ದೂರದರ್ಶನದಲ್ಲಿ ಮತ್ತೆ ಮಹಾಭಾರತ, ರಾಮಾಯಣ ಪ್ರಸಾರ
ನವದಹೆಲಿ, ಮೇ 15: ದೇಶದೆಲ್ಲೆಡೆ ಈಗ ಬಾಹುಬಲಿ ಚಿತ್ರದ ಹವಾ ಇರುವುದರಿಂದ ಈಗ ಪೌರಾಣಿಕ ಪಾತ್ರಗಳು ಮತ್ತೆ ಮಾರುಕಟ್ಟೆಯ ಸರಕಾಗಿದೆಯೇ? ಇಂಥದ್ದೊಂದು ಪುಟ್ಟ ಸಂದೇಹ ಉದಯಿಸಲು ಕಾರಣವಾಗಿದ್ದು ದೂರದರ್ಶನ ನಿರ್ಧಾರ.
1990ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಮೆಗಾ ಹಿಟ್ ಧಾರಾವಾಹಿಗಳಾದ ರಾಮಾಯಣ ಹಾಗೂ ಮಹಾಭಾರತ ಧಾರಾವಾಹಿಗಳನ್ನು ದೂರದರ್ಶನವು ಮರುಪ್ರಸಾರ ಮಾಡಲು ನಿರ್ಧರಿಸಿದೆ.
ಇಂದಿನ ವಾಹಿನಿಗಳ ಭರಾಟೆಯ ನಡುವೆ ಕುಸಿಯುತ್ತಿರುವ ತನ್ನ ಟಿಆರ್ ಪಿಯನ್ನು ಭದ್ರಗೊಳಿಸಲು ದೂರದರ್ಶನ ಕೈಗೊಂಡಿರುವ ನಿರ್ಧಾರವಿದು. ಆದರೆ, ಎಲ್ಲೆಲ್ಲೂ ಬಾಹುಬಲಿ ಮೇನಿಯಾ ಇರುವ ಈ ಸನ್ನಿವೇಶದಲ್ಲಿ ತನ್ನೆರಡು ಹಳೆಯ ಪೌರಾಣಿಕ ಧಾರಾವಾಹಿಗಳ ಮರುಪ್ರಸಾರ ಕೈಗೊಂಡಿರುವ ನಿರ್ಧಾರವೂ ಬಾಹುಬಲಿಯ ಎಫೆಕ್ಟ್ ಎಂದೆನಿಸದಿರದು.
ಆದರೂ, ಮತ್ತೊಂದು ನಿಟ್ಟಿನಿಂದ ಅವಲೋಕಿಸಿದರೆ, ದೂರದರ್ಶನದ ಮಟ್ಟಿಗೆ ಈ ನಿರ್ಧಾರ ಹೊಸತೇನಲ್ಲ ಎಂದೆನಿಸದಿರದು. ಏಕೆಂದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ತನ್ನ ಇತರ ಮೆಗಾ ಹಿಟ್ ಧಾರಾವಾಹಿಗಳನ್ನು ಮತ್ತೆ ಪ್ರಸಾರ ಮಾಡುವ ಕೈಂಕರ್ಯಕ್ಕೆ ದೂರದರ್ಶನ ಕೈಹಾಕಿತ್ತು.
ಹಾಗಾಗಿ, 90ರ ದಶಕದಲ್ಲಿ ಮೂಡಿಬಂದ ದೂರದರ್ಶನದ ಜನಪ್ರಿಯ ಧಾರಾವಾಹಿಗಳಾದ ಮಾಲ್ಗುಡಿ ಡೇಸ್ (ಶಂಕರ್ ನಾಗ್ ನಿರ್ದೇಶನ), ವ್ಯೋಮ್ ಕೇಶ್ ಭಕ್ಷಿ, ಫ್ಲಾಪ್ ಶೋ ಮುಂತಾದ ಧಾರಾವಾಹಿಗಳನ್ನು ಮತ್ತೆ ಪ್ರಸಾರ ಮಾಡಿತ್ತು.