ಹಿಂದಿ ಗೊತ್ತಿಲ್ಲದವರು ಹೊರ ಹೋಗಿ ಹೇಳಿಕೆ ವಿವಾದ: ಆಯುಷ್ ಕಾರ್ಯದರ್ಶಿ ಅಮಾನತಿಗೆ ಸಂಸದೆ ಕನಿಮೋಳಿ ಆಗ್ರಹ
ನವದೆಹಲಿ, ಆಗಸ್ಟ್ 22: ಹಿಂದಿ ಭಾಷೆ ಗೊತ್ತಿಲ್ಲದವರು ಸಚಿವಾಲಯದ ತರಬೇತಿ ಕೇಂದ್ರದಿಂದ ಹೊರ ಹೋಗಬಹುದು ಎಂದಿದ್ದ ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಅವರ ಹೇಳಿಕೆಗೆ ಆಕ್ರೋಶ ಹೆಚ್ಚಾಗಿದ್ದು, ಅವರನ್ನು ಶೀಘ್ರದಲ್ಲೇ ಅಮಾನತುಗೊಳಿಸಬೇಕು ಎಂದು ಡಿಎಂಕೆ ಸಂಸದೆ ಕನಿಮೋಳಿ ಆಗ್ರಹಿಸಿದ್ದಾರೆ.
ಸರಣಿ ಟ್ವೀಟ್ ಮೂಲಕ ಕೆಂಡಕಾರಿರುವ ಸಂಸದೆ ಕನಿಮೋಳಿ 'ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾರವರು ಹಿಂದಿ ಭಾಷೆ ತಿಳಿಯದವರು ಸಚಿವಾಲಯದ ತರಬೇತಿ ಕಾರ್ಯಕ್ರಮದಿಂದ ಹೊರ ಹೋಗಬಹುದೆಂದು ಹೇಳಿದ್ದಾರೆ. ಇದು ಹಿಂದಿ ಭಾಷೆ ಹೇರಿಕೆಯಾಗುತ್ತಿರುವುದನ್ನು ಸ್ಪಷ್ಟಗೊಳಿಸುತ್ತದೆ. ಇಂತಹ ವರ್ತನೆ ಸಹಿಸಲು ಅಸಾಧ್ಯ. ಕಾರ್ಯದರ್ಶಿಯನ್ನು ಸರ್ಕಾರ ಅಮಾನತುಗೊಳಿಸಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದಿದ್ದಾರೆ.
ಲೋಕಸಭಾ ಸಂಸದ ಕಾರ್ತಿ ಚಿದಂಬರಂ ಅವರು ಕನಿಮೋಳಿಯವರ ಹೇಳಿಕೆಯನ್ನು ಅನುಸರಿಸಿ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಿಂದಿಯಲ್ಲಿ ಮಾತನಾಡಲು ಒತ್ತಾಯಿಸುವುದು 'ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ' ಎಂದು ಹೇಳಿದರು.
ವಾಸ್ತವವಾಗಿ, ಆಗಸ್ಟ್ 18 ಮತ್ತು ಆಗಸ್ಟ್ 20 ರ ನಡುವೆ, ಆಯುಷ್ ಮತ್ತು ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗದ ಮಾಸ್ಟರ್ ಟ್ರೈನರ್ಸ್ ಫಾರ್ ಯೋಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮಿಳುನಾಡಿನ 33 ಸರ್ಕಾರಿ ವೈದ್ಯರು ಭಾಗವಹಿಸಿದ್ದರು. ಒಟ್ಟು 300 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಆಯುಷ್ ಕಾರ್ಯದರ್ಶಿ ಹಿಂದಿಯಲ್ಲಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು ಎಂದು ವೈದ್ಯರೊಬ್ಬರು ಹೇಳಿದರು.
'ಕಳೆದ ಎರಡು ದಿನಗಳಲ್ಲಿ ಈ ಕಾರ್ಯಕ್ರಮಕ್ಕೆ ಹಾಜರಾಗಲು ಸಮಯ ನೀಡಿದವರನ್ನು ನಾನು ಅಭಿನಂದಿಸುತ್ತೇನೆ. ಕಳೆದ 2 ದಿನಗಳಲ್ಲಿ ಈವೆಂಟ್ನ ಭಾಷೆಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿವೆ ಎಂದು ನನಗೆ ಮಾಹಿತಿ ಬಂದಿದೆ. ನನಗೂ ಇಂಗ್ಲಿಷ್ ಸಂಪೂರ್ಣವಾಗಿ ತಿಳಿದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಆ ಜನರು ಇಲ್ಲಿಂದ ಹೋಗಬಹುದು, ಏಕೆಂದರೆ ನಾನು ಇಲ್ಲಿ ಹಿಂದಿಯಲ್ಲಿ ಮಾತ್ರ ಮಾತನಾಡುತ್ತೇನೆ' ಎಂದಿದ್ದರು.