ಜಸ್ಟಿಸ್ ರಾಮ ಜೋಯಿಸ್ ನಿಧನಕ್ಕೆ ಕೇಂದ್ರ ಸಚಿವ ಸದಾನಂದ ಗೌಡ ಕಂಬನಿ
ನವದೆಹಲಿ, ಫೆ. 16: ಪಂಜಾಬ್ ಮತ್ತು ಹರ್ಯಾಣ ಉಚ್ಛ ನ್ಯಾಯಾಲಯಗಳ ನಿವೃತ್ತ ಮುಖ್ಯ ನ್ಯಾ. ಎಂ ರಾಮ ಜೋಯಿಸ್ ಅವರ ನಿಧನಕ್ಕೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರು ಅತೀವ ದುಃಖ ವ್ಯಕ್ತಪಡಿಸಿದ್ದಾರೆ.
ಶ್ರೇಷ್ಠ ಕಾನೂನು ವಿದ್ವಾಂಸರಾಗಿದ್ದ ಅವರು ಸಂವಿಧಾನ ತಜ್ಞರಾಗಿದ್ದರು. ಭಾರತದ ವಿವಿಧ ಉಚ್ಛ ನ್ಯಾಯಾಲಯಗಳ ನ್ಯಾಯಾಧೀಶರಾಗಿ, ಮುಖ್ಯ ನ್ಯಾಯಾಧೀಶರಾಗಿ ಹಲವು ಐತಿಹಾಸಿಕ ತೀರ್ಪುಗಳನ್ನು ನೀಡಿದ ಗೌರವ ಅವರದ್ದಾಗಿದೆ ಎಂದು ಸಚಿವರು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
ನ್ಯಾ. ಜೋಯಿಸ್ ಅವರು ಪಕ್ಷದ ಮಾರ್ಗದರ್ಶಕರಾಗಿದ್ದರು. ರಾಜ್ಯಸಭೆ ಸದಸ್ಯರಾಗಿ ಅವರು ಮೇಲ್ಮನೆಯ ಗೌರವವನ್ನು ಇನ್ನಷ್ಟು ಹೆಚ್ಚಿಸಿದರು. ಪ್ರಾಚೀನ ಭಾರತದ ನ್ಯಾಯಿಕ ವ್ಯವಸ್ಥೆ ಬಗ್ಗೆಯೂ ಆಳವಾದ ಅಧ್ಯಯನ ಮಾಡಿದ್ದ ನ್ಯಾಯಮೂರ್ತಿ ಜೋಯಿಸ್ ಅವರು ಸದನದಲ್ಲಿ ಭಾರತೀಯ ಗ್ರಂಥಗಳಲ್ಲಿನ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿ ಅರ್ಥ ಹೇಳುತ್ತಿದ್ದರು.
ಜಾರ್ಖಂಡ್ ಹಾಗೂ ಬಿಹಾರದ ರಾಜ್ಯಪಾಲರಾಗಿಯೂ ಅವರು ತಮ್ಮ ಛಾಪು ಮೂಡಿಸಿದರು. ಸತತ ಅಧ್ಯಯನಶೀಲರಾಗಿದ್ದ ನ್ಯಾಯಮೂರ್ತಿ ಜೋಯಿಸರು 'ಧರ್ಮ ದಿ ಗ್ಲೋಬಲ್ ಎಥಿಕ್', 'ಲೀಗಲ್ & ಕಾನ್ಸ್ಟಿಟ್ಯೂಶನಲ್ ಹಿಸ್ಟರಿ ಆಫ್ ಇಂಡಿಯಾ', 'ಹಿಸ್ಟಾರಿಕಲ್ ಬ್ಯಾಟಲ್', 'ನೀಡ್ ಫಾರ್ ಅಮೆಂಡಿಂಗ್ ಕಾನ್ಸ್ಟಿಟ್ಯೂಶನಲ್', ಕೋಡ್ ಆಫ್ ಕಂಡಕ್ಟ್ ಫೊರ್ ರೂಲರ್ಸ್' ಮುಂತಾದ ಪುಸ್ತಕಗಳನ್ನು ಬರೆದಿದ್ದರು ಎಂದು ಸಚಿವರು ಹೇಳಿದರು.
ನ್ಯಾಯಮೂರ್ತಿ ಜೋಯಿಸ ಅರೊಂದಿಗಿನ ತಮ್ಮ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡ ಸದಾನಂದ ಗೌಡರು ತಾವು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದಾಗ ಅವರಿಂದ ಹಲವುಬಾರಿ ಕಾನೂನು ಸಲಹೆ ಪಡೆದಿರುವುದಾಗಿ ಹೇಳಿದರು.
ಅವರ ನಿಧನದಿಂದ ಸಮಾಜವು ನ್ಯಾಯ-ನೀತಿ ಪ್ರತಿಪಾದಕರೊಬ್ಬರನ್ನು ಕಳೆದುಕೊಂಡಿದೆ. ಭಗವಂತನು ಅವರಿಗೆ ಸದ್ಗತಿ ಉಂಟುಮಾಡಲಿ. ಕುಟುಂಬದವರಿಗೆ, ಅನುಯಾಯಿಗಳಿಗೆ ಅವರ ನಿಧನದಿಂದಾಗಿರುವ ದುಃಖವನ್ನು ಬರಿಸುವ ಶಕ್ತಿನೀಡಲಿ ಎಂದು ಪ್ರಾರ್ಥಿಸುವುದಾಗಿ ಸದಾನಂದ ಗೌಡ ಹೇಳಿದರು.