'ನಿರ್ಭಯಾ 13 ದಿನ ಬದುಕುಳಿದಿದ್ದೇ ದೊಡ್ಡ ಪವಾಡ'!
ನವದೆಹಲಿ, ಮೇ 05 : "ಆ ದುರುಳರು ಜ್ಯೋತಿ ಸಿಂಗ್ (ನಿರ್ಭಯಾ)ಳ ಹೊಟ್ಟೆಯನ್ನು ಯಾವ ಪರಿ ಬಗೆದು ಹಾಕಿದ್ದರೆಂದರೆ, ಅವಳನ್ನು ನೋಡುತ್ತಿದ್ದಂತೆಯೇ ಈಕೆ ಬದುಕುಳಿಯುವುದು ಖಂಡಿತ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೆವು."
ಹೀಗೆಂದು ಹೇಳಿದವರು, 2012ರ ಡಿಸೆಂಬರ್ 16ರಂದು ಭೀಕರವಾಗಿ ಅತ್ಯಾಚಾರಕ್ಕೊಳಗಾಗಿ ಬೆತ್ತಲೆಯಾಗಿ ಬಿಸಾಕಲಾಗಿದ್ದ, 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಜ್ಯೋತಿ ಸಿಂಗ್ ಳಿಗೆ ಚಿಕಿತ್ಸೆ ನೀಡಿದ, ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯ ಡಾ. ಸುನೀಲ್ ಜೈನ್ ಅವರು ಬಣ್ಣಿಸಿರುವ ಪರಿ.[ನಿರ್ಭಯಾ ಪ್ರಕರಣ ನಡೆದು ಬಂದ ಹಾದಿ]
ನನ್ನ 40 ವರ್ಷಗಳ ವೃತ್ತಿ ಜೀವನದಲ್ಲಿ ಇಂಥ ಹೀನಾತಿ ಹೀನ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ನೋಡಿರಲಿಲ್ಲ. ನಿರ್ಭಯಾಳಿದಾಗ ಗಾಯ ಚಿಕಿತ್ಸೆಯನ್ನು ಮೀರಿದ್ದಾಗಿತ್ತು. ಆಕೆಯ ಖಾಸಗಿ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು ಮತ್ತು ಕರುಳನ್ನು ಕಿತ್ತು ಹಾಕಲಾಗಿತ್ತು ಎಂದು ಅವರು ಆಂಗ್ಲ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ಡಿಸೆಂಬರ್ 16, ಭಾನುವಾರದ ಮಧ್ಯರಾತ್ರಿ ಎಮರ್ಜೆನ್ಸಿ ಕೇಸ್ ಅಟೆಂಡ್ ಮಾಡಲೆಂದು ಬಂದಿದ್ದ ನನಗೆ ಜ್ಯೋತಿ ಸಿಂಗ್ ಸ್ಥಿತಿ ನೋಡಿ ತೀವ್ರ ಆಘಾತವಾಗಿತ್ತು. ಮೊದಲ ದಿನವೇ ನಮಗೆ ಮನದಟ್ಟಾಗಿತ್ತು. ಈಕೆ ಬದುಕುವುದು ಸಾಧ್ಯವೇ ಇಲ್ಲ ಎಂದು. ಆದರೂ ಆಕೆ 13 ದಿನಗಳ ಕಾಲ ಹೋರಾಡಿದ ಗಟ್ಟಿಗಿತ್ತಿ ಎಂದು ಅವರು ತಿಳಿಸಿದ್ದಾರೆ.[ಈ ಮೃಗಗಳು ಮಾಡಿದ್ದು ಕ್ಷಮಿಸಲು ಅರ್ಹವಲ್ಲದ ಅಪರಾಧ, ಬದುಕಲು ಅರ್ಹರಲ್ಲ!]
ನಿರ್ಭಯಾಳನ್ನು ಉಳಿಸಲು ನುರಿತ ವೈದ್ಯರ ತಂಡಕ್ಕೆ ಇದ್ದಿದ್ದು ಒಂದೇ ದಾರಿ. ಅದು ಕರುಳನ್ನು ಕಸಿ ಮಾಡುವುದು. ಆದರೆ, ಇಡೀ ಜಗತ್ತಿನಲ್ಲಿ ಇಂಥ ಯಾವುದೇ ಕಸಿ ನಡೆದ ದಾಖಲೆಗಳಿರಲಿಲ್ಲ. ಇಂಥ ಟ್ರಾನ್ಸ್ಪ್ಲಾಂಟ್ ನಡೆದಿರುವುದು ಯಾರಿಗೂ ಗೊತ್ತಿರಲಿಲ್ಲ, ಪುಸ್ತಕದಲ್ಲಿಯೂ ಉಲ್ಲೇಖವಾಗಿರಲಿಲ್ಲ ಎಂದಿದ್ದಾರೆ ಜೈನ್.
ಆಕೆ 13 ದಿನ ಬದುಕಿದ್ದೇ ಪವಾಡ. ನಿರ್ಭಯಾ ದೇಹದ ಇತರ ಅವಯವಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದವು. ಆಕೆಯ ಮಾನಸಿಕವಾಗಿ ಕೂಡ ಸದೃಢಳಾಗಿದ್ದಳು. ತಾನು ಬದುಕುಳಿಯುವುದಿಲ್ಲ ಎಂದು ಆಕೆಗೂ ತಿಳಿದಿತ್ತು. ಆದರೂ, ತಾನು ಬದುಕುಳಿದರೆ ತನ್ನ ಕೋರ್ಸ್ ಪೂರ್ತಿ ಮಾಡುವುದಾಗಿ ಹೇಳುತ್ತಿದ್ದಳು ಎಂದಿದ್ದಾರೆ.[ಜ್ಯೋತಿ ಅತ್ಯಾಚಾರಿಗಳನ್ನು ನೇಣಿಗೆ ಹಾಕಿ: ಟ್ವಿಟ್ಟಿಗರ ಆಜ್ಞೆ]
ಅತ್ಯಾಚಾರ ನಡೆದು 10 ದಿನಗಳ ನಂತರ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿಕೊಂಡೇ ಡಿಸೆಂಬರ್ 16ರ ರಾತ್ರಿ ನಡೆದಿದ್ದೇನೆಂದು ಸವಿವರವಾಗಿ ನಿರ್ಭಯಾ ಮ್ಯಾಜಿಸ್ಟ್ರೇಟ್ ರಿಗೆ ತಿಳಿಸಿದ್ದಳು. ಎಂಥ ಪ್ರಕರಣವಿದ್ದರೂ ವೈದ್ಯರು ಭಾವುಕರಾಗುವುದಿಲ್ಲ. ಆದರೆ, ನಿರ್ಭಯಾಳ ಸ್ಥಿತಿ ನೋಡಿ ಇಡೀ ವೈದ್ಯರ ತಂಡ ಭಾವುಕವಾಗಿತ್ತು.
ಅಂದು ನಡೆದಿದ್ದೇನು? : ಜ್ಯೋತಿ ಸಿಂಗ್ ತನ್ನ ಸ್ನೇಹಿತ ಅವಿಂದ್ರ ಪ್ರತಾಪ್ ಸಿಂಗ್ ಜೊತೆ 'ಲೈಫ್ ಆಫ್ ಪೈ' ಸಿನೆಮಾ ನೋಡಿ 9.30ರ ಸುಮಾರಿಗೆ ಮನೆಗೆ ಮರಳುತ್ತಿದ್ದರು. ಅವರು ಕೇವಲ 6 ಜನರಿದ್ದ ಖಾಸಗಿ ಬಸ್ಸೊಂದನ್ನು ಏರಿದರು. ಬಸ್ಸು ಸೇರಬೇಕಾದ ತಾಣದ ಬದಲು ಬೇರೆ ದಿಕ್ಕಿನೆಡೆಗೆ ಸಾಗಲು ಶುರುಮಾಡಿತು.[ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದ ಸುಪ್ರೀಂ ಕೋರ್ಟ್]
ಇದನ್ನು ಆಕ್ಷೇಪಿಸಿದ ಅವಿಂದ್ರನ ಮೇಲೆ ಕಬ್ಬಿಣದ ರಾಡ್ ತೆಗೆದುಕೊಂಡು ಹಲ್ಲೆ ಮಾಡಿದ್ದಾರೆ. ನಂತರ ಜ್ಯೋತಿ ಸಿಂಗ್ ಳನ್ನು ಬಸ್ಸಿನ ಹಿಂದಿನ ಭಾಗಕ್ಕೆ ಎಳೆದುತಂದು ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರ ಎಸಗುವಾಗ ಮೂವರಿಗೆ ಜ್ಯೋತಿ ಕಚ್ಚಿದ್ದಳು. ಇದರಿಂದ ರೊಚ್ಚಿಗೆದ್ದ ದುರುಳರು ಆಕೆಯ ಖಾಸಗಿ ಭಾಗದಿಂದ ಕಬ್ಬಿಣದ ಸಲಾಕೆಯನ್ನು ಹಾಕಿ ಹೊಟ್ಟೆಯನ್ನು ಬಗೆದುಬಿಟ್ಟಿದ್ದರು.
ನಂತರ ಬೆತ್ತಲಾಗಿದ್ದ ಜ್ಯೋತಿ ಮತ್ತು ಅರೆಪ್ರಜ್ಞಾವಸ್ಥೆಯಲ್ಲಿದ್ದ ಅವಿಂದ್ರ ಪ್ರತಾಪ್ ಸಿಂಗ್ ನನ್ನು ಚಲಿಸುತ್ತಿರುವ ಬಸ್ಸಿನಿಂದ ರಸ್ತೆಯ ಮೇಲೆ ಬಿಸಾಕಿ ಪರಾರಿಯಾಗಿದ್ದರು. ಅವರಿಬ್ಬರನ್ನು ದಾರಿಹೋಕರು ಪೊಲೀಸರ ಸಹಾಯದಿಂದ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ನಿರ್ಭಯಾಳನ್ನು ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ 29ನೇ ಡಿಸೆಂಬರ್ ರಂದು ಕೊನೆಯುಸಿರೆಳೆದಳು.