ಕೊವಿಡ್-19 ಲಸಿಕೆ ವ್ಯರ್ಥ ಮಾಡುವುದು ಅಪರಾಧ ಎಂದ ಹೈಕೋರ್ಟ್!
ನವದೆಹಲಿ, ಏಪ್ರಿಲ್ 21: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮಧ್ಯೆ ಲಸಿಕೆಯ ಒಂದೇ ಒಂದು ಡೋಸ್ ಅನ್ನು ವ್ಯರ್ಥ ಮಾಡುವುದು ಕೂಡಾ ಅಪರಾಧವಾಗುತ್ತದೆ ಎಂದು ನವದೆಹಲಿ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ವಿಭಾಗೀಯ ಪೀಠವು ಪ್ರತಿನಿತ್ಯ ಶೇ.6ರಷ್ಟು ಲಸಿಕೆಯು ವ್ಯರ್ಥವಾಗುತ್ತಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಆದೇಶ ನೀಡಿದೆ. ದೇಶದಲ್ಲಿ ಈವರೆಗೂ 10 ಕೋಟಿ ಡೋಸ್ ಲಸಿಕೆ ಪೈಕಿ 44 ಲಕ್ಷ ಡೋಸ್ ಕೊವಿಡ್-19 ಲಸಿಕೆಯು ವ್ಯರ್ಥವಾಗಿದೆ. ಈ ಪೈಕಿ ತಮಿಳುನಾಡಿನಲ್ಲಿ ಅತಿಹೆಚ್ಚು ಲಸಿಕೆ ವ್ಯರ್ಥವಾಗಿದೆ ಎಂದು ತಿಳಿದು ಬಂದಿದೆ.
ದೆಹಲಿಯಲ್ಲಿ ಆಮ್ಲಜನಕದ ಕೊರತೆ ತೀವ್ರವಾಗಿದೆ: ಅರವಿಂದ್ ಕೇಜ್ರಿವಾಲ್
"ಇಲ್ಲಿ ಅತಿಹೆಚ್ಚು ಲಸಿಕೆಯನ್ನು ವ್ಯರ್ಥ ಮಾಡಲಾಗುತ್ತಿದೆ. ಯಾರಿಗೆ ಅಗತ್ಯವಿದೆಯೋ ಅಂಥವರಿಗೆ ಅಗತ್ಯವಾಗಿ ಲಸಿಕೆ ನೀಡಿ. 16 ವರ್ಷವೇ ಆಗಲಿ, 60 ವರ್ಷವೇ ಆಗಿರಲಿ ಲಸಿಕೆ ಎಲ್ಲರಿಗೂ ಅಗತ್ಯವಿದೆ. ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಲಸಿಕೆ ನೀಡುವುದರಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ" ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಕೊರೊನಾವೈರಸ್ ಲಸಿಕೆ ವ್ಯರ್ಥಕ್ಕೆ ನಿರ್ಬಂಧ ಕಾರಣ:
ದೇಶದಲ್ಲಿ ನಿಗದಿತ ವಯಸ್ಸು ಮತ್ತು ವರ್ಗಕ್ಕೆ ಮಾತ್ರ ಕೊರೊನಾವೈರಸ್ ಲಸಿಕೆ ನೀಡಬೇಕು ಎಂಬ ನಿರ್ಬಂಧವನ್ನು ವಿಧಿಸಲಾಗಿದೆ. ಈ ನಿರ್ಬಂಧದಿಂದಾಗಿಯೇ ಲಸಿಕೆಯು ವ್ಯರ್ಥವಾಗುತ್ತಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇತ್ತೀಚಿಗಷ್ಟೇ ಕೇಂದ್ರ ಸರ್ಕಾರವು ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾವೈರಸ್ ಲಸಿಕೆ ನೀಡಲಾಗುವುದು ಎಂದು ಆದೇಶ ಹೊರಡಿಸಿದೆ. "ನಮ್ಮ ದೃಷ್ಟಿಯಲ್ಲಿ ಜೀವ ಉಳಿಸುವ ಲಸಿಕೆಯ ಒಂದೇ ಒಂದು ಡೋಸ್ ಅನ್ನು ವ್ಯರ್ಥ ಮಾಡುವುದು ಕೂಡಾ ಅಪರಾಧವಾಗುತ್ತದೆ" ಎಂದು ಕೋರ್ಟ್ ಹೇಳಿದೆ. ಪ್ರತಿ ದಿನ ಸಂಜೆ 5 ಗಂಟೆಯೊಳಗೆ ಅಗತ್ಯವಿರುವ ಎಲ್ಲರಿಗೂ ವಯಸ್ಸು ಮತ್ತು ವರ್ಗವನ್ನು ಆಧಾರವಾಗಿ ಇಟ್ಟುಕೊಳ್ಳದೇ ಲಸಿಕೆಯನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.