ಆಮ್ ಆದ್ಮಿ ಪಕ್ಷದ ಗ್ರಹಗತಿ ಯಾಕೋ ಸರಿಯಿದ್ದಂತಿಲ್ಲ
ನವದೆಹಲಿ, ಜೂ. 10 : ಆಮ್ ಆದ್ಮಿ ಪಕ್ಷದ ಗ್ರಹಗತಿ ಯಾಕೋ ಸರಿಯಿದ್ದಂತಿಲ್ಲ. ರಾಜ್ಯಪಾಲರೊಡನೆಯ ಗುದ್ದಾಟ ಒಂದೆಡೆಯಾದರೆ, ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿದ್ದಕ್ಕಾಗಿ ದೆಹಲಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಮಂಗಳವಾರ ಬಂಧನಕ್ಕೊಳಗಾಗಿದ್ದರು. ಮರುದಿನ ಮತ್ತೊಬ್ಬ ಆಪ್ ಎಂಎಲ್ಎ ಸೋಮನಾಥ್ ಭಾರತಿ ವಿವಾದಕ್ಕೀಡಾಗಿದ್ದಾರೆ.
ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ, ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸ್ವತಃ ಅವರ ಪತ್ನಿ ಲಿಪಿಕಾ ಭಾರತಿ ಅವರೇ ದೆಹಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಹಿಂದಿನ ಆಪ್ ಸರಕಾರದಲ್ಲಿ ಕಾನೂನು ಸಚಿವರಾಗಿದ್ದ ಸೋಮನಾಥ್ ಭಾರತಿ ಅವರಿಗೆ ಆಯೋಗ ಸಮನ್ಸ್ ಕಳಿಸಿದ್ದು, ಜೂನ್ 26ರೊಳಗೆ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಬೇಕೆಂದು ತಾಕೀತು ಮಾಡಿದೆ.
"2010ರಿಂದಲೇ ಸೋಮನಾಥ್ ಅವರು ತನ್ನ ಮೇಲೆ ದೈಹಿಕ ದೌರ್ಜನ್ಯ ಎಸಗುತ್ತ ಬಂದಿದ್ದಾರೆ. ನನಗೆ ವಿಚ್ಛೇದನ ಬೇಕು. ನಾನು ಮಕ್ಕಳೊಂದಿಗೆ ಬೇರೆಯಾಗಿ ಮತ್ತು ಅತ್ಯಂತ ಗೌರವದಿಂದ ಜೀವಿಸ ಬಯಸುತ್ತೇನೆ" ಎಂದು ಅವರು ದೆಹಲಿ ಮಹಿಳಾ ಆಯೋಗದ ಮುಂದೆ ಅಳಲು ತೋಡಿಕೊಂಡಿದ್ದಾರೆ. [ಸಚಿವ ಸ್ಥಾನ ತೊರೆದ ಜಿತೇಂದ್ರ ಸಿಂಗ್ ತೋಮರ್]
ಕೇರಳದಲ್ಲಿರುವ ಸೋಮನಾಥ್ ಭಾರತಿ ಅವರು ಇದಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ನನಗೆ ನಿಜವಾಗಲೂ ಆಘಾತವಾಗಿದೆ. ನಾನು ಇದನ್ನು ಎಂದೂ ನಿರೀಕ್ಷಿಸಿರಲಿಲ್ಲ. ಈ ಆರೋಪಗಳೆಲ್ಲ ಶುದ್ಧಾನುಶುದ್ಧ ಸುಳ್ಳು. ಇದರ ಹಿಂದೆ ಯಾರದೋ ಕೈವಾಡವಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮಾಳವೀಯ ನಗರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ, ಸುಪ್ರೀಂ ಕೋರ್ಟ್ ಅಡ್ವೊಕೇಟ್ ಆಗಿದ್ದ ಸೋಮನಾಥ್ (41) ಅವರು ಹಿಂದೆ ಕೂಡ ವಿವಾದದಲ್ಲಿ ಸಿಲುಕಿದ್ದರು. ಹಿಂದಿನ ಸರಕಾರವಿದ್ದಾಗ ಮಧ್ಯರಾತ್ರಿ ಆಫ್ರಿಕಾದ ಮಹಿಳೆಯರಿದ್ದ ವಾಸಸ್ಥಾನದ ಮೇಲೆ ದಾಳಿ ಮಾಡಿ ಟೀಕೆಗೊಳಗಾಗಿದ್ದರು. ಈ ಬಾರಿ ಸಂಪುಟಕ್ಕೆ ಅವರನ್ನು ಸೇರಿಸಿಕೊಂಡಿಲ್ಲ.
ಇದು ಅವರಿಬ್ಬರ ನಡುವಿನ ವೈಯಕ್ತಿಕ ವಿಚಾರ. ಇದರಲ್ಲಿ ನಾವು ತಲೆತೂರಿಸುವುದಿಲ್ಲ, ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ ಎಂದು ದೆಹಲಿಯ ಆಮ್ ಆದ್ಮಿ ಪಕ್ಷದ ವಕ್ತಾರರು ಹೇಳಿಕೆ ನೀಡಿದ್ದಾರೆ. ಈ ನಡುವೆ ಟ್ವಿಟ್ಟರಲ್ಲಿ ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ಹಿಂದೆ ಅಂಬಾನಿ ಮತ್ತು ಅದಾನಿ ಕಂಪನಿಯ ಕೈವಾಡವಿದೆ ಎಂದು ಕೆಲವರು ಹಾಸ್ಯ ಮಾಡಿದ್ದಾರೆ.