬೇಕೆಂದರೆ ನಮ್ಮ ಜನೌಷಧಿ ಕೇಂದ್ರಗಳು ಲಾಕ್ಡೌನ್ ಅವಧಿಯಲ್ಲಿ ದಾಖಲೆ ವಹಿವಾಟು ನಡೆಸಿವೆ. ಏಪ್ರಿಲ್ ತಿಂಗಳಲ್ಲಿ 52 ಕೋಟಿ ರೂಪಾಯಿ ಔಷಧ ಮಾರಾಟವಾಗಿದೆ. ಇದು ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಸುಮಾರು ಎರಡೂವರೆ ಪಟ್ಟು ಜಾಸ್ತಿ" - ಕೇಂದ್ರ ಸಚಿವ ಸದಾನಂದ ಗೌಡ
ಮೈಮರೆಯುವುದು ಬೇಡ
''ಈ ಜೈವಿಕ ಯುದ್ಧ ಇನ್ನೂ ಮುಗಿದಿಲ್ಲ. ನಾವ್ಯಾರೂ ಮೈಮರೆಯುವುದು ಬೇಡ. ಇನ್ನಷ್ಟು ಕಾಲ ಕಡ್ಡಾಯವಾಗಿ ಮುಖಗವಸು ಧರಿಸೋಣ. ಸೋಂಕು ನಿವಾರಕ ದ್ರಾವಣ ಬಳಸೋಣ. ನಾಲ್ಕುಜನ ಸೇರುವ ಸ್ಥಳಗಳಲ್ಲಿ ಕನಿಷ್ಠ ನಾಲ್ಕು ಅಡಿ ಭೌತಿಕ ಅಂತರವನ್ನು ಕಾಪಾಡಿಕೊಳ್ಳುವ ಸಂಕಲ್ಪ ಮಾಡೋಣ. ಜವಾಬ್ಧಾರಿಯುತ ನಾಗರಿಕರಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಗಾಗ ನೀಡುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ'' ಅಂತ ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.