ಜೈಲಿನಿಂದ ಬಿಡುಗಡೆಯಾದ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದೇನು?
Recommended Video
ನವದೆಹಲಿ, ಅಕ್ಟೋಬರ್ 23: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೊನೆಗೂ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಮಾಜಿ ಸಚಿವ ಡಿಕೆ ಶಿವಕುಮಾರ್, ಬುಧವಾರ ರಾತ್ರಿ 9 ಗಂಟೆ ಬಳಿಕ ತಿಹಾರ್ ಜೈಲಿನಿಂದ ಹೊರಬಂದಿದ್ದಾರೆ.
ಡಿಕೆಶಿಗೆ ದೀಪಾವಳಿ ಅಂದ್ರೆ ಅದೃಷ್ಟ! ಕಳೆದ ಬಾರಿ ಬಳ್ಳಾರಿ, ಈ ಬಾರಿ ಜಾಮೀನು!
ದೆಹಲಿ ಹೈಕೋರ್ಟ್ ನೀಡಿದ ಆದೇಶದ ಪ್ರತಿ ತಿಹಾರ್ ಜೈಲಿನ ಅಧಿಕಾರಿಗಳಿಗೆ ತಲುಪಿದ ಬಳಿಕ ದಾಖಲೆಗಳನ್ನು ಪರಿಶೀಲನೆ ನಡೆಸಿ ಉಳಿದ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ತಿಹಾರ್ ಜೈಲಿನ ಹೊರಗೆ ಗಂಟೆಗಟ್ಟಲೆ ಕಾದು ನಿಂತಿದ್ದ ಅವರ ಸಹೋದರ, ಸಂಸದ ಡಿಕೆ ಸುರೇಶ್ ಅವರನ್ನು ಬರಮಾಡಿಕೊಂಡರು. ಮಧ್ಯಾಹ್ನದ ವೇಳೆಯೇ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದರೂ, ಅದರ ಆದೇಶ ಪ್ರತಿ ತಿಹಾರ್ ಜೈಲಿಗೆ ತಲುಪಿ, ಜೈಲಿನ ಅಧಿಕಾರಿಗಳು ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ವಿಳಂಬವಾಯಿತು.
ಡಿಕೆ ಶಿವಕುಮಾರ್ ಅವರು ಹೊರಬರುತ್ತಿದ್ದಂತೆಯೇ ತಿಹಾರ್ ಜೈಲಿನ ಹೊರಭಾಗದಲ್ಲಿ ನೆರೆದಿದ್ದ ಅವರ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತು. ರಾಜ್ಯದ ವಿವಿಧೆಡೆ ಕೂಡ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.
ಶಿವ ದೇವಾಲಯದಲ್ಲಿ ಪೂಜೆ
ಜೈಲಿನಿಂದ ಬಿಡುಗಡೆಯಾದ ಬಳಿಕ ಕೆಲ ಸಮಯ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಬಳಿಕ ಮಾಲ್ಛಾ ಮಾರ್ಗ್ನಲ್ಲಿರುವ ಕರ್ನಾಟಕ ಭವನ ಸಮೀಪದ ಶಿವ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ನನಗಾಗಿ ಜನರು ಮಾಡಿದ ಪ್ರಾರ್ಥನೆ ಫಲಿಸಿದೆ. ನಾಳೆ ವಕೀಲರನ್ನು ಭೇಟಿ ಮಾಡಬೇಕಿದೆ. ಅವರ ಜತೆ ಮುಂದಿನ ಕ್ರಮಗಳ ಕುರಿತು ಚರ್ಚಿಸಿದ ನಂತರ ಮುಂದಿನ ವಿಚಾರ ಮಾತನಾಡುತ್ತೇನೆ ಎಂದು ತಿಳಿಸಿದರು.
ಡಿಕೆಶಿಗೆ ಸಿಕ್ಕಿದ್ದು ಜಾಮೀನಷ್ಟೇ, ಕ್ರಿಮಿನಲ್ ಕೇಸುಗಳು ಇನ್ನೂ ವಿಚಾರಣೆಯಲ್ಲಿವೆ!
ಹೋರಾಟ ಮಾಡಿದವರಿಗೆಲ್ಲ ಧನ್ಯವಾದ
ನನಗೋಸ್ಕರ ಪೂಜೆ ಮಾಡಿ, ರಸ್ತೆಗೆ ಇಳಿದು ಹೋರಾಟ ಮಾಡಿದವರಿಗೆ ಧನ್ಯವಾದ. ನನ್ನ ಪರ ಹೋರಾಟ ನಡೆಸಿದ್ದಾರೆ, ನನಗಾಗಿ ಅತ್ತಿದ್ದಾರೆ, ನಾನು ಜೈಲು ಸೇರಿದ್ದಕ್ಕೆ ಕೆಲವು ನೊಂದು ಬೆಂದಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು, ಬಂಧುಗಳು, ಧುರೀಣರು, ವಿರೋಧ ಪಕ್ಷದ ಮುಖಂಡರು, ಬೆಂಗಳೂರು ಮತ್ತು ದೆಹಲಿಯಲ್ಲಿ ವಾದ ಮಂಡಿಸಿದ ವಕೀಲರು, ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಖುಷಿಪಟ್ಟವರಿಗೂ ಅಭಿನಂದನೆಗಳು ಎಂದು ಹೇಳಿದರು.
ಅಭಿಮಾನಿಗಳಿಂದ ಸಂಭ್ರಮಾಚರಣೆ
ಡಿಕೆ ಶಿವಕುಮಾರ್ ಅವರ ಇಷ್ಟ ದೈವ ಶೃಂಗೇರಿಯ ಕಿಗ್ಗಾದ ಋಷ್ಯಶೃಂಗೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿದರು. ದೆಹಲಿ ಹೈಕೋರ್ಟ್ ಮಧ್ಯಾಹ್ನ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸುತ್ತಿದ್ದಂತೆಯೇ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ಅವರು ಬಿಡುಗಡೆಯಾಗುತ್ತಿದ್ದಂತೆಯೇ ಸಂಭ್ರಮಾಚರಣೆ ಜೋರಾಯಿತು.
ಡಿಕೆ ಶಿವಕುಮಾರ್ ಬೆಂಬಿಡದ ಇ.ಡಿ: ಸುಪ್ರೀಂಕೋರ್ಟ್ಗೆ ಮೇಲ್ಮನವಿ
50 ದಿನಗಳವರೆಗೆ ಜೈಲುವಾಸ
ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ಗಣೇಶ ಹಬ್ಬದ ಸಮಯದಲ್ಲಿ ಆ.29ರಂದು ವಿಚಾರಣೆಗೆ ತೆರಳಿದ್ದ ಡಿಕೆ ಶಿವಕುಮಾರ್ ಅವರನ್ನು ಸತತ ನಾಲ್ಕು ದಿನದ ವಿಚಾರಣೆ ಬಳಿಕ ಸೆ. 3ರಂದು ಬಂಧಿಸಲಾಗಿತ್ತು. ವಿಶೇಷ ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ದೊರಕದ ಕಾರಣ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲಿಯೂ ಅವರಿಗೆ ಆರಂಭದಲ್ಲಿ ಜಾಮೀನು ಸಿಕ್ಕಿರಲಿಲ್ಲ. 50 ದಿನಗಳನ್ನು ಜೈಲಿನಲ್ಲಿ ಕಳೆದ ಬಳಿಕ ಅವರಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ.