ರಾಹುಲ್ ಗಾಂಧಿ ಭೇಟಿ ವೇಳೆ ಅರೆಸ್ಟ್: ದೆಹಲಿ ಠಾಣೆಯಲ್ಲೇ ಡಿಕೆ ಸುರೇಶ್ ರಕ್ತದಾನ
ನರೇಲಾ ಜೂನ್ 14: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ಜಾರಿ ನಿರ್ದೇಶನಾಲಯ ಕಚೇರಿಗೆ ರಾಹುಲ್ ಗಾಂಧಿ ಇಂದು ಭೇಟಿ ನೀಡಿದ್ದಾರೆ. ರಾಹುಲ್ ಬೆಂಬಲಕ್ಕೆ ನಿಲ್ಲಲು ತೆರಳುತ್ತಿದ್ದ ಕರ್ನಾಟಕದ ಸಂಸದ ಡಿಕೆ ಸುರೇಶರನ್ನು ದೆಹಲಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ/ ದೆಹಲಿಯ ನರೇಲಾ ಪೊಲೀಸ್ ಠಾಣೆಯ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಠಾಣೆಯಲ್ಲಿ ಪೊಲೀಸರು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದರು.
ದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ ಸಮನ್ಸ್ ಜಾರಿ ಹಿನ್ನೆಲೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಸೋಮವಾರ (ಜೂನ್ 13)ವೂ ರಾಹುಲ್ ಗಾಂಧಿ ಅವರ ವಿಚಾರಣೆಯನ್ನು ಇಡಿ ಮಾಡಿದೆ. ಈ ವೇಳೆ ಬೆಳಗ್ಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಕಚೇರಿಯಿಂದ ಇಡಿ ಕಚೇರಿವರೆಗೂ ಕಾಲ್ನಡಿಗೆ ಶುರು ಮಾಡಿದ್ದರು. ಸ್ವಲ್ಪ ದೂರ ತೆರಳುತ್ತಿದ್ದಂತೆ ಕಾರ್ಯಕರ್ತರು ಮೈ ಮೇಲೆ ನುಗ್ಗಿ ಬರುವುದಕ್ಕೆ ಶುರುವಾದ ಹಿನ್ನೆಲೆ ಕಾರು ಏರಿ ಇಡಿ ಕಚೇರಿಗೆ ತಲುಪಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ರಾಹುಲ್ ಗಾಂಧಿಯನ್ನು ಬರೋಬ್ಬರಿ 9 ಗಂಟೆಗಳ ಕಾಲ ತೀವ್ರ ವಿಚಾರಣೆಗೊಳಪಡಿಸಲಾಯಿತು. ಇಂದು ಮತ್ತೆ ರಾಹುಲ್ ಗಾಂಧಿ ಅವರ ವಿಚಾರಣೆ ನಡೆಯುತ್ತಿದೆ.
ಕಾಂಗ್ರೆಸ್ ಪ್ರತಿಭಟನೆ: ಚಿದಂಬರಂ ಪಕ್ಕೆಲುಬು ಮುರಿತ, ಇತರ ನಾಯಕರಿಗೆ ಗಾಯ- 459 ಬಂಧನ
ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನವದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಲು ಹೊರಟ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿಕೆ ಸುರೇಶ್, ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್ ಹಾಗೂ ತಮಿಳುನಾಡಿನ ಸಂಸದರನ್ನು ದೆಹಲಿಯ ನರೇಲಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು.
#WorldBloodDonorDay
— Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳 (@AshwiniMS_TNIE) June 14, 2022
Bengaluru Rural MP DK Suresh who was detained by police and taken to Narela police station in Delhi when he went to meet Rahul Gandhi, donated his blood at the blood donation camp organised by police inside station @santwana99 @NewIndianXpress pic.twitter.com/0rcSsGfWg9
ಕಾಂಗ್ರೆಸ್ ಕಚೇರಿಗೆ ಹೊರಟ ಈ ನಾಯಕರನ್ನು ಪೊಲೀಸರು ತಡೆದು ನಿಲ್ಲಿಸಿದರು. ಈ ವೇಳೆ ವಾಗ್ವಾದ ನಡೆಯಿತು. ಹಾಗೂ ಪೊಲೀಸರ ಧೋರಣೆಯಿಂದಯನ್ನು ಸುರೇಶ್ ಪ್ರಶ್ನಿಸಿದರು. ಪೊಲೀಸರೊಬ್ಬರು ಸುರೇಶ್ ಅವರನ್ನು ಹಿಂಬದಿಯಿಂದ ತಳ್ಳಿದರು. ಬಳಿಕ ಬಸ್ಸಿನಲ್ಲಿ ಅವರನ್ನು ಕರೆದುಕೊಂಡು ಹೋದರು.
''ಬಿಜೆಪಿ ಸರ್ಕಾರದ ವಿರುದ್ಧ ಹೋರಾಟವು ಮತ್ತೊಮ್ಮೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ದದ ಹೋರಾಟವನ್ನು ನೆನಪಿಸುತ್ತಿದೆ. ಹೋರಾಡುತ್ತೇವೆ, ದೇಶವನ್ನು ಫ್ಯಾಸಿಸ್ಟ್ ಶಕ್ತಿಗಳಿಂದ ಮುಕ್ತಗೊಳಿಸುತ್ತೇವೆ, ಆ ಬದ್ಧತೆ ನಮಗಿದೆ. ಜನಪ್ರತಿನಿಧಿಗಳೊಂದಿಗೆ ಪೊಲೀಸರ ಈ ನಡವಳಿಕೆ ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಏನಿದು ಪ್ರಕರಣ?
ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ವೈಐಎಲ್ 90.25 ಕೋಟಿ ರೂಪಾಯಿ ಬಡ್ಡಿರಹಿತ ಸಾಲವನ್ನು ನೀಡಿತ್ತು. ಇದರಲ್ಲಿ ಎಐಸಿಸಿ ಖಜಾನೆಯಿಂದ ಐವತ್ತು ಲಕ್ಷ ರೂಪಾಯಿ ನೇರವಾಗಿ ವರ್ಗಾವಣೆಯಾಗಿತ್ತು ಎಂಬ ಆರೋಪವಿದೆ. ಅಲ್ಲದೇ, ಹೆರಾಲ್ಡ್ ಒಡೆತನದಲ್ಲಿದ್ದ 'ಹೆರಾಲ್ಡ್ ಹೌಸ್' ನವೀಕರಣಕ್ಕೆ ಒಂದು ಕೋಟಿ ರೂಪಾಯಿ ನೀಡಿತ್ತು ಎಂದು ಹೇಳಲಾಗುತ್ತಿದೆ.