ಡಿ.ಕೆ.ಶಿವಕುಮಾರ್ ದೆಹಲಿಗೆ: ಹೈಕಮಾಂಡ್ ಗೆ ಷರತ್ತುಗಳು
ನವದೆಹಲಿ, ಜನವರಿ 24: ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಚರ್ಚೆ ನಡೆಸಲು ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಮಧ್ಯಪ್ರದೇಶದಲ್ಲಿ ಡಿ.ಕೆ.ಶಿವಕುಮಾರ್, ಅಲ್ಲಿಂದಲೇ ದೆಹಲಿಗೆ ವಿಮಾನ ಏರಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಡಿ.ಕೆ.ಶಿವಕುಮಾರ್ ಮೊದಲಿಗರಾಗಿದ್ದಾರೆ. ಸಿದ್ದರಾಮಯ್ಯ ಬಣ ಸಹ ಮತ್ತೊಂದು ತುದಿಯಿಂದ ತೀವ್ರ ಪೈಪೋಟಿ ನಡೆಸುತ್ತಿದೆ.
ಅಧ್ಯಕ್ಷ ಹುದ್ದೆಗೆ ನೇಮಕ: ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದರೇ ಮೂಲ ಕಾಂಗ್ರೆಸ್ಸಿಗರು?
ಮಧ್ಯಪ್ರದೇಶದಲ್ಲಿದ್ದ ಡಿ.ಕೆ.ಶಿವಕುಮಾರ್ ಅಲ್ಲಿಂದಲೇ ದೆಹಲಿಗೆ ವಿಮಾನ ಏರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸೇರಿ ಇನ್ನೂ ಕೆಲವು ನಾಯಕರುಗಳು ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಯಲ್ಲಿ ಜೊತೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಜೊತೆಗೆ ಖರ್ಗೆ ಇಂದು ಅರ್ಧ ಗಂಟೆಗೂ ಹೆಚ್ಚು ಮಾತುಕತೆ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರೂ ಸಹ ಇದೇ ವಿಷಯವಾಗಿ ಹೈಕಮಾಂಡ್ ನಾಯಕರ ಬಳಿ ಮಾತನಾಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ಕೊಡುವುದಾದರೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸಬೇಕು ಎಂಬುದು ಸಿದ್ದರಾಮಯ್ಯ ಬಣದ ಒತ್ತಾಯವಾಗಿದೆ. ಆದರೆ ಇದಕ್ಕೆ ಡಿ.ಕೆ.ಶಿವಕುಮಾರ್ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಮತ್ತೆ ನನೆಗುದಿಗೆ ಬಿದ್ದಿದ್ಯಾಕೆ ಗೊತ್ತಾ?
'ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸುವುದಾದರೆ ನನಗೆ ಅಧ್ಯಕ್ಷ ಪಟ್ಟವೇ ಬೇಡ' ಎಂದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ನ ಉಚ್ಛ ನಾಯಕರು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬ್ಯುಸಿ ಇರುವ ಕಾರಣ ಪ್ರಮುಖರನ್ನು ಡಿ.ಕೆ.ಶಿವಕುಮಾರ್ ಭೇಟಿ ಆಗಲು ಸಾಧ್ಯವಾಗಿಲ್ಲ. ಹಾಗಾಗಿ ಇನ್ನೂ ಕೆಲವು ದಿನ ದೆಹಲಿಯಲ್ಲಿಯೇ ಉಳಿಯಲಿರುವ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಉಚ್ಛ ನಾಯಕರನ್ನು ಭೇಟಿ ಆಗಿಯೇ ಬರಲಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್, 'ನನ್ನ ಹೆಸರು ಕೆಪಿಸಿಸಿ ಅಧ್ಯಕ್ಷಗಿರಿ ರೇಸ್ ನಲ್ಲಿ ಇಲ್ಲ, ಹಾಗೊಂದು ವೇಳೆ ಇದ್ದರೆ ಆ ವಿಷಯ ನನಗೆ ಗೊತ್ತಿಲ್ಲ' ಎಂದು ಹೇಳಿದ್ದಾರೆ.
ಆದರೆ ಮೂಲಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷಗಿರಿ ಡಿ.ಕೆ.ಶಿವಕುಮಾರ್ ಅವರಿಗೆ ಧಕ್ಕುವುದು ಬಹುತೇಕ ಪಕ್ಕಾ ಆಗಿದೆ. ಆದರೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸುವ ಸಿದ್ದರಾಮಯ್ಯ ಬೇಡಿಕೆಗೆ ಡಿ.ಕೆ.ಶಿ ತಕರಾರು ವ್ಯಕ್ತಪಡಿಸಿದ್ದಾರೆ.